ಕರ್ನಾಟಕದ ಸ್ಟಾರ್ ಆಟಗಾರ ಕೆ.ಎಲ್ ರಾಹುಲ್ ಅವರಿಗೆ ಟೀಮ್ ಇಂಡಿಯಾದಲ್ಲಿ ದೊಡ್ಡ ಜವಾಬ್ದಾರಿ ನೀಡಲಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಕನ್ನಡಿಗ ಹೊಸ ಅವತಾರದಲ್ಲಿ ಮಿಂಚಲಿದ್ದಾರೆ. ಕೆ.ಎಲ್ ಟೆಸ್ಟ್ ಸರಣಿಯಲ್ಲಿ ಉಪನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ಟೆಸ್ಟ್ ತಂಡವನ್ನು ಪ್ರಕಟಿಸಿದಾಗ, ಅಜಿಂಕ್ಯ ರಹಾನೆ ಬದಲಿಗೆ ರೋಹಿತ್ ಶರ್ಮಾ ಅವರನ್ನು ತಂಡದ ಉಪನಾಯಕರನ್ನಾಗಿ ಮಾಡಲಾಯಿತು. ಈ ಪ್ರವಾಸಕ್ಕೆ ಹೋಗುವ ಮುನ್ನ ರೋಹಿತ್ ಶರ್ಮಾ ಗಾಯಗೊಂಡು ಟೆಸ್ಟ್ ಸರಣಿಯಿಂದ ಹೊರಗುಳಿದರು. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ರೋಹಿತ್ ಶರ್ಮಾ ಬದಲಿಗೆ ಟೀಮ್ ಇಂಡಿಯಾದ ಉಪನಾಯಕರನ್ನಾಗಿ ಕೆಎಲ್ ರಾಹುಲ್ ಅವರನ್ನು ನೇಮಿಸಲಾಗಿದೆ.
ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕರಾಗಿದ್ದಾರೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿ ಡಿಸೆಂಬರ್ 26 ರಿಂದ ಆರಂಭವಾಗಲಿದೆ.
ರೋಹಿತ್ ಶರ್ಮಾ ಬದಲಿಗೆ ಟೆಸ್ಟ್ ತಂಡದ ಉಪನಾಯಕನ ಜವಾಬ್ದಾರಿಯನ್ನು ಕೆಎಲ್ ರಾಹುಲ್ ವಹಿಸಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಟ್ವೀಟ್ ಮಾಡಿದೆ. ಸ್ನಾಯು ಸೆಳೆತದಿಂದ ರೋಹಿತ್ ಶರ್ಮಾ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸುತ್ತಿಲ್ಲ ಎಂದು ಭಾರತೀಯ ಕ್ರಿಕೆಟ್ ಮಂಡಳಿ ಸೋಮವಾರ ಸ್ಪಷ್ಟಪಡಿಸಿತ್ತು. ಗಾಯದ ನಂತರ ರೋಹಿತ್ ಶರ್ಮಾ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡುವುದಿಲ್ಲ ಎಂದು ಬಿಸಿಸಿಐ ಅಧಿಕೃತವಾಗಿ ಹೇಳಿದ್ದು, ಅವರ ಸ್ಥಾನಕ್ಕೆ ಪ್ರಿಯಾಂಕ್ ಪಾಂಚಾಲ್ ತಂಡ ಸೇರಿಕೊಂಡಿದ್ದಾರೆ. ಗುಜರಾತ್ನ ಪ್ರಿಯಾಂಕ್ ಇದುವರೆಗೆ 100 ಪ್ರಥಮ ದರ್ಜೆ ಪಂದ್ಯಗಳಲ್ಲಿ 45.52 ಸರಾಸರಿಯಲ್ಲಿ 7000 ರನ್ ಗಳಿಸಿದ್ದಾರೆ ಮತ್ತು 24 ಶತಕ ಮತ್ತು 25 ಅರ್ಧ ಶತಕಗಳನ್ನು ಗಳಿಸಿದ್ದಾರೆ.
ರವೀಂದ್ರ ಜಡೇಜಾ, ಶುಭಮನ್ ಗಿಲ್ ಮತ್ತು ಅಕ್ಷರ್ ಪಟೇಲ್ ಕೂಡ ಗಾಯದ ಕಾರಣ ಈ ಟೆಸ್ಟ್ ಸರಣಿಗೆ ತಂಡದಲ್ಲಿ ಸ್ಥಾನ ಪಡೆದಿಲ್ಲ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಡಿಸೆಂಬರ್ 26 ರಿಂದ ಸೆಂಚೂರಿಯನ್ನಲ್ಲಿ ನಡೆಯಲಿದೆ. ಎರಡನೇ ಟೆಸ್ಟ್ ಜನವರಿ 3 ರಿಂದ ಜೋಹಾನ್ಸ್ಬರ್ಗ್ನಲ್ಲಿ, ಮೂರನೇ ಟೆಸ್ಟ್ ಪಂದ್ಯ 11ರಿಂದ ಕೇಪ್ ಟೌನ್ ನಲ್ಲಿ ನಡೆಯಲಿದೆ. ಬಳಿಕ ಮೂರು ಪಂದ್ಯಗಳ ಏಕದಿನ ಸರಣಿಯು ಜನವರಿ 19, 21 ಮತ್ತು 23 ರಂದು ನಡೆಯಲಿದೆ.