ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಕರ್ನಾಟಕ ಪ್ರೀ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ರಾಜಸ್ಥಾನ ತಂಡದ ವಿರುದ್ಧ ಕಾದಟ ನಡೆಸಲಿದೆ.
ಭಾನುವಾರ ಜೈಪುರನಲ್ಲಿ ನಡೆಯಲಿರುವ ಪಂದ್ಯದಲ್ಲಿ ಕರ್ನಾಟಕ ಗೆಲುವಿನ ಕನಸು ಕಾಣುತ್ತಿದೆ. ಕರ್ನಾಟಕ ಎಲೈಟ್ ಬಿ ಗುಂಪಿನ ಪಂದ್ಯದಲ್ಲಿ ಆಡಿರುವ 5 ಪಂದ್ಯಗಳಲ್ಲಿ 3 ಜಯ ಸಾಧಿಸಿದ್ದು 12 ಅಂಕಗಳೊಂದಿಗೆ ಎರಡನೇ ಸ್ಥಾನದೊಂದಿಗೆ ನಾಕೌಟ್ ಹಂತ ಪ್ರವೇಶಿಸಿತ್ತು. ರಾಜಸ್ಥಾನ ಎಲೈಟ್ ಇ ಗುಂಪಿನಲ್ಲಿ 16 ಅಂಕಗಳನ್ನು ಸೇರಿಸಿದ್ದು ಎರಡನೇ ಸ್ಥಾನ ಹೊಂದಿದೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಉಭಯ ತಂಡಗಳು ಬಲಾಢ್ಯವಾಗಿವೆ.
ಕರ್ನಾಟಕದ ಪರ ಟೂರ್ನಿಯಲ್ಲಿ ಗರಿಷ್ಠ ರನ್ ಸಾಧಕರ ಪಟ್ಟಿಯಲ್ಲಿ ಉಪನಾಯಕ ಆರ್.ಸಮರ್ಥ್ ಮೊದಲಿಗರಾಗಿ ಕಾಣಿಸಿಕೊಂಡಿದ್ದಾರೆ. ಇವರು 5 ಪಂದ್ಯಗಳಲ್ಲಿ 2 ಅರ್ಧಶತಕಗಳೊಂದಿಗೆ 243 ರನ್ ಕಲೆ ಹಾಕಿದ್ದಾರೆ. ನಾಯಕ ಮನೀಷ್ ಪಾಂಡೆ ಸಹ ಇಷ್ಟೇ ಪಂದ್ಯಗಳಲ್ಲಿ 218 ರನ್ ಕಲೆ ಹಾಕಿ ಅಬ್ಬರಿಸಿದ್ದಾರೆ. ಉಳಿದಂತೆ ಕೆ.ವಿ ಸಿದ್ಧಾರ್ಥ್ 131 ಹಾಗೂ ಆರಂಭಿಕ ರೋಹನ್ ಕದಂ 132 ರನ್ ಸೇರಿಸಿ ಭರವಸೆ ಮೂಡಿಸಿದ್ದಾರೆ. ಕರ್ನಾಟಕದ ಸ್ಟಾರ್ ಆಟಗಾರರು ರನ್ ಕಲೆ ಹಾಕಿ ಮಿಂಚುವ ಅನಿವಾರ್ಯತೆ ಇದೆ. ಅಂದಾಗ ಮಾತ್ರ ದೊಡ್ಡ ಮೊತ್ತದ ಕನಸು ನನಸಾಗುತ್ತದೆ.
ಬೌಲಿಂಗ್ ವಿಭಾಗದಲ್ಲಿ ವೇಗಿ ವಿ.ಕೌಶಿಕ್ ಹಾಗೂ ಸ್ಪಿನ್ ಬೌಲರ್ ಜೆ.ಸುಚಿತ್ ತಲಾ ಏಳು ವಿಕೆಟ್ ಗಳನ್ನು ಕಬಳಿಸಿದ್ದು ಭರವಸೆ ಮೂಡಿಸಿದ್ದಾರೆ. ಇನ್ನೋರ್ವ ಸ್ಪಿನ್ ಬೌಲರ್ ಕೆ.ಸಿ ಕಾರ್ಯಪ್ಪ ಮತ್ತು ಪ್ರವೀಣ್ ದುಬೇ ಎದುರಾಳಿಗಳಿಗೆ ಕಾಟ ನೀಡಬಲ್ಲರು.
ರಾಜಸ್ಥಾನದ ಪರ ಅಭಿಜಿತ್ ತೋಮರ್, ಮಹಿಪಾಲ್ ಲೋಮ್ರೋರ್, ಮಣೀದರ್ ಸಿಂಗ್ ರನ್ ಕಲೆ ಹಾಕಿ ತಂಡಕ್ಕೆ ನೆರವಾಗಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಶುಭಂ ಶರ್ಮಾ, ಅನಿಕೇತ್ ಚೌಧರಿ ಮತ್ತು ರವಿ ಬಿಷ್ಣೋಯಿ ಎದುರಾಳಿಗಳನ್ನು ಕಾಡಬಲ್ಲರು.