ಮಂಗಳಪುರಂ: ಉಪನಾಯಕ ರವಿಕುಮಾರ್ ಸಮರ್ಥ್ (ಅಜೇಯ 96 ಹಾಗೂ 14ಕ್ಕೆ 1) ಹಾಗೂ ಸ್ಪಿನ್ ಬೌಲರ್ ಪ್ರವೀಣ್ ದುಬೆ (29ಕ್ಕೆ 4) ಇವರುಗಳ ಭರ್ಜರಿ ಪ್ರದರ್ಶನದ ಬಲದಿಂದ ಕರ್ನಾಟಕ ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಏಳು ವಿಕೆಟ್ ಗಳಿಂದ ಮುಂಬೈ ತಂಡವನ್ನು ಮಣಿಸಿ, ಎರಡನೇ ಸ್ಥಾನ ಭದ್ರ ಪಡಿಸಿಕೊಂಡಿದೆ.
ಮೊದಲು ಬ್ಯಾಟ್ ಮಾಡಿದ ಮುಂಬೈ 50 ಓವರ್ ಗಳಲ್ಲಿ 9 ವಿಕೆಟ್ ಗೆ 208 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಕರ್ನಾಟಕ 45.3 ಓವರ್ ಗಳಲ್ಲಿ 3 ವಿಕೆಟ್ ಗೆ 211 ರನ್ ಬಾರಿಸಿ ಗೆಲುವು ದಾಖಲಿಸಿತು. ಮನೀಷ್ ಪಾಂಡೆ ಟೂರ್ನಿಯಲ್ಲಿ ದಾಖಲಿಸಿದ ಎರಡನೇ ಗೆಲುವು ಇದಾಗಿದೆ.
ಗುರಿಯನ್ನು ಹಿಂಬಾಲಿಸಿದ ಕರ್ನಾಟಕದ ಆರಂಭಿಕರಾದ ಸಮರ್ಥ್ ಹಾಗೂ ರೋಹನ್ ಕದಂ ಜೋಡಿ ತಂಡಕ್ಕೆ ಸೊಗಸಾದ ಆರಂಭ ನೀಡಿತು. ಈ ಜೋಡಿ ಮುಂಬೈ ಬೌಲರ್ ಗಳನ್ನು ಕಾಡುತ್ತಾ ರನ್ ಕಲೆ ಹಾಕುತ್ತಾ ಸಾಗಿತು. ಈ ಜೋಡಿಯನ್ನು ಬೇರ್ಪಡಿಸಲು ಮುಂಬೈ ಮಾಡಿದ ಯೋಜನೆ ಫಲಿಸಲಿಲ್ಲ. ಅಂತಿಮವಾಗಿ ಈ ಜೋಡಿ 25.2 ಓವರ್ ಗಳಲ್ಲಿ 95 ರನ್ ಸೇರಿಸಿತು. ರೋಹನ್ ಕದಂ 44 ರನ್ ಗಳಿಗೆ ಆಟ ಮುಗಿಸಿದರು.
ಕೆ.ಸಿದ್ಧಾರ್ಥ್ 17, ಮನೀಷ್ ಪಾಂಡೆ 5 ರನ್ ಕಲೆ ಹಾಕುವಲ್ಲಿ ವಿಫಲರಾದರು.
ನಾಲ್ಕನೇ ವಿಕೆಟ್ ಗೆ ಸಮರ್ಥ್ ಹಾಗೂ ಕರುಣ್ ನಾಯರ್ ಜೋಡಿ 77 ರನ್ ಗಳ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾಯಿತು. ಕರುಣ್ ನಾಯರ್ ಅಜೇಯ 39 ರನ್ ಬಾರಿಸಿ ಮಿಂಚಿದರು.
ಇನ್ನು ಆರಂಭಿಕ ರವಿಕುಮಾರ್ ಸಮರ್ಥ್ ಸೊಗಸಾದ ಬ್ಯಾಟಿಂಗ್ ನಡೆಸಿ ಅಬ್ಬರಿಸಿದರು. ಇವರು 129 ಎಸೆತಗಳಲ್ಲಿ 9 ಬೌಂಡರಿ ಸಹಾಯದಿಂದ ಅಜೇಯ 96 ರನ್ ಬಾರಿಸಿ ಆರ್ಭಟಿಸಿದರು.
ಪ್ರಶಾಂತ್ ಸಾಲೋಂಕಿ ಎರಡು ವಿಕೆಟ್ ಪಡೆದರು.
ಮುಂಬೈ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಹಾಗೂ ಅರ್ಮನ್ ಜಾಫರ್ ಮನಮೋಹಕ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಮುಂಬೈ ತಂಡಕ್ಕೆ ಭರ್ಜರಿ ಬುನಾದಿ ಹಾಕಿಕೊಟ್ಟಿತು. ಈ ಜೋಡಿ 22.3 ಓವರ್ ಗಳಲ್ಲಿ 95 ರನ್ ಸೇರಿಸಿತು. ಅರ್ಮನ್ 66 ಎಸೆತಗಳಲ್ಲಿ 6 ಬೌಂಡರಿ ನೆರವಿನಿಂದ 43 ರನ್ ಬಾರಿಸಿ ಸುಚಿತ್ ಅವರಿಗೆ ವಿಕೆಟ್ ಒಪ್ಪಿಸಿದರು.
ಆರಂಭಿಕ ಯಶಸ್ವಿ ಜೈಸ್ವಾಲ್ 91 ಎಸೆತಗಳಲ್ಲಿ 5 ಬೌಂಡರಿ ಒಳಗೊಂಡಂತೆ 61 ರನ್ ಸಿಡಿಸಿದರು.
ಸ್ಟಾರ್ ಆಟಗಾರ ಸುರ್ಯಕುಮಾರ್ ಯಾದವ್, ಶಿವಂ ದುಬೆ ರನ್ ಕಲೆ ಹಾಕುವಲ್ಲಿ ವಿಫಲರಾದರು.
ಮಧ್ಯಮ ಕ್ರಮಾಂಕದ ಹಾರ್ದಿಕ್ ತೋಮರ್ ಅಜೇಯ 46 ರನ್ ಸಿಡಿಸಿದರು.
ಕರ್ನಾಟಕದ ರ ಪ್ರವೀಣ್ ದುಬೆ 4 ವಿಕೆಟ್ ಕಬಳಿಸಿದರು. ಉಳಿದಂತೆ ವಾಸುಕಿ ಕೌಶಿಕ್, ಕರಿಯಪ್ಪ, ಜೆ.ಸುಚಿತ್, ಸಮರ್ಥ್ ತಲಾ ಒಂದು ವಿಕೆಟ್ ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್
ಮುಂಬೈ 50 ಓವರ್ ಗಳಲ್ಲಿ 9 ವಿಕೆಟ್ ಗೆ 208
ಕರ್ನಾಟಕ 45.3 ಓವರ್ ಗಳಲ್ಲಿ 3 ವಿಕೆಟ್ ಗೆ 211