ಕರ್ನಾಟಕ ಮತ್ತು ತಮಿಳುನಾಡು ನಡುವಿನ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಫೈನಲ್ ಪಂದ್ಯ ರೋಚಕತೆಯನ ಎಲ್ಲೆ ಮೀರಿತ್ತು. ಮೊದಲೇ ಕಡುಬದ್ಧ ವೈರಿಗಳು. ಅದರ ಜೊತೆ ಕೊನೆಯ ಎಸೆತದಲ್ಲಿ ಗೆಲ್ಲಲು 5 ರನ್ಗಳು ಬೇಕಿತ್ತು. ಕೊನೆಯ ಎಸೆತವನ್ನು ಸಿಕ್ಸರ್ಗೆ ಅಟ್ಟಿದ ಶಾರೂಖ್ ಖಾನ್ ತಮಿಳುನಾಡು ತಂಡಕ್ಕೆ ಟಿ20 ಟ್ರೋಫಿ ಗೆದ್ದುಕೊಟ್ಟರು. ಕರ್ನಾಟಕ ನಿರಾಸೆ ಅನುಭವಿಸಿತು.
ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ ವಿಕೆಟ್ ಮೇಲೆ ವಿಕೆಟ್ ಕಳೆದುಕೊಂಡಿತು. ರೋಹನ್ ಕದಂ (0), ಕರುಣ್ ನಾಯರ್ (18) ಮತ್ತು ಮನೀಷ್ ಪಾಂಡೆ (13) 32 ರನ್ಗಳಾಗುವಷ್ಟರಲ್ಲಿ ಔಟಾಗಿದ್ದರು. ಸಂಕಷ್ಟದಲ್ಲಿದ್ದ ಕರ್ನಾಟಕಕ್ಕೆ ಶರತ್ ಮತ್ತು ಅಭಿನವ್ ಮನೋಹರ್ ಆಸರೆ ಆದರು. ಶರತ್ 16 ರನ್ಗಳಿಸಿ ಔಟಾದರೆ ಮನೋಹರ್ 46 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಪ್ರವೀಣ್ ದುಬೆ (33 ರನ್) ಮತ್ತು ಸುಚಿತ್ 18 ರನ್ಗಳಿಸಿದ್ದರಿಂದ 20 ಓವರುಗಳಲ್ಲಿ ಕರ್ನಾಟಕ 7 ವಿಕೆಟ್ ಕಳೆದುಕೊಂಡು 151 ರನ್ಗಳಿಸಿತ್ತು.
ಚೇಸಿಂಗ್ ಆರಂಭಿಸಿದ ತಮಿಳುನಾಡಿಗೆ ಹರಿ ನಿಶಾಂತ್ ಮತ್ತು ನಾರಾಯಣ್ ಜಗದೀಶ್ ಸಾಧಾರಣಾ ಆರಂಭ ತಂದುಕೊಟ್ಟರು. ನಿಶಾಂತ್ 23 ರನ್ಗಳಿಸಿ ರನೌಟ್ ಬಲಿಯಲ್ಲಿ ಬಿದ್ದರು. ಸಾಯಿ ಸುದರ್ಶನ್ 9 ರನ್ಗಳಿಗೆ ವಿಕೆಟ್ ಒಪ್ಪಿಸಿದರು.
ಜಗದೀಶನ್ (41) ಹಾಗೂ ವಿಜಯ್ ಶಂಕರ್ (18) ಉತ್ತಮ ಆಟ ಆಡಿದರೂ ಅದು ನಿಧಾನಗತಿಯಾಗಿತ್ತು. ಈ ಮಧ್ಯೆ ಸಂಜಯ್ ಯಾದವ್ ಮತ್ತು ಮೊಹಮ್ಮದ್ ಬೇಗನೆ ಔಟಾದರು. ಕೊನೆಯ ಓವರ್ನಲ್ಲಿ ತಮಿಳುನಾಡು ಗೆಲುವಿನ 15 ರನ್ಗಳ ಅವಶ್ಯಕತೆ ಇತ್ತು. ಕೊನೆಯ ಎಸೆತದಲ್ಲಿ ತಮಿಳುನಾಡು ಗೆಲುವಿಗೆ 5 ರನ್ಗಳು ಬೇಕಾಗಿದ್ದವು. ಆದರೆ ಶಾರೂಖ್ ಖಾನ್ ಪ್ರತೀಕ್ ಜೈನ್ ಎಸೆತವನ್ನು ಸಿಕ್ಸರ್ಗೆ ಅಟ್ಟಿ ತಮಿಳುನಾಡಿಗೆ ಜಯ ತಂದುಕೊಟ್ಟರು. ಶಾರೂಖ್ ಖಾನ್ 15 ಎಸೆತಗಳಲ್ಲಿ ಅಜೇಯ 33 ರನ್ಗಳಿಸಿ ಗೆಲುವಿನ ಹೀರೋ ಆದರು.