ಶಾರೂಕ್ ಖಾನ್ ಬ್ಯಾಟಿಂಗ್ ಶಕ್ತಿಯ ಹಿಂದೆ ಧೋನಿಯ ಮಹಿಮೆ..!
ಸದ್ಯ ಹೈಪ್ ನಲ್ಲಿರುವ ತಮಿಳುನಾಡಿನ ಕ್ರಿಕೆಟಿಗ. ಸೈಯ್ಯದ್ ಮಷ್ತಾಕ್ ಆಲಿ ಟಿ-20 ಕ್ರಿಕೆಟ್ ಟೂರ್ನಿಯ ಫೈನಲ್ ನಲ್ಲಿ ಕರ್ನಾಟಕದ ಕೈಯಿಂದ ಗೆಲುವನ್ನು ಕಸಿದುಕೊಂಡ ತಮಿಳುನಾಡಿನ ಆಟಗಾರ.
ಹೌದು, ಕರ್ನಾಟಕದ ಪ್ರತೀಕ್ ಜೈನ್ ಅವರ ಕೊನೆಯ ಎಸೆತವನ್ನು ಸಿಕ್ಸರ್ ಗಟ್ಟಿ ಪ್ರತಿಷ್ಠಿತ ಸೈಯ್ಯದ್ ಮುಷ್ತಾಕ್ ಆಲಿ ಟಿ-20 ಟ್ರೋಫಿಯನ್ನು ತಮಿಳುನಾಡು ಮೂರನೇ ಬಾರಿ ಗೆಲ್ಲುವಂತೆ ಮಾಡಿದ್ರು ಶಾರೂಕ್ ಖಾನ್.
ಶಾರೂಕ್ ಖಾನ್ ಪವರ್ ಹಿಟ್ಟಿಂಗ್ ಆಟವನ್ನು ಈಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳು ತಲೈವಾ ಮಹೇಂದ್ರ ಸಿಂಗ್ ಧೋನಿ ಅವರ ಬ್ಯಾಟಿಂಗ್ ಶೈಲಿಗೆ ಹೋಲಿಕೆ ಮಾಡುತ್ತಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ವಿಶ್ವ ಕ್ರಿಕೆಟ್ ನ ಗ್ರೇಟ್ ಫಿನಿಶರ್. ಪಂದ್ಯದ ಕೊನೆಯ ತನಕ ಕುತೂಹಲವನ್ನು ಹೆಚ್ಚಿಸುತ್ತಾ ಕೊನೆ ಗಳಿಗೆಯಲ್ಲಿ ಪಂದ್ಯವನ್ನು ಕೈ ವಶ ಮಾಡಿಕೊಳ್ಳುವುದು ಧೋನಿಯ ಸ್ಪೇಷಾಲಿಟಿ.
ಧೋನಿ ಇದೇ ರೀತಿ ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಅಲ್ಲದೆ ಶಾರೂಕ್ ಖಾನ್ ಅವರ ಏಕಾಂಗಿ ಹೋರಾಟ ಮತ್ತು ಕೊನೆಯ ಎಸೆತದಲ್ಲಿ ಸಿಕ್ಸರ್ ಗಟ್ಟಿರುವುದನ್ನು ಸ್ವತಃ ಧೋನಿಯೇ ಟಿವಿಯಲ್ಲಿ ನೋಡಿದ್ದಾರೆ.
ಅಂದ ಹಾಗೇ ಶಾರೂಕ್ ಖಾನ್ ಅವರ ಈ ರೀತಿಯ ಬ್ಯಾಟಿಂಗ್ ವೈಖರಿಗೆ ಮಹೇಂದ್ರ ಸಿಂಗ್ ಧೋನಿ ಕೂಡ ಕಾರಣೀಕರ್ತರು.
ಹೌದು, ಐಪಿಎಲ್ ನಲ್ಲಿ ಶಾರೂಕ್ ಖಾನ್ ಅವರು ಪಂಜಾಬ್ ಕಿಂಗ್ಸ್ ತಂಡದ ಪರ ಆಡುತ್ತಿದ್ದಾರೆ.
ಈ ವೇಳೆ ಶಾರೂಕ್ ಖಾನ್ ಅವರು ಧೋನಿ ಅವರ ಬಳಿ ಸಲಹೆ, ಮಾರ್ಗದರ್ಶನಗಳನ್ನು ಪಡೆದುಕೊಂಡಿದ್ದರು. ಐಪಿಎಲ್ ನಲ್ಲಿ ಹಿರಿಯ ಆಟಗಾರರು ಯುವ ಆಟಗಾರರಿಗೆ ಸಲಹೆ ಮಾರ್ಗದರ್ಶನಗಳನ್ನು ನೀಡುತ್ತಿರುವುದು ಪದ್ದತಿಯಾಗಿಬಿಟ್ಟಿದೆ.
ಅದೇ ರೀತಿ ಶಾರೂಕ್ ಖಾನ್ ಗೆ ಧೋನಿ ನೀಡಿರುವ ಟಿಪ್ಸ್ ಗಳಿಂದ ತಮ್ಮ ಬ್ಯಾಟಿಂಗ್ ನಲ್ಲಿ ಸುಧಾರಣೆ ತರಲು ಸಹಾಯವಾಗಿದೆ. ಅಲ್ಲದೆ ಧೋನಿಯ ರೀತಿಯಲ್ಲೇ ಮ್ಯಾಚ್ ಫಿನಿಶ್ ಮಾಡುವ ಧೈರ್ಯವನ್ನು ಮೈಗೂಡಿಸಿಕೊಳ್ಳುತ್ತಿದ್ದಾರೆ.