ಬೌಲರ್ಗಳ ಸಾಂಘಿಕ ಪ್ರದರ್ಶನದಿಂದ ರೈಲ್ವೇಸ್ ತಂಡವನ್ನು ಮೊದಲ ಇನ್ನಿಂಗ್ಸ್ನಲ್ಲಿ 426 ರನ್ಗಳಿಗೆ ಕಟ್ಟಿಹಾಕಿರುವ ಕರ್ನಾಟಕ, ರಣಜಿ ಟ್ರೋಫಿ ಪಂದ್ಯಾವಳಿಯ ಎಲೈಟ್ ʼಸಿʼ ಗುಂಪಿನ ಪಂದ್ಯದಲ್ಲಿ ಇನ್ನಿಂಗ್ಸ್ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಚೆನ್ನೈನ ಇಂಡಿಯಾ ಸಿಮೆಂಟ್ ಲಿಮಿಟೆಡ್ ಗುರುನಾನಕ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ 3ನೇ ದಿನದಾಟದಲ್ಲಿ ಕರ್ನಾಟಕದ ಆಟಗಾರರು ಅದ್ಭುತ ಪ್ರದರ್ಶನ ನೀಡಿದರು. ಸಾಂಘಿಕ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ಕರ್ನಾಟಕದ ಬೌಲರ್ಗಳು, ಅರೀಂದಮ್ ಘೋಷ್(105) ಅವರ ಶತಕದ ನಡುವೆಯೂ ರೈಲ್ವೇಸ್ ತಂಡವನ್ನು ಮೊದಲ ಇನ್ನಿಂಗ್ಸ್ನಲ್ಲಿ 426 ರನ್ಗಳಿಗೆ ಕಟ್ಟಿಹಾಕುವ ಮೂಲಕ 55 ರನ್ಗಳ ಮೊದಲ ಇನ್ನಿಂಗ್ಸ್ ಪಡೆಯಿತು. ಬಳಿಕ ದ್ವಿತೀಯ ಇನ್ನಿಂಗ್ಸ್ ಆರಂಭಿಸಿರುವ ಕರ್ನಾಟಕ, 1 ವಿಕೆಟ್ ನಷ್ಟಕ್ಕೆ 63 ರನ್ಗಳಿಸಿದ್ದು, 118 ರನ್ಗಳ ಲೀಡ್ ಪಡೆದಿದೆ.
ಇದಕ್ಕೂ ಮುನ್ನ ಎರಡನೇ ದಿನದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 213 ರನ್ಗಳಿಂದ 3ನೇ ದಿನದಾಟ ಆರಂಭಿಸಿದ ರೈಲ್ವೈಸ್ ಪರ ಅರೀಂದಮ್ ಘೋಷ್(105) ಹಾಗೂ ಮೊಹಮ್ಮದ್ ಸೈಫ್(84) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಕರ್ನಾಟಕದ ಬೌಲರ್ಗಳ ಎದುರು ಪ್ರಾಬಲ್ಯ ಮೆರೆದು ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಘೋಷ್, ಆಕರ್ಷಕ ಶತಕ ಸಿಡಿಸಿ ಮಿಂಚಿದರು. ಇವರಿಗೆ ಉತ್ತಮ ಸಾಥ್ ನೀಡಿದ ಮೊಹಮ್ಮದ್ ಸೈಫ್, 84 ರನ್ಗಳ ಉಪಯುಕ್ತ ಕಾಣಿಕೆ ನೀಡಿ ತಂಡಕ್ಕೆ ನೆರವಾದರು. ಆದರೆ ಈ ಇಬ್ಬರು ಪ್ರಮುಖ ಹಂತದಲ್ಲಿ ವಿಕೆಟ್ ಕಳೆದುಕೊಂಡಿದ್ದು, ರೈಲ್ವೇಸ್ ತಂಡದ ಹಿನ್ನಡೆಗೆ ಕಾರಣವಾಯಿತು.
ನಂತರ ಬಂದ ಉಪೇಂದ್ರ ಯಾದವ್(12) ಹಾಗೂ ನಾಯಕ ಕರಣ್ ಶರ್ಮ(6) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದ ಯುವರಾಜ್ ಸಿಂಗ್(48) ರನ್ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸುವ ಪ್ರಯತ್ನ ಮಾಡಿದರು. ಉಳಿದಂತೆ ಅವಿನಾಶ್ ಯಾದವ್(22), ಅಮಿತ್ ಮಿಶ್ರ(4) ಹಾಗೂ ಹಿಮಾಂಶು ಸಾಂಗ್ವಾನ್(2) ನಿರೀಕ್ಷಿತ ಆಟವಾಡುವಲ್ಲಿ ವಿಫಲರಾದರು. ಪರಿಣಾಮ ರೈಲ್ವೇಸ್ 426 ರನ್ಗಳಿಗೆ ಆಲೌಟ್ ಆಯಿತು. ಕರ್ನಾಟಕದ ಪರ ಕೃಷ್ಣಪ್ಪ ಗೌತಮ್ 4 ವಿಕೆಟ್ ಪಡೆದು ಮಿಂಚಿದರೆ, ರೋನಿತ್ ಮೋರೆ 3, ವಿದ್ಯಾಧರ್ ಪಾಟಿಲ್ 2 ಹಾಗೂ ಶ್ರೇಯಸ್ ಗೋಪಾಲ್ 1 ವಿಕೆಟ್ ಪಡೆದರು.
ಇದಾದ ನಂತರ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕನಾಗಿ ಕಣಕ್ಕಿಳಿದ ದೇವದತ್ ಪಡಿಕಲ್(4) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. ಆದರೆ ನಂತರ 2ನೇ ವಿಕೆಟ್ಗೆ ಜೊತೆಯಾದ ಮಯಂಕ್ ಅಗರ್ವಾಲ್(39*) ಹಾಗೂ ಆರ್. ಸಮರ್ಥ್(20*) ಮುರಿಯದ 52 ರನ್ಗಳ ಜೊತೆಯಾಟದೊಂದಿಗೆ 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.