15ನೇ ಆವೃತ್ತಿಯ ಐಪಿಎಲ್ನಲ್ಲಿ ಶುಕ್ರವಾರ ʼಮಸಲ್ ಮ್ಯಾನ್ʼ ಆಂಡ್ರೆ ರಸೆಲ್ ಆರ್ಭಟ ಜೋರಾಗಿತ್ತು. ಕಳೆದ ಆವೃತ್ತಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಬ್ಬರಿಸಿದ ಕೆರಿಬಿಯನ್ ಆಟಗಾರ 2022ರ ಆವೃತ್ತಿಯಲ್ಲಿ ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ಖದರ್ ತೋರಿಸೋ ಎಚ್ಚರಿಕೆ ನೀಡಿದ್ದಾರೆ.
ಮುಂಬೈನ ವಾಂಖೆಡೆ ಅಂಗಳದಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆಂಡ್ರೆ ರಸೆಲ್ ಪರಾಕ್ರಮ ತೋರಿದರು. ಎದುರಾಳಿ ತಂಡದ ಸುಲಭದ ಟಾರ್ಗೆಟ್ ಬೆನ್ನತ್ತಿದ ಕೆಕೆಆರ್ ಪರ ಸ್ಪೋಟಕ ಆಟವಾಡಿದ ರಸೆಲ್, ಸಿಕ್ಸರ್ಗಳ ಮಳೆ ಸುರಿಸಿದರು. ಕೇವಲ 30 ಎಸೆತಗಳಲ್ಲಿ 2 ಬೌಂಡರಿ ಹಾಗೂ 8 ಸಿಕ್ಸರ್ ನೆರವಿನಿಂದ ಅಜೇಯ 70 ರನ್ಗಳಿಸಿದ ವಿಂಡೀಸ್ ಆಲ್ರೌಂಡರ್, ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ 6 ವಿಕೆಟ್ಗಳ ಭರ್ಜರಿ ಗೆಲುವು ತಂದುಕೊಟ್ಟರು.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ವೈಫಲ್ಯದಿಂದಾಗಿ 18.2 ಓವರ್ಗಳಲ್ಲಿ 137 ರನ್ಗಳಿಗೆ ಆಲೌಟ್ ಆಯಿತು. ಈ ಸವಾಲು ಎದುರಿಸಿದ ಕೆಕೆಆರ್ 14.3 ಓವರ್ಗಳಲ್ಲಿ 4 ವಿಕೆಟ್ಗೆ 141 ರನ್ಗಳಿಸಿ ಗೆದ್ದು ಬೀಗಿತು. ಆ ಮೂಲಕ ಟೂರ್ನಿಯಲ್ಲಿ 2ನೇ ಗೆಲುವು ಸಾಧಿಸಿದ ಕೆಕೆಆರ್, ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.
ಪಂಜಾಬ್ ನೀಡಿದ ಟಾರ್ಗೆಟ್ ಬೆನ್ನತ್ತಿದ ಕೆಕೆಆರ್ ತಂಡಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ತಂಡದ ಪರ ಇನ್ನಿಂಗ್ಸ್ ಆರಂಭಿಸಿದ ಅಜಿಂಕ್ಯಾ ರಹಾನೆ(12), ವೆಂಕಟೇಶ್ ಅಯ್ಯರ್(3) ಬಹುಬೇಗನೆ ನಿರ್ಗಮಿಸಿದರು. ನಾಯಕ ಶ್ರೇಯಸ್ ಅಯ್ಯರ್(26) ರನ್ಗಳಿಸಿದರೆ, ನಿತೀಶ್ ರಾಣ(0) ಮತ್ತೊಮ್ಮೆ ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭವಿಸಿದರು. ಆದರೆ 5ನೇ ವಿಕೆಟ್ಗೆ ಜೊತೆಯಾದ ಆಂಡ್ರೆ ರಸೆಲ್(70*) ಹಾಗೂ ಸ್ಯಾಮ್ ಬಿಲ್ಲಿಂಗ್ಸ್(24*) ಪಂಜಾಬ್ ಬೌಲಿಂಗ್ ದಾಳಿಯನ್ನ ಧೂಳಿಪಟ ಮಾಡಿದರು. 5ನೇ ವಿಕೆಟ್ಗೆ 90* ರನ್ ಜೊತೆಯಾಟವಾಡಿದ ಈ ಜೋಡಿ ತಂಡಕ್ಕೆ ಸುಲಭದ ಗೆಲುವು ತಂದುಕೊಟ್ಟರು.
ಉಮೇಶ್ ಯಾದವ್ ಕಮಾಲ್:
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡಕ್ಕೆ ವೇಗಿ ಉಮೇಶ್ ಯಾದವ್ ಕಂಟಕವಾದರು. ಪ್ರಸಕ್ತ ಸೀಸನ್ನಲ್ಲಿ ಅದ್ಭುತ ಫಾರ್ಮ್ನಲ್ಲಿರುವ ಉಮೇಶ್ ಯಾದವ್ (23/4) ಪಂಜಾಬ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಅಲ್ಲದೇ ಮತ್ತೊಂದು ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ ಟೀಂ ಇಂಡಿಯಾ ವೇಗಿ, ಪ್ರಸಕ್ತ ಸೀಸನ್ನಲ್ಲಿ ಆಡಿರುವ ಮೂರು ಪಂದ್ಯದಲ್ಲಿ 2ನೇ ಬಾರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಉಳಿದಂತೆ ಟಿಮ್ ಸೌತಿ 2, ಶಿವಂ ಮಾವಿ, ಸುನೀಲ್ ನರೈನ್ ಹಾಗೂ ಆಂಡ್ರೆ ರಸೆಲ್ ತಲಾ 1 ವಿಕೆಟ್ ಪಡೆದರು.
ಪಂಜಾಬ್ ಬ್ಯಾಟಿಂಗ್ ವೈಫಲ್ಯ:
ಬೃಹತ್ ಮೊತ್ತ ಕಲೆಹಾಕುವ ನಿರೀಕ್ಷೆಯೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ವೈಫಲ್ಯ ಕಂಡಿತು. ನಾಯಕ ಮಯಾಂಕ್ ಅಗರ್ವಾಲ್(1) ಮೊದಲ ಓವರ್ನಲ್ಲೇ ವಿಕೆಟ್ ಒಪ್ಪಿಸಿ ಹೊರ ನಡೆದರು. ನಂತರ ಕಣಕ್ಕಿಳಿದ ಬನುಕ ರಾಜಪಕ್ಸ 31 ರನ್ (9 ಬಾಲ್, 3 ಬೌಂಡರಿ, 3 ಸಿಕ್ಸರ್) ಅಬ್ಬರಿಸಿ ವಿಕೆಟ್ ಒಪ್ಪಿಸಿದರು. ಉಳಿದಂತೆ ಶಿಖರ್ ಧವನ್(16), ಲಿಯಾಮ್ ಲಿವಿಂಗ್ಸ್ಟೋನ್(19), ರಾಜ್ ಬಾವಾ(11), ಶಾರೂಕ್ ಖಾನ್(0), ಹರ್ಪ್ರೀತ್ ಬ್ರಾರ್(14), ರಾಹುಲ್ ಚಹರ್(0) ಜವಾಬ್ದಾರಿಯ ಆಟವಾಡಲಿಲ್ಲ. ಆದರೆ ಇನ್ನಿಂಗ್ಸ್ ಕೊನೆಯಲ್ಲಿ ಬಿರುಸಿನ ಆಟವಾಡಿದ ಕಗೀಸೋ ರಬಾಡ 25 ರನ್ (16 ಬಾಲ್, 4 ಬೌಂಡರಿ, 1 ಸಿಕ್ಸರ್) ಉಪಯುಕ್ತ ಕಾಣಿಕೆ ನೀಡಿದರು.