ಆರ್ಸಿಬಿ… ಆರ್ಸಿಬಿ… ಆರ್ಸಿಬಿ… ಇದು ಕೊಲ್ಕತ್ತಾದ ಈಡನ್ ಗಾರ್ಡನ್ ಅಂಗಳದಲ್ಲಿ ಕೇಳಿ ಬಂದ ಹರ್ಷೋದ್ಘಾರ… ಕಿಕ್ಕಿರಿದು ತುಂಬಿದ್ದ ಮೈದಾನದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆದ್ದು, ಅಭಿಮಾನಿಗಳ ಕಿಕ್ ಹೆಚ್ಚಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು…
ಹೌದು, ಐಪಿಎಲ್ 15ನೇ ಆವೃತ್ತಿಯ ಎಲಿಮಿನೇಟರ್ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿತು. ಸಂಘಟಿತ ಪ್ರದರ್ಶನದ ಮೂಲಕ ಲಕ್ನೋ ವಿರುದ್ಧ 14 ರನ್ಗಳ ಬೊಂಬಾಟ್ ಗೆಲುವು ಸಾಧಿಸಿರು ಆರ್ಸಿಬಿ ಇದೀಗ ಪ್ರಶಸ್ತಿ ಗೆಲುವಿಗೆ ಎರಡೇ ಹೆಜ್ಜೆ ದೂರವಿದೆ. ರಾಯಲ್ ಚಾಲೆಂಜರ್ಸ್ ಆಟಗಾರರ ಈ ಪ್ರದರ್ಶನ ಇದೀಗ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳ ಸಂಭ್ರಮವನ್ನ ಇಮ್ಮಡಿಗೊಳಿಸಿದೆ.
ಐತಿಹಾಸಿಕ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಅದ್ಭುತ ಪಂದ್ಯದಲ್ಲಿ ಆರ್ಸಿಬಿ ಆಟಗಾರರು ‘ರಾಯಲ್’ ಪ್ರದರ್ಶನ ನೀಡಿದರು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಬೆಂಗಳೂರು, 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 206 ರನ್ಗಳ ಅದ್ಭುತ ಮೊತ್ತ ಕಲೆಹಾಕಿತು. ಈ ಟಾರ್ಗೆಟ್ ಬೆನ್ನತ್ತಿದ ಲಕ್ನೋ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 193 ರನ್ಗಳಿಸುವ ಮೂಲಕ ಸೋಲೊಪ್ಪಿಕೊಂಡಿತು. ಆ ಮೂಲಕ 14 ರನ್ಗಳ ಜಯಭೇರಿ ಬಾರಿಸಿರುವ ಆರ್ಸಿಬಿ, ಇದೀಗ ಎರಡನೇ ಎಲಿಮಿನೇಟರ್ ಪಂದ್ಯಕ್ಕೆ ಲಗ್ಗೆಯಿಟ್ಟಿದೆ. ಮೇ 27ರಂದು ನಡೆಯುವ ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿ ನಡೆಸಲಿವೆ.
ಪಟಿದಾರ್ ಭರ್ಜರಿ ಶತಕ:
ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಇನ್ನಿಂಗ್ಸ್ ಆರಂಭದಲ್ಲೇ ನಾಯಕ ಫಾಫ್ ಡುಪ್ಲೆಸ್ಸಿ(0) ವಿಕೆಟ್ ಕಳೆದುಕೊಂಡು ಆಘಾತ ಕಂಡಿತು. ನಂತರ ಒಂದಾದ ವಿರಾಟ್ ಕೊಹ್ಲಿ(25) ಹಾಗೂ ರಜತ್ ಪಟಿದಾರ್(112*) 2ನೇ ವಿಕೆಟ್ ಜೊತೆಯಾಟದಲ್ಲಿ 64 ರನ್ಗಳಿಸಿ ಚೇತರಿಕೆ ನೀಡಿದರು. ಬಳಿಕ ಬಂದ ಗ್ಲೆನ್ ಮ್ಯಾಕ್ಸ್ವೆಲ್(9) ಹಾಗೂ ಮಹಿಪಾಲ್ ಲೋಮ್ರೋರ್(14) ನಿರೀಕ್ಷಿತ ಆಟವಾಡಲಿಲ್ಲ. ಆದರೆ 5ನೇ ವಿಕೆಟ್ಗೆ ಜೊತೆಯಾದ ಪಟಿದಾರ್ ಹಾಗೂ ದಿನೇಶ್ ಕಾರ್ತಿಕ್ 37*(23) ಪಂದ್ಯದ ದಿಕ್ಕನ್ನೇ ಬದಲಿಸಿದರು. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿ ಲಕ್ನೋ ಬೌಲಿಂಗ್ ದಾಳಿಗೆ ದಿಟ್ಟಪ್ರತ್ಯುತ್ತರ ನೀಡಿದರು. ಪ್ರಮುಖವಾಗಿ ಆರಂಭದಿಂದಲೂ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಪಟಿದಾರ್, ಕೇವಲ 54 ಬಾಲ್ಗಳಲ್ಲಿ 12 ಬೌಂಡರಿ, 7 ಸಿಕ್ಸ್ ಮೂಲಕ ಐಪಿಎಲ್ ಟೂರ್ನಿಯ ಚೊಚ್ಚಲ ಶತಕ(112* ರನ್) ಸಿಡಿಸಿ ಅಬ್ಬರಿಸಿದರು. ಇವರಿಬ್ಬರು 5ನೇ ವಿಕೆಟ್ ಜೊತೆಯಾಟದಲ್ಲಿ 91 ರನ್ ಕಲೆಹಾಕಿದ ಪರಿಣಾಮ, ಆರ್ಸಿಬಿ 20 ಓವರ್ಗಳಲ್ಲಿ 206 ರನ್ಗಳಿಸಿತು.
ರಾಹುಲ್ ವ್ಯರ್ಥ ಹೋರಾಟ:
ರಾಯಲ್ ಚಾಲೆಂಜರ್ಸ್ ಬೆಂಗಳೂರು ನೀಡಿದ 207 ರನ್ಗಳ ಕಠಿಣ ಟಾರ್ಗೆಟ್ ಬೆನ್ನತ್ತಿದ ಲಕ್ನೋ ಆರಂಭದಲ್ಲೇ ಕ್ವಿಂಟನ್ ಡಿಕಾಕ್(6) ವಿಕೆಟ್ ಕಳೆದುಕೊಂಡಿತು. ನಂತರ ಬಂದ ಮನನ್ ವೋಹ್ರ(19) ಬಿರುಸಿನ ಆಟವಾಡಿ ಹೊರನಡೆದರು. ಈ ವೇಳೆ ಜೊತೆಯಾದ ಕೆ.ಎಲ್.ರಾಹುಲ್(79) ಹಾಗೂ ದೀಪಕ್ ಹೂಡ(45) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. 3ನೇ ವಿಕೆಟ್ಗೆ 96 ರನ್ ಕಲೆಹಾಕಿದ ಈ ಜೋಡಿ, ತಂಡದ ಗೆಲುವಿನ ಆಸೆ ಜೀವಂತ ಇರಿಸಿದರು. ಸ್ಪೋಟಕ ಆಟವಾಡಿದ ಹೂಡ ನಿರ್ಣಾಯಕ ಹಂತದಲ್ಲಿ ವಿಕೆಟ್ ಕೈಚಲ್ಲಿದರೆ, ನಂತರ ಬಂದ ಮಾರ್ಕಸ್ ಸ್ಟಾಯ್ನಿಸ್(9) ತಂಡಕ್ಕೆ ಆಸರೆಯಾಗಲಿಲ್ಲ. ಆದರೆ ತಂಡದ ಗೆಲುವಿಗಾಗಿ ಏಕಾಂಗಿ ಹೋರಾಟ ನಡೆಸಿದ ರಾಹುಲ್, 19ನೇ ಓವರ್ನಲ್ಲಿ ವಿಕೆಟ್ ಒಪ್ಪಿಸುವ ಮೂಲಕ ತಂಡದ ಹೋರಾಟ ಕೂಡ ಅಂತ್ಯಗೊಂಡಿತು. ಕೃನಾಲ್ ಪಾಂಡ್ಯ(0) ನಾಯಕನ ಬೆನ್ನಲ್ಲೇ ಪೆವಿಲಿಯನ್ ಸೇರಿದರೆ, ಎವಿನ್ ಲೆವಿಸ್(2*) ಹಾಗೂ ಚಮೀರ(11*) ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಪರಿಣಾಮ ಲಕ್ನೋ 20 ಓವರ್ಗಳಲ್ಲಿ 193 ರನ್ಗಳಿಸಲಷ್ಟೇ ಶಕ್ತವಾಯಿತು. ಆರ್ಸಿಬಿ ಪರ ಹೇಜ಼ಲ್ವುಡ್ 3 ವಿಕೆಟ್ ಪಡೆದು ಮಿಂಚಿದರೆ. ಹಸರಂಗ, ಸಿರಾಜ್ ಹಾಗೂ ಹರ್ಷಲ್ ಪಟೇಲ್ ತಲಾ 1 ವಿಕೆಟ್ ಪಡೆದರು.