ಟೀಂ ಇಂಡಿಯಾದ ಪ್ರಮುಖ ವೇಗದ ಬೌಲರ್ ಉಮೇಶ್ ಯಾದವ್, 15ನೇ ಆವೃತ್ತಿಯ ಐಪಿಎಲ್ನ ಮೊದಲ ಪಂದ್ಯದಲ್ಲೇ ಅದ್ಭುತ ಪ್ರದರ್ಶನ ನೀಡುವ ಮೂಲಕ ಸ್ಟ್ರಾಂಗ್ ಕಮ್ ಬ್ಯಾಕ್ ಮಾಡುವ ಸುಳಿವುಕೊಟ್ಟಿದ್ದಾರೆ.
ಮುಂಬೈನಲ್ಲಿ ನಡೆದ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ ಉಮೇಶ್ ಯಾದವ್, ಉತ್ತಮ ಲೈನ್ ಅಂಡ್ ಲೆಂಥ್ನಲ್ಲಿ ಬೌಲಿಂಗ್ ಮಾಡಿದರು. 4 ಓವರ್ಗಳಲ್ಲಿ 20 ರನ್ಗಳಿಗೆ 2 ಪ್ರಮುಖ ವಿಕೆಟ್ ಪಡೆದು ಮಿಂಚಿದ್ದ ಯಾದವ್, ಕೆಕೆಆರ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುವ ಜೊತೆಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಅಲ್ಲದೇ ಐಪಿಎಲ್ನಲ್ಲಿ ತಮ್ಮ 9ನೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಉಮೇಶ್ ಯಾದವ್, ವೇಗದ ಬೌಲರ್ಗಳ ಪರ ಹೆಚ್ಚು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರಾ ಎನಿಸಿದರು.
ಭಾರತ ತಂಡದ ಪ್ರಮುಖ ವೇಗದ ಬೌಲರ್ ಆಗಿರುವ ಉಮೇಶ್ ಯಾದವ್, ಸ್ಥಿರ ಪ್ರದರ್ಶನ ನೀಡುವಲ್ಲಿ ವೈಫಲ್ಯ ಕಂಡಿದ್ದಾರೆ. ಹೀಗಾಗಿ ಆಗೊಮ್ಮೆ-ಈಗೊಮ್ಮೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಉಮೇಶ್ ಯಾದವ್, ಏಕದಿನ ಮತ್ತು ಟಿ20 ತಂಡಕ್ಕಿಂತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದೇ ಹೆಚ್ಚು. ಆದರೆ ಐಪಿಎಲ್ನ ಮೊದಲ ಪಂದ್ಯದಲ್ಲೇ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿರುವ ವೇಗದ ಬೌಲರ್, ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ರೇಸ್ನಲ್ಲಿರುವ ಆಟಗಾರರ ಸಾಲಿನಲ್ಲಿ ತಾವು ಇರುವ ಮುನ್ಸೂಚನೆ ನೀಡಿದ್ದಾರೆ.
ಒಂದೇ ಪಂದ್ಯ, ನಾಲ್ಕು ಅವಾರ್ಡ್
ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ನೀಡಿದ ಉತ್ತಮ ಪ್ರದರ್ಶನದಿಂದ ಉಮೇಶ್ ಯಾದವ್, ಮೊದಲ ಪಂದ್ಯದಲ್ಲೇ ನಾಲ್ಕು ಅವಾರ್ಡ್ ಪಡೆದು ಮಿಂಚಿದರು. ಕೆಕೆಆರ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಉಮೇಶ್ ಯಾದವ್, ಕ್ರೆಡ್ ಪವರ್ ಪ್ಲೇಯರ್ ಆಫ್ ದಿ ಮ್ಯಾಚ್, ಅಪ್ಸ್ಸ್ಟಾಕ್ ಮೋಸ್ಟ್ ವ್ಯಾಲುಯೆಬಲ್ ಅಸೆಟ್ ಆಫ್ ದಿ ಮ್ಯಾಚ್ ಹಾಗೂ ಸ್ವಿಗ್ಗಿ ಇನ್ಸ್ಟಾ ಮಾರ್ಟ್ ಫಾಸ್ಟೆಸ್ಟ್ ಡಿಲಿವರಿ ಆಫ್ ದಿ ಮ್ಯಾಚ್ ಪ್ರಶಸ್ತಿಗಳನ್ನು ಪಡೆಯುವ ಮೂಲಕ ಗಮನ ಸೆಳೆದರು.
ನನ್ನ ಪ್ರದರ್ಶನ ಸಂತಸ ನೀಡಿದೆ
ಮೊದಲ ಪಂದ್ಯದಲ್ಲೇ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ ಬಗ್ಗೆ ಪಂದ್ಯದ ಬಳಿಕ ಮಾತನಾಡಿದ ಉಮೇಶ್ ಯಾದವ್, ಎರಡು ವರ್ಷದ ಬಳಿಕ ಐಪಿಎಲ್ ಟೂರ್ನಿಯಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆಯುತ್ತಿರುವುದು ಹಾಗೂ ನನ್ನ ಇಂದಿನ ಪ್ರದರ್ಶನ ನನಗೆ ಖುಷಿ ನೀಡಿದೆ. ಇತ್ತೀಚಿಗೆ ನಾನು ಹೆಚ್ಚಾಗಿ ವೈಟ್ ಬಾಲ್ ಕ್ರಿಕೆಟ್(ಏಕದಿನ ಮತ್ತು ಟಿ20)ನಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೂ ನನ್ನ ಮೇಲೆ ನಂಬಿಕೆ ಇಟ್ಟು ತಂಡದಲ್ಲಿ ಆಡುವ ಅವಕಾಶ ನೀಡದ ಕೋಚ್ ಹಾಗೂ ಕ್ಯಾಪ್ಟನ್ಗೆ ಧನ್ಯವಾದ ತಿಳಿಸುತ್ತೇನೆ ಎಂದರು.