ಟೀಮ್ ಇಂಡಿಯಾ ಮೊಹಾಲಿ ಟೆಸ್ಟ್ಗೆ ಸಜ್ಜಾಗುತ್ತಿದೆ. ಟೆಸ್ಟ್ ಪಂದ್ಯವನ್ನು ಗೆದ್ದು ವಿರಾಟ್ ಕೊಹ್ಲಿಗೆ 100ನೇ ಟೆಸ್ಟ್ನ ಗಿಫ್ಟ್ ನೀಡಲು ಸಿದ್ಧವಾಗಿದೆ. ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಹಲವು ಅನುಭವಗಳನ್ನು ಹಂಚಿಕೊಂಡಿದ್ದಾರೆ.
ನಾಯಕತ್ವ ಬಗ್ಗೆ:
“ಟೆಸ್ಟ್ ನಾಯಕನಾಗಿ ತಂಡವನ್ನು ಮುನ್ನಡೆಸಲು ಉತ್ಸುಕನಾಗಿದ್ದೇನೆ. ಇದು ಭಾರತೀಯ ಕ್ರಿಕೆಟ್ನ ಶ್ರೇಷ್ಠ ಗೌರವಗಳಲ್ಲಿ ಒಂದು. ಟೆಸ್ಟ್ ಆಡುವುದು ಕನಸು. ಆ ತಂಡದ ನಾಯಕತ್ವವಹಿಸಿಕೊಳ್ಳುವುದು ಅಂದರೆ ಕ್ರಿಕೆಟ್ ನನಗೆ ಕೊಟ್ಟ ಅತೀ ದೊಡ್ಡ ಗೌರವ. ನಾನು ಅದರಷ್ಟವಂತರ ಸಾಲಿನಲ್ಲಿದ್ದೇನೆ. ನಾಯಕತ್ವವಹಿಸಿಕೊಳ್ಳುವುದು ಅದೃಷ್ಟ. ಕಳೆದ ಮೂರು-ನಾಲ್ಕು ವರ್ಷಗಳಲ್ಲಿ ನಾವು ದೊಡ್ಡ ತಪ್ಪುಗಳನ್ನು ಮಾಡಿದ್ದೇವೆ ಎಂದು ನನಗೆ ಅನಿಸುವುದಿಲ್ಲ. ಆದರೆ, ಈ ಹಿಂದೆ ಮಾಡಿದ ತಪ್ಪುಗಳನ್ನು ಸರಿಪಡಿಸಬೇಕು”
ವಿರಾಟ್ ಕೊಹ್ಲಿ ಬಗ್ಗೆ:
“ ವಿರಾಟ್ ಕೊಹ್ಲಿಗೆ ಇದೊಂದು ಅದ್ಭುತ ಮತ್ತು ತುಂಬಾ ದೊಡ್ಡ ಪಂದ್ಯ. ಅವರು ನಡೆದು ಬಂದಿರುವ ಹಾದಿ ಎಲ್ಲರಿಗೂ ಮಾದರಿ. ಕ್ರಿಕೆಟ್ನಲ್ಲಿ ಅವರು ಅಮೋಘ ಸಾಧನೆ ಮಾಡಿದ್ದಾರೆ. ತಂಡವನ್ನು ಎತ್ತರಕ್ಕೆ ಕೊಂಡೊಯ್ಯಲು ಮಹತ್ವದ ಬದಲಾವಣೆ ಮಾಡಿದ್ದಾರೆ. ತಂಡವಾಗಿ ನಾವು 2018 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸಿದ್ದು ನನಗೆ ಇಂದಿಗೂ ನೆನಪಿದೆ. ನನಗೆ 2013 ರಲ್ಲಿ ವಿರಾಟ್ ಕೊಹ್ಲಿ ಸಿಡಿಸಿದ ಶತಕ ಫೆವರಿಟ್. ಆ ಸಂದರ್ಭ ಅವರು ಘಾತಕ ವೇಗಿಗಳಾದ ಡೇಲ್ ಸ್ಟೈನ್, ಮಾರ್ಕೆಲ್, ಕ್ಯಾಲಿಸ್ ಅವರ ಬೌಲಿಂಗ್ ಅನ್ನು ಎದುರಿಸಿ ಶತಕ ಬಾರಿಸಿದ್ದರು. ಇದರ ಜೊತೆಗೆ ಕೊಹ್ಲಿ 2018 ರಲ್ಲಿ ಪರ್ತ್ನಲ್ಲಿ ಸೆಂಚುರಿಗಳಿಸಿದ್ದು ಕೂಡ ನೆನಪಿದೆ. ಆದರೆ, ದಕ್ಷಿಣ ಆಫ್ರಿಕಾ ವಿರುದ್ಧ ಅವರು ಶತಕ ಗಳಿಸಿದ್ದು ನನ್ನ ಫೆವರಿಟ್. ಇವತ್ತು ಕೂಡ ಕೊಹ್ಲಿ ಭಾರತೀಯ ಕ್ರಿಕೆಟ್ನ ಅವಿಭಾಜ್ಯ ಅಂಗ. ಫಿಟ್ನೆಸ್ ವಿಚಾರ ಇರಬಹುದು ಅಥವಾ ಸಮರ್ಪಣಾ ಮನೋಭಾವ ಇರಬಹುದು ವಿರಾಟ್ ಕೊಹ್ಲಿ ಎಲ್ಲರಿಗೂ ಮಾದರಿ”
ಎಲ್ಲಾ ಪಂದ್ಯವೂ ಮಹತ್ವದ್ದು:
“ನಾವು ಮೊದಲಿಗೆ ಮುಂಬರುವ ಒಂದು ಟೆಸ್ಟ್ ಪಂದ್ಯದ ಬಗ್ಗೆ ಮಾತ್ರ ಯೋಚಿಸುತ್ತೇವೆ. ಮುಂದಿನ ಒಂಬತ್ತು ಟೆಸ್ಟ್ ಕೂಡ ನಮಗೆ ಮುಖ್ಯವಾಗಿದೆ. ಇದರಲ್ಲಿ ಪ್ರತಿ ಪಂದ್ಯವನ್ನು ನಾವು ಗೆಲ್ಲಬೇಕು. ಇದರಿಂದ ಆಟಗಾರರ ಬೆಳವಣಿಗೆ ಕೂಡ ಸಾಧ್ಯವಾಗುತ್ತದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಇರುವುದರಿಂದ ನಾವು ಆಡುವ ಪ್ರತಿಯೊಂದು ಪಂದ್ಯ ಕೂಡ ಮಹತ್ವ ಪಡೆದುಕೊಳ್ಳುತ್ತದೆ”
ಪೂಜಾರಾ-ರಹಾನೆ ಕಂ ಬ್ಯಾಕ್ ಮಾಡ್ತಾರೆ:
“ಪೂಜಾರಾ ಮತ್ತು ರಹಾನೆಯನ್ನು ಮುಂದಿನ ದಿನಗಳಲ್ಲಿ ತಂಡಕ್ಕೆ ಆಯ್ಕೆ ಮಾಡಲಾಗುವುದಿಲ್ಲ ಎಂದು ಹೇಳಲಾರೆ. ನಾವೆಲ್ಲ ಅವರ ಮೇಲೆ ಕಣ್ಣಿಟ್ಟಿದ್ದೇವೆ. ಭಾರತ ತಂಡಕ್ಕೆ ಇವರಿಬ್ಬರ ಕೊಡುಗೆ ಅಪಾರವಾಗಿದೆ. ಅವರ ವರ್ಷಗಳ ಶ್ರಮ ಮತ್ತು ಕೊಡುಗೆಯನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ನಾವು ವಿದೇಶದಲ್ಲಿ ಗೆಲುವು ಸಾಧಿಸಿದ್ದು ಆಗಿರಬಹುದು ಅಥವಾ ಭಾರತ ನಂಬರ್ ಒನ್ ಟೆಸ್ಟ್ ತಂಡವಾಗಿ ಹೊರಹೊಮ್ಮಲು ಇವರು ನೀಡಿದ ಕೊಡುಗೆ ಅತೀ ದೊಡ್ಡದು. ಅನುಭವ ಅನ್ನುವುದು ಸುಮ್ಮನೆ ಸಿಗುವುದಿಲ್ಲ. ಅದನ್ನು ಪಡೆಯಲು ದಿನ ನಿತ್ಯ ಶ್ರಮ ಅಗತ್ಯ”
ಶ್ರೀಲಂಕಾ ಬಗ್ಗೆ:
“ಎದುರಾಳಿಯ ಬಗ್ಗೆ ಹೆಚ್ಚು ಯೋಚನೆ ಮಾಡುವುದಿಲ್ಲ. ಅವರ ಬೌಲಿಂಗ್ ಮತ್ತು ಬ್ಯಾಟಿಂಗ್ಗೆ ಸಂಬಂಧ ಪಟ್ಟಂತೆ ಕೆಲ ಯೋಜನೆ ಮಾಡಿಕೊಳ್ಳುತ್ತೇವಷ್ಟೆ. ಉಳಿದಿರುವುದು ನಮ್ಮ ಸಾಮರ್ಥ್ಯದ ಮೇಲೆ. ನಾವು ಯಾವರೀತಿ ಬ್ಯಾಟಿಂಗ್ ಮಾಡುತ್ತೇವೆ ಮತ್ತು ಯಾವರೀತಿ ಬೌಲಿಂಗ್ ಮಾಡುತ್ತೇವೆ ಎಂಬುದರ ಮೇಲೆ ನಿಂತಿದೆ”