2011, ಏಪ್ರಿಲ್ 2, ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣ ದಿನ. 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಗೆದ್ದ ಸಂಭ್ರಮ. ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಅವರ ವರ್ಣರಂಜಿತ ಕ್ರಿಕೆಟ್ ಬದುಕಿಗೆ ಸಿಕ್ಕಿದ ಸರ್ವಶ್ರೇಷ್ಠ ಗರಿ. ಮಹೇಂದ್ರ ಸಿಂಗ್ ಧೋನಿ ಎಂಬ ಚಾಣಾಕ್ಷ ನಾಯಕ ಕಪ್ ಗೆದ್ದುಕೊಟ್ಟ ಸುದಿನ.
ಪಾಕಿಸ್ತಾನ ವಿರುದ್ಧ ಸೆಮಿಫೈನಲ್ ಗೆದ್ದ ಮೇಲೆ ಶ್ರೀಲಂಕಾ ವಿರುದ್ಧದ ಫೈನಲ್ ಹೊತ್ತಿಗೆ ಭಾರತ ಫೆವರೀಟ್ ಆಗಿತ್ತು. ಆದರೆ ಅಲ್ಲಿ ತನಕ ತವರಿನಲ್ಲಿ ವಿಶ್ವಕಪ್ ಗೆದ್ದ ತಂಡ ಬೇರೊಂದು ಇರಲಿಲ್ಲ. ಹೀಗಾಗಿ ಕೊಂಚ ಆತಂಕ ಅಭಿಮಾನಿಗಳಲ್ಲಿತ್ತು.
ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾಕ್ಕೆ ನಾಯಕ ಮಹೇಲಾ ಜಯವರ್ಧನೆ ಶತಕದ ಆಸರೆ ನೀಡಿ ತಂಡವನ್ನು 274 ರನ್ಗಳ ಮೊತ್ತಕ್ಕೆ ಕೊಂಡೊಯ್ದಿದ್ದರು. ವಿಶ್ವಕಪ್ ಫೈನಲ್ನಲ್ಲಿ ಇಷ್ಟು ಮೊತ್ತವನ್ನು ಯಾರೂ ಚೇಸ್ ಮಾಡಿರಲಿಲ್ಲ. ಅದಕ್ಕೂ ಮಿಗಿಲಾಗಿ ಮೊದಲ ಓವರ್ನಲ್ಲೇ ವೀರೇಂದ್ರ ಸೆಹ್ವಾಗ್ ಔಟ್ ಆಗಿದ್ದರು. ಸಚಿನ್ ತೆಂಡುಲ್ಕರ್ ಆಟ ಅಂತ್ಯವಾದಾಗ ಭಾರತ ಮೊತ್ತ ಕೇವಲ 31. ಶ್ರೀಲಂಕಾ ಆಟಗಾರರ ಮುಖದಲ್ಲಿ ಮಂದಹಾಸ.
ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ತಂಡವನ್ನು ಆಧರಿಸಿದರು. ಆದರೆ ದಿಲ್ಶಾನ್ ಕೊಹ್ಲಿಯ ವಿಕೆಟ್ ಪಡೆದು ಒತ್ತಡ ಹೇರಿದರು. ಮುತ್ತಯ್ಯ ಮುರಳೀಧರನ್ ಸ್ಪಿನ್ ಮಂತ್ರ ಭಲೇ ವರ್ಕೌಟ್ ಆಗುತ್ತಿತ್ತು. ಎಲ್ಲರೂ ಕಾಯ್ತಾ ಇದ್ದಿದ್ದು ಟೂರ್ನಿಯ ಶ್ರೇಷ್ಠ ಆಟಗಾರ ಯುವರಾಜ್ ಆಗಮನಕ್ಕೆ. ಆದರೆ ಕ್ರೀಸ್ಗೆ ಬಂದಿದ್ದು ನಾಯಕ ಮಹೇಂದ್ರ ಸಿಂಗ್ ಧೋನಿ. ಕಾಮೆಂಟೇರ್ಗಳ ಬಾಯಲ್ಲಿ ಬಂದಿದ್ದು Captain Leading From the Front ಅನ್ನುವ ಶಬ್ದ.
ಗೌತಮ್ ಗಂಭೀರ್ ಮತ್ತು ಧೋನಿ ನಡುವೆ 109 ರನ್ಗಳ ಜೊತೆಯಾಟ ಬಂದಿತ್ತು. ಗಂಭೀರ್ 97 ರನ್ಗಳಿಸಿ ಔಟಾಗಿ ಶತಕ ವಂಚಿತರಾದರು. ಆದರೆ ಅದಾಗಲೇ ಧೋನಿಯ ಆಟ ಕಳೆ ಕಟ್ಟಿತ್ತು. ಬೌಲರ್ ಯಾರಾದರೇನು, ರನ್ ಮಾಡಬೇಕಷ್ಟೆ ಅನ್ನುವ ಆಟಕ್ಕೆ ಇಳಿದಾಗಿತ್ತು. ಯುವರಾಜ್ ಜೊತೆಯಾದ ಮೇಲಂತೂ ಧೋನಿಯ ಆಟವನ್ನು ಕೇಳುವುದೇ ಬೇಡ.
ಧೋನಿ ಅರ್ಧಶತಕದ ಗಡಿ ದಾಟಿ ಮುಂದೆ ಹೋಗಿದ್ದರು. ಗೆಲುವಿಗೆ ಬೇಕಾದ ರನ್ಗಿಂತ ಬಾಲ್ಗಳು ಹೆಚ್ಚಿದ್ದವು. ಧೋನಿಯ ಜೊತೆ ಸೇರಿಕೊಂಡು ಯುವಿ ಕೂಡ ಬೌಂಡರಿ ಚಚ್ಚಿದ್ದರು. ಐತಿಹಾಸಿಕ ಕ್ಷಣ ಎದುರಿಗಿತ್ತು. 49ನೇ ಓವರ್ನ 2ನೇ ಎಸೆತ. ನುವಾನ್ ಕುಲಸೇಕರ್ ಎಸೆತವನ್ನು ಧೋನಿ ಲಾಂಗ್ ಆನ್ ಮೇಲೆ ಸಿಕ್ಸರ್ಗೆ ಅಟ್ಟಿದರು. ಇತಿಹಾಸ ಸೃಷ್ಟಿಯಾಗಿತ್ತು. Dhoni Finishes it off in Style, India Won the World Cup ಅನ್ನುವ ರವಿಶಾಸ್ತ್ರಿ ಕಾಮೆಂಟರಿ ಗೆಲುವಿನ ಸಂಭ್ರಮದಲ್ಲೂ ಕೇಳಿಸಿಕೊಂಡಿತ್ತು. ತಂಡವಾಗಿ ಭಾರತ ಗೆದ್ದಿದ್ದರೆ, ನಾಯಕನಾಗಿ ಧೋನಿ ವಿಶ್ವ ಕ್ರಿಕೆಟ್ನ ಚಾಂಪಿಯನ್ ಆದರು.