ಇಶಾನ್ ಕಿಶನ್(34) ಹಾಗೂ ಶ್ರೇಯಸ್ ಅಯ್ಯರ್(40) ಜವಾಬ್ದಾರಿಯ ಬ್ಯಾಟಿಂಗ್ ನಡುವೆಯೂ ಸೌತ್ ಆಫ್ರಿಕಾ ಬೌಲರ್ಗಳ ಸಂಘಟಿತ ದಾಳಿಗೆ ತತ್ತರಿಸಿದ ಭಾರತ ಪ್ರಮುಖ ಬ್ಯಾಟ್ಸ್ಮನ್ಗಳ ವೈಫಲ್ಯದಿಂದ 148 ರನ್ಗಳ ಪೈಪೋಟಿಯ ಮೊತ್ತ ಕಲೆಹಾಕಿದೆ.
ಕಟಕ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ಬೌಲಿಂಗ್ ಆಯ್ಕೆ ಮಾಡಿತು. ಆದರೆ ಬ್ಯಾಟ್ಸ್ಮನ್ಗಳ ವೈಫಲ್ಯಕ್ಕೆ ಸಿಲುಕಿದ ಭಾರತ 20 ಓವರ್ಗಳಲ್ಲಿ 6 ವಿಕೆಟ್ಗೆ 148 ರನ್ಗಳಿಸಿದೆ. ಭಾರತದ ಪರ ಕಿಶನ್(34) ಹಾಗೂ ಅಯ್ಯರ್(40) ತಂಡಕ್ಕೆ ನೆರವಾದರು. ಸೌತ್ ಆಫ್ರಿಕಾ ಪರ ಅನ್ರಿಕ್ ನೊಕಿಯೆ 2 ವಿಕೆಟ್ ಪಡೆದು ಮಿಂಚಿದರು.
ಬ್ಯಾಟ್ಸ್ಮನ್ಗಳ ತತ್ತರ:
ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಭಾರತ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಇನ್ನಿಂಗ್ಸ್ ಆರಂಭಿಸಿದ ಋತುರಾಜ್ ಗಾಯಕ್ವಾಡ್(1) ಬಹುಬೇಗನೆ ನಿರ್ಗಮಿಸಿದರು. ನಂತರ ಜೊತೆಯಾದ ಇಶಾನ್ ಕಿಶನ್ 34 ರನ್(21 ಬಾಲ್, 2 ಬೌಂಡರಿ, 3 ಸಿಕ್ಸ್) ಹಾಗೂ ಶ್ರೇಯಸ್ ಅಯ್ಯರ್ 40 ರನ್(35 ಬಾಲ್, 2 ಬೌಂಡರಿ, 2 ಸಿಕ್ಸ್) ಉತ್ತಮ ಬ್ಯಾಟಿಂಗ್ನಿಂದ ತಂಡಕ್ಕೆ ಚೇತರಿಕೆ ನೀಡಿದರು. ಇವರಿಬ್ಬರು ಔಟಾದ ಬಳಿಕ ಬಂದ ನಾಯಕ ರಿಷಬ್ ಪಂತ್(5), ಹಾರ್ದಿಕ್ ಪಾಂಡ್ಯ(9) ಹಾಗೂ ಅಕ್ಸರ್ ಪಟೇಲ್(10) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.
ಕಾರ್ತಿಕ್ ಬಿರುಸಿನ ಆಟ:
ಕೊನೆ ಹಂತದಲ್ಲಿ ಜೊತೆಯಾದ ದಿನೇಶ್ ಕಾರ್ತಿಕ್ ಹಾಗೂ ಹರ್ಷಲ್ ಪಟೇಲ್ ಉಪಯುಕ್ತ ರನ್ ಕಲೆಹಾಕುವ ಮೂಲಕ ತಂಡದ ಮೊತ್ತವನ್ನ ಹೆಚ್ಚಿಸಿದರು. ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ದಿನೇಶ್ ಕಾರ್ತಿಕ್ ಕೇವಲ 21 ಬಾಲ್ಗಳಲ್ಲಿ 2 ಬೌಂಡರಿ, 2 ಸಿಕ್ಸರ್ ನೆರವಿನಿಂದ ಅಜೇಯ 30 ರನ್ಗಳಿಸಿದರು. ಅಂತಿಮವಾಗಿ ಭಾರತ 20 ಓವರ್ಗಳಲ್ಲಿ 148 ರನ್ಗಳಿಸಿತು. ಸೌತ್ ಆಫ್ರಿಕಾ ಪರ ಅನ್ರಿಕ್ ನೊಕಿಯೆ(2/36) ಉತ್ತಮ ದಾಳಿ ನಡೆಸಿದರೆ. ಕಗೀಸೋ ರಬಾಡ, ಪರ್ನೇಲ್, ಪ್ರಿಟೋರಿಯಸ್ ಹಾಗೂ ಕೇಶವ್ ಮಹಾರಾಜ್ ತಲಾ 1 ವಿಕೆಟ್ ಪಡೆದರು.