ತಮ್ಮ ಅದ್ಭುತ ಟ್ಯಾಲೆಂಟ್ ಮೂಲಕ ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ಪೃಥ್ವಿ ಶಾ, ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆದಾರರ ಗಮನ ಸೆಳೆಯುವಲ್ಲಿ ವಿಫಲರಾಗಿದ್ದಾರೆ.
ಅತಿಥೇಯ ಐರ್ಲೆಂಡ್ ವಿರುದ್ಧ ನಡೆಯುವ 2 ಪಂದ್ಯಗಳ ಟಿ20 ಸರಣಿಗೆ ಭಾರತ ತಂಡವನ್ನ ಪ್ರಕಟಿಸಲಾಗಿದೆ. 2022ರ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಹಲವು ಆಟಗಾರರು, ಐರ್ಲೆಂಡ್ ಪ್ರವಾಸಕ್ಕೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಸೀಸನ್ನಲ್ಲಿ ಗುಜರಾತ್ ಟೈಟನ್ಸ್ ತಂಡಕ್ಕೆ ಪ್ರಶಸ್ತಿ ಗೆದ್ದುಕೊಟ್ಟ ಹಾರ್ದಿಕ್ ಪಾಂಡ್ಯ, ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಮೊದಲ ಬಾರಿಗೆ ನಾಯಕತ್ವದ ಜವಾಬ್ದಾರಿ ಹೊತ್ತಿದ್ದಾರೆ.
ಇವರೊಂದಿಗೆ ರಾಹುಲ್ ತ್ರಿಪಾಠಿ, ಉಮ್ರಾನ್ ಮಲ್ಲಿಕ್ ಇನ್ನಿತರ ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಈಗಾಗಲೇ ಟೀಂ ಇಂಡಿಯಾದಲ್ಲಿ ಮಿಂಚಿರುವ ಪೃಥ್ವಿ ಶಾ, ಆಯ್ಕೆದಾರರ ಗಮನ ಸೆಳೆಯುವಲ್ಲಿ ವಿಫಲರಾಗಿದ್ದಾರೆ. ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಪೃಥ್ವಿ ಶಾ ಅವರನ್ನ ಆಯ್ಕೆ ಮಾಡದಿರುವುದು ಅಚ್ಚರಿ ಮೂಡಿಸುವ ಜೊತೆಗೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಪೃಥ್ವಿ ಶಾ 2021ರ ಶ್ರೀಲಂಕಾ ಪ್ರವಾಸದಲ್ಲಿ ಕೊನೆಯದಾಗಿ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತದ ಎರಡನೇ ತಂಡವನ್ನು ಶ್ರೀಲಂಕಾ ಪ್ರವಾಸಕ್ಕೆ ಕಳಹಿಸಿದ್ದ ಸಂದರ್ಭದಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದ ಪೃಥ್ವಿ ಶಾ, ODI ಮತ್ತು T20I ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದಿದ್ದರು. ಏಕದಿನ ಪಂದ್ಯದಲ್ಲಿ ನಿರೀಕ್ಷಿತ ಸಕ್ಸಸ್ ಕಾಣದ ಪೃಥ್ವಿ ಶಾ, ಮೂರು ಪಂದ್ಯಗಳಿಂದ 105 ರನ್ಗಳಿಸಿದ್ದರು. ಆದರೆ ಮೊದಲ ಟಿ20 ಪಂದ್ಯದ ಮೂಲಕ T20I ಕ್ರಿಕೆಟ್ಗೆ ಎಂಟ್ರಿಕೊಟ್ಟಿದ್ದ ಶಾ, ಕೋವಿಡ್-19 ಸೋಂಕಿತ ಆಟಗಾರರ ಜತೆಗೆ ಸಂಪರ್ಕ ಹೊಂದಿದ್ದ ಕಾರಣಕ್ಕೆ ಐಸೋಲೇಷನ್ಗೆ ಒಳಗಾಗಿ ಟಿ20 ಸರಣಿಯಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದರು.
ಕೈಬಿಡಲು ಕಾರಣವೇನು?
ಟೀಂ ಇಂಡಿಯಾದಲ್ಲಿ ತಮಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಕೆ ಮಾಡಿಕೊಂಡಿದ್ದ ಪೃಥ್ವಿ ಶಾ ಅವರನ್ನ ಐರ್ಲೆಂಡ್ ಪ್ರವಾಸಕ್ಕೆ ಆಯ್ಕೆ ಮಾಡದಿರಲು ಕಾರಣವೇನು? ಎಂಬ ಪ್ರಶ್ನೆ ಕಾಡುತ್ತಿದೆ. ಫಾರ್ಮ್ ಸಮಸ್ಯೆ ಅಥವಾ ಫಿಟ್ನೆಸ್ ಸಮಸ್ಯೆಯೋ ಎಂಬ ಅನುಮಾನ ಮೂಡಿದರು, ಕಳೆದ 2022ರ ಐಪಿಎಲ್ನಲ್ಲಿ ಪೃಥ್ವಿ ಶಾ, ಬ್ಯಾಟಿಂಗ್ ಜೊತೆಗೆ ಫೀಲ್ಡಿಂಗ್ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದರು. ಅಲ್ಲದೇ ಬ್ಯಾಟಿಂಗ್ನಲ್ಲೂ ಮಿಂಚಿರುವ ಪೃಥ್ವಿ ಶಾ, ಇನ್ನಿಂಗ್ಸ್ನ ಆರಂಭ ನಿಧಾನ ಗತಿಯಲ್ಲಿದ್ದರು, ನಂತರದಲ್ಲಿ ಸ್ಪೋಟಕ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. 2021ರ ಐಪಿಎಲ್ನಿಂದ ಈವರೆಗೂ ಪೃಥ್ವಿ ಶಾ, 43.85ರ ಸರಾಸರಿಯಲ್ಲಿ 500ಕ್ಕೂ ಹೆಚ್ಚು ರನ್ಗಳಿಸಿದ್ದಾರೆ. ಅಲ್ಲದೇ 2022ರ ಐಪಿಎಲ್ನಲ್ಲೂ ಮಿಂಚಿದ್ದ ಪೃಥ್ವಿ ಶಾ, 283 ರನ್ಗಳಿಸಿದ್ದರು. ಈ ನಡುವೆ ಐರ್ಲೆಂಡ್ ಪ್ರವಾಸಕ್ಕೆ ಪೃಥ್ವಿ ಶಾ ಅವರನ್ನ ಕೈಬಿಟ್ಟು ಸಂಜೂ ಸ್ಯಾಮ್ಸನ್ ಅವರನ್ನ ಆಯ್ಕೆ ಮಾಡಲಾಗಿದೆ. ಹೀಗಾಗಿ ಪೃಥ್ವಿ ಶಾ ಅವರಿಗೆ ಮತ್ತೊಮ್ಮೆ ಟೀಂ ಇಂಡಿಯಾದಲ್ಲಿ ಆಡುವ ಅವಕಾಶ ಯಾವಾಗ ಸಿಗಲಿದೆ ಎಂಬ ಪ್ರಶ್ನೆ ಮೂಡಿದೆ.