ಐಸಿಸಿ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಅಂದುಕೊಂಡಂತೆ ಯಾವುದೂ ನಡೆಯುತ್ತಿಲ್ಲ. ಟೂರ್ನಿಗೂ ಮುನ್ನ ಕಪ್ ಗೆಲ್ಲುವ ಫೆವರೀಟ್ ಆಗಿದ್ದ ವಿರಾಟ್ ಬಳಗ ಈಗ ಗ್ರೂಪ್ ಹಂತದಲ್ಲೇ ಗೇಟ್ಪಾಸ್ ಪಡೆಯುವ ಸ್ಥಿತಿಯಲ್ಲಿದೆ. ಸತತ ಎರಡು ಪಂದ್ಯಗಳನ್ನು ಸೋತಿರುವ ಟೀಮ್ ಇಂಡಿಯಾ ಈಗ ಅದೃಷ್ಟವನ್ನೇ ನಂಬಿ ಕುಳಿತಿದೆ. ಅಷ್ಟಕ್ಕೂ ಪಾಕ್ ಮತ್ತು ನ್ಯೂಜಿಲೆಂಡ್ ವಿರುದ್ಧ ಕೈ ಹಿಡಿಯದ ಅದೃಷ್ಟ ಮುಂದಿನ ಪಂದ್ಯಗಳಲ್ಲಿ ಉಪಯೋಗಕ್ಕೆ ಬರುತ್ತಾ ಅನ್ನುವ ಪ್ರಶ್ನೆ ಇದೆ.
ದುಬೈನಲ್ಲಿ ಟಾಸ್ ಗೆಲ್ಲುವುದು ಪಂದ್ಯ ಗೆಲ್ಲುವಷ್ಟೇ ನಿರ್ಣಾಯಕವಾಗಿದೆ. ಆರಂಭದಲ್ಲಿ ದುಬೈ ಪಿಚ್ ಬೌಲರ್ಗಳಿಗೆ ನೆರವು ನೀಡುತ್ತದೆ. ಪಂದ್ಯ ಸಾಗುತ್ತಿದ್ದಂತೆ ಇಬ್ಬನಿ ಬ್ಯಾಟ್ಸ್ಮನ್ಗಳಿಗೆ ವರವಾಗುತ್ತದೆ. ಬೌಲರ್ಗಳು ಪರದಾಟ ಆರಂಭಿಸುತ್ತಾರೆ. ಹೀಗಾಗಿ ಚೇಸಿಂಗ್ ಮಾಡುವ ತಂಡ ಸುಲಭವಾಗಿ ಪಂದ್ಯ ಗೆಲ್ಲುತ್ತಿದೆ. ಟಾಸ್ ಗೆದ್ದವರು ಕಣ್ಣುಮುಚ್ಚಿಕೊಂಡು ಮೊದಲು ಫೀಲ್ಡಿಂಗ್ ಆರಿಸಿಕೊಂಡು ಮುಗುಳ್ನಗುತ್ತಿದ್ದಾರೆ. ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಎರಡೂ ಪಂದ್ಯದಲ್ಲಿ ಟಾಸ್ ಸೋತಿದ್ದಾರೆ. ಅಷ್ಟೇ ಅಲ್ಲ ಕೈ ಹಿಡಿಯದ ಟಾಸ್ ಅದೃಷ್ಟದಿಂದ ಪಂದ್ಯವನ್ನೂ ಸೋತಿದ್ದಾರೆ.
ಇನ್ನು ಬ್ಯಾಟ್ಸ್ಮನ್ಗಳು ಎರಡೂ ಪಂದ್ಯಗಳಲ್ಲೂ ಕೂ ಕೊಟ್ಟಿದ್ದಾರೆ. ರೋಹಿತ್,ರಾಹುಲ್ ಎರಡೂ ಪಂದ್ಯಗಳಲ್ಲೂ ಬೇಗನೆ ಮುಗ್ಗರಿಸಿದ್ದಾರೆ. ಪಾಕ್ ವಿರುದ್ಧ ವಿರಾಟ್ ಚೆನ್ನಾಗಿ ಆಡಿದ್ದರೂ ಕಿವೀಸ್ ವಿರುದ್ಧ ಬೇಗನೆ ಔಟಾದರು. ರಿಷಬ್ ಮತ್ತು ಹಾರ್ದಿಕ್ ತಂಡಕ್ಕೆ ಬೇಕು ಅನ್ನುವಾಗ ವಿಕೆಟ್ ಕೈ ಚೆಲ್ಲಿದ್ದಾರೆ. ಪಾಕ್ ವಿರುದ್ಧ ಪಂದ್ಯದಲ್ಲಿ ಬೌಲರ್ಗಳು ಬ್ಯಾಟ್ಸ್ಮನ್ಗಳು ತಪ್ಪು ಮಾಡುವಂತೆ ಅತ್ಯುತ್ತಮ ಬೌಲಿಂಗ್ ಮಾಡಿದ್ದರು. ಆದರೆ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾದ ಬ್ಯಾಟ್ಸ್ಮನ್ಗಳೇ ತಪ್ಪು ಮಾಡಿ ವಿಕೆಟ್ ಒಪ್ಪಿಸಿದ್ದು ಸುಳ್ಳಲ್ಲ.
ಇನ್ನು ಬೌಲಿಂಗ್ ವಿಭಾಗ ಎರಡೂ ಪಂದ್ಯಗಳಲ್ಲಿ ಕೈ ಕೊಟ್ಟಿದೆ. ಪಾಕ್ ವಿರುದ್ಧ ಒಂದೇ ಒಂದು ವಿಕೆಟ್ ಕೀಳದ ಟೀಮ್ ಇಂಡಿಯಾ ಬೌಲರ್ಗಳು, ನ್ಯೂಜಿಲೆಂಡ್ ವಿರುದ್ಧ ಆ ಕೊರತೆಯನ್ನು ನೀಗಿಸಿದ್ರು ಅನ್ನೋದಷ್ಟೇ ಸಮಾಧಾನ. ಆದರೆ ಪಂದ್ಯ ಗೆಲ್ಲಿಸ ಬೇಕಿದ್ದ ಟ್ರಂಪ್ ಕಾರ್ಡ್ ಬೌಲರ್ಗಳೆಲ್ಲಾ ಕೈ ಕೊಟ್ಟಿದ್ದು ಟೀಮ್ ಇಂಡಿಯಾಕ್ಕೆ ದುಬಾರಿ ಆಗಿದೆ. ಒಟ್ಟಿನಲ್ಲಿ ಟೀಮ್ ಇಂಡಿಯಾ ವಿಶ್ವಕಪ್ನಲ್ಲಿ ಹೊರಬೀಳುವುದು ಬಹುತೇಕ ಖಚಿತ.