ಕೆಲವೊಮ್ಮೆ ಅತಿಯಾದ ಸಭ್ಯತೆ ತಂಡಕ್ಕೆ ಮಾರಕವಾಗುತ್ತದೆ. ಈ ಸಾಲುಗಳನ್ನು ಕೇಳಿದರೆ ಯಾವುದೋ ಕಥೆಯನ್ನು ಹೇಳುತ್ತಿದ್ದೇವೆ ಎಂದು ಅನಿಸಬಹುದು. ಅಲ್ಲವೇ ಅಲ್ಲ.. ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಮಿಚೆಲ್ ಮಾರ್ಷ್ ತೋರಿದ ನಡೆ ಇದು. ಕ್ರೀಡಾಸ್ಪೂರ್ತಿ ಮೆರೆಯುವ ಉದ್ದೇಶದಿಂದ ಬ್ಯಾಟ್ ಗೆ ಚೆಂಡು ತಾಗದೇ ಇದ್ದರೂ, ಅಂಪೈರ್ ನಿರ್ಣಯಕ್ಕೆ ತಲೆ ಬಾಗಿ ಪೆವಿಲಿಯನ್ ಹಾದಿ ಹಿಡಿದ ಮಿಚೆಲ್ ಡೆಲ್ಲಿ ಸೋಲಿಗೆ ಕಾರಣರಾದರು.
![ಡೆಲ್ಲಿಗೆ ಮುಳವಾದ ಅತಿಯಾದ ಸಭ್ಯತೆ, DRS ಬಳಸದ ಮಿಚೆಲ್ 3 FRrNw9gaIAEH2OV e1651432384174](http://sportskarnataka.com/wp-content/uploads/2022/05/FRrNw9gaIAEH2OV-e1651432384174.jpg)
ನಡೆದಿದ್ದೇನು?
ಪಂದ್ಯದ 8ನೇ ಓವರ್ ಬೌಲ್ ಮಾಡಲು ಕೆ.ಗೌತಮ್ ಬಂದರು. ಮೊದಲ ಎಸೆತ ಔಟ್ ಸೈಡ್ ಆಫ್ ಸ್ಟಂಪ್ ಆಚೆ ಬಿದ್ದಿತು. ಕೊಂಚ ರೂಮ್ ಮಾಡಿಕೊಂಡು ಡ್ರೈವ್ ಮಾಡಲು ಮಾರ್ಷ್ ಮುಂದಾಗಿದ್ದರು. ಆದರೆ ಚೆಂಡು ನೇರವಾಗಿ ವಿಕೆಟ್ ಕೀಪರ್ ಗ್ಲೌಸ್ ಸೇರಿತು. ಬೌಲರ್ ಮನವಿ ಸಲ್ಲಿಸಿದರು. ಅಂಪೈರ್ ಕೆಲವು ಸಮಯ ಯೋಚಿಸಿ ಔಟ್ ಎಂದು ನೀಡಿದರು. ಈ ತೀರ್ಪಿಗೆ DRS ಪಡೆಯದೆ ಮಿಚೆಲ್ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು.
![ಡೆಲ್ಲಿಗೆ ಮುಳವಾದ ಅತಿಯಾದ ಸಭ್ಯತೆ, DRS ಬಳಸದ ಮಿಚೆಲ್ 4 FRrLLvaaAAEz6tI](http://sportskarnataka.com/wp-content/uploads/2022/05/FRrLLvaaAAEz6tI.jpg)
ಮರು ಪ್ರಸಾರದಲ್ಲಿ ಈ ದೃಶ್ಯವನ್ನು Ultra-Edgeನಲ್ಲಿ ನೋಡಿದಾಗ ಬ್ಯಾಟಿಗೆ ಚೆಂಡು ತಾಕದೇ ಇರುವುದು ಸ್ಪಷ್ಟವಾಗಿ ಗೋಚರಿಸಿತು. ಪೆವಿಲಿಯನ್ ನಲ್ಲಿ ಕುಳಿತ ಮಿಚೆಲ್ ಕೈ ಕೈ ಹಿಚಿಕೊಳ್ಳುತ್ತಿದ್ದರು.
ಇದರಿಂದ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಕೂಡ ಇದನ್ನು ಕಂಡು ಆಶ್ಚರ್ಯಚಕಿತರಾದರು. ಮತ್ತೊಂದೆಡೆ, ಕ್ಯಾಪ್ಟನ್ ಪಂತ್ ಕೂಡ ಮೈದಾನದಲ್ಲಿ ನಿರಾಶೆಗೊಂಡಂತೆ ಕಾಣುತ್ತಿದ್ದರು. ಮಿಚೆಲ್ ಮಾರ್ಷ್ 20 ಎಸೆತಗಳಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ಗಳ ನೆರವಿನಿಂದ 37 ರನ್ ಸಿಡಿಸಿದರು. ಸ್ವಲ್ಪ ಹೊತ್ತು ಮೈದಾನದಲ್ಲಿ ನಿಂತಿದ್ದರೆ ಪಂದ್ಯವನ್ನು ಗೆಲ್ಲಬಹುದಿತ್ತು.
ಮಾರ್ಷ್ ಔಟಾದ ನಂತರ, ಡೆಲ್ಲಿ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. ರಿಷಬ್ ಪಂತ್ 44, ರೋವ್ಮನ್ ಪೊವೆಲ್ 35 ಮತ್ತು ಅಕ್ಷರ್ ಪಟೇಲ್ 6 ರನ್ಗಳ ಇನಿಂಗ್ಸ್ ಆಡಿದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಕೊನೆಯ ಓವರ್ನಲ್ಲಿ ಡೆಲ್ಲಿಗೆ 21 ರನ್ಗಳ ಅಗತ್ಯವಿತ್ತು. ಇಷ್ಟು ರನ್ ಗಳನ್ನು ಬಾರಿಸಲಾಗದೆ ಡೆಲ್ಲಿ ಮತ್ತೊಂದು ಸೋಲು ಕಂಡಿತು. ಡೆಲ್ಲಿ ಟೂರ್ನಿಯಲ್ಲಿ ಐದನೇ ಸೋಲು ಕಂಡಿದೆ.