ಭುವನೇಶ್ವರ್: ಎಫ್ ಐಎಚ್ ಜೂನಿಯರ್ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಭಾರತ ಶುಕ್ರವಾರ ನಡೆಯಲಿರುವ ಸೆಮಿಫೈನಲ್ಸ್ ಪಂದ್ಯದಲ್ಲಿ ಜರ್ಮನಿ ವಿರುದ್ಧ ಸೆಣಸಾಟ ನಡೆಸಲಿದೆ.
ಎಫ್ಐಎಚ್ ಜೂನಿಯರ್ ಪುರುಷರ ಹಾಕಿ ವಿಶ್ವಕಪ್ನ ಸೆಮಿಫೈನಲ್ನಲ್ಲಿ ಹಾಲಿ ಚಾಂಪಿಯನ್ ಭಾರತವು ಆರು ಬಾರಿಯ ಚಾಂಪಿಯನ್ ಜರ್ಮನಿಯನ್ನು ಎದುರಿಸಲಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ 4-5 ಅಂತರದಲ್ಲಿ ಸೋತಿದ್ದ ಭಾರತ ತಂಡ, ನಂತರದ ಮೂರು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಸತತ ಎರಡನೇ ಬಾರಿ ಸೆಮಿಫೈನಲ್ ಪ್ರವೇಶಿಸಿದೆ.
ಕ್ವಾರ್ಟರ್ ಫೈನಲ್ನಲ್ಲಿ ಭಾರತ 1-0 ಗೋಲುಗಳಿಂದ ಬೆಲ್ಜಿಯಂ ಅನ್ನು ಸೋಲಿಸಿತು. ಯಶ್ದೀಪ್ ಸಿವಾಚ್, ಉಪನಾಯಕ ಸಂಜಯ್ ಕುಮಾರ್ ಮತ್ತು ಶಾರದಾನಂದ್ ತಿವಾರಿ ರಕ್ಷಣಾ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಭಾರತದ ಗೋಲ್ಕೀಪರ್ಗಳಾದ ಪ್ರಶಾಂತ್ ಚೌಹಾಣ್ ಮತ್ತು ಪವನ್ ಬೆಲ್ಜಿಯಂ ವಿರುದ್ಧ ಅದ್ಭುತವಾಗಿ ಆಡಿದರು ಮತ್ತು ಹಲವಾರು ಗೋಲುಗಳನ್ನು ಉಳಿಸಿದರು.
ಭಾರತದಲ್ಲಿ ಸಂಜಯ್, ತಿವಾರಿ, ಅರಿಜಿತ್ ಸಿಂಗ್ ಹುಂಡಾಲ್ ಮತ್ತು ಅಭಿಷೇಕ್ ಲಾಕ್ರಾ ನಾಲ್ವರು ಪೆನಾಲ್ಟಿ ಕಾರ್ನರ್ ಸ್ಪೆಷಲಿಸ್ಟ್ ಇದ್ದಾರೆ. ಅವರೂ ಭಾರತದ ದಾಳಿಯ ಶಕ್ತಿಯಾಗಿದ್ದಾರೆ. ಕ್ವಾರ್ಟರ್-ಫೈನಲ್ನಲ್ಲಿ ಗೋಲು ಬಾರಿಸುವಲ್ಲಿ ವಿಫಲವಾದರೂ, ಫ್ರಾನ್ಸ್ ಮತ್ತು ಪೋಲೆಂಡ್ ವಿರುದ್ಧ ಎರಡು ಹ್ಯಾಟ್ರಿಕ್ಗಳೊಂದಿಗೆ ಸಂಜಯ್ ಭಾರತದ ಅತ್ಯುತ್ತಮ ಡ್ರ್ಯಾಗ್-ಫ್ಲಿಕ್ಕರ್ ಆಗಿದ್ದಾರೆ. ಬೆಲ್ಜಿಯಂ ವಿರುದ್ಧ ಭಾರತದ ಯಶಸ್ಸಿಗೆ ಆಟಗಾರರು ಶಾಂತ ರೀತಿಯಿಂದ ಆಡಿದ್ದೇ ಪ್ರಮುಖವಾಗಿತ್ತು.
ಕೋಚ್ ಗ್ರಹಾಂ ರೀಡ್ ಈ ಬಗ್ಗೆ ಮಾತನಾಡಿ ”ಫ್ರಾನ್ಸ್ ವಿರುದ್ಧದ ಮೊದಲ ಪಂದ್ಯಕ್ಕಿಂತ ನಮ್ಮ ರಕ್ಷಣಾ ವಿಭಾಗ ಉತ್ತಮವಾಗಿತ್ತು. ಅದಕ್ಕಾಗಿ ನಾವು ತುಂಬಾ ಕಷ್ಟಪಟ್ಟೆವು. ಇಬ್ಬರೂ ಗೋಲ್ಕೀಪರ್ಗಳು ಉತ್ತಮ ಕೆಲಸ ಮಾಡಿದರು. ನಾವು ಇನ್ನೂ ಕಷ್ಟಪಟ್ಟು ಕೆಲಸ ಮಾಡಬೇಕು. ನಾವು ನಮ್ಮ ಗಮನವನ್ನು ಮೈದಾನದಲ್ಲಿ ಪ್ರಸ್ತುತ ಆಟದ ಮೇಲೆ ಕೇಂದ್ರೀಕರಿಸಬೇಕು” ಎಂದಿದ್ದಾರೆ.