ಟೀಮ್ ಇಂಡಿಯಾದ ಟೆಸ್ಟ್ ಸ್ಪೆಷಲಿಸ್ಟ್ಗಳಾದ ಚೇತೇಶ್ವರ ಪೂಜಾರಾ ಮತ್ತು ಅಜಿಂಕ್ಯಾ ರಹಾನೆ ಆಟ ಮುಗಿದಂತೆ ಕಾಣುತ್ತಿದೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾದಿಂದ ಪೂಜಾರಾ ಮತ್ತು ರಹಾನೆಗೆ ಕೋಕ್ ನೀಡಲಾಗಿದೆ. ಇಲ್ಲಿಂದ ಮುಂದೆ ಇವರಿಬ್ಬರ ಆಟ ಮುಗಿಯಿತು ಎಂದೇ ಲೆಕ್ಕಾಚಾರ ಹಾಕಲಾಗುತ್ತಿದೆ.
95 ಟೆಸ್ಟ್ಗಳ ಅನುಭವಿ ಪೂಜಾರಾ ಕಳೆದ ಕೆಲವು ವರ್ಷಗಳಿಂದ ಉತ್ತಮ ಪ್ರದರ್ಶನ ನೀಡುತ್ತಿರಲಿಲ್ಲ. ಬ್ಯಾಟಿಂಗ್ ಫಾರ್ಮ್ ಕೈ ಕೊಟ್ಟಿತ್ತು. ದಕ್ಷಿಣ ಅಫ್ರಿಕಾ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಪೂಜಾರಾ ಎಡವಿದ್ದರು. ಹೀಗಾಗಿ ಅವರ ಮೇಲೆ ಒತ್ತಡ ಇತ್ತು. ರಣಜಿ ಟ್ರೋಫಿ ಪಂದ್ಯದಲ್ಲಿ ಮುಂಬೈ ವಿರುದ್ಧ ಸೌರಾಷ್ಟ್ರ ಪರ ಕಣಕ್ಕಿಳಿದಿದ್ದರು. ಮೊದಲ ಇನ್ನಿಂಗ್ಸ್ನಲ್ಲಿ ಶೂನ್ಯ ಸುತ್ತಿದ್ದರು. 2ನೇ ಇನ್ನಿಂಗ್ಸ್ನಲ್ಲಿ ಬಿರುಸಿನ 91 ರನ್ಗಳಿಸಿದರು ಆಯ್ಕೆಗಾರರು ಹೊಸ ಮುಖಗಳತ್ತ ಗಮನ ಹರಿಸಿದ್ದಾರೆ.
ಮತ್ತೊಂದೆಡೆ ಅಜಿಂಕ್ಯಾ ರಹಾನೆ ಕೂಡ ಟೆಸ್ಟ್ ತಂಡದಿಂದ ಸ್ಥಾನ ಕಳೆದುಕೊಂಡಿದ್ದಾರೆ. ರಹಾನೆ ಕೂಡ ಕಳೆದೆರಡು ವರ್ಷಗಳಿಂದ ಫಾರ್ಮ್ ಕಳೆದುಕೊಂಡಿದ್ದರು. ರಣಜಿಯಲ್ಲಿ ಮುಂಬೈ ಪರ ಕಣಕ್ಕಿಳಿದು ಶತಕ ಸಿಡಿಸಿದ್ದರೂ ಆಯ್ಕೆಗಾರರ ಗಮನಸೆಳೆಯಲಿಲ್ಲ.
ಪೂಜಾರಾ ಮತ್ತು ರಹಾನೆ ಸ್ಥಾನಕ್ಕೆ ಆಯ್ಕೆಗಾರರು ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಶ್ರೀಕರ್ ಭರತ್ ಮತ್ತು ಶ್ರೇಯಸ್ ಅಯ್ಯರ್ಗೆ ಸ್ಥಾನ ನೀಡುವ ಸಾಧ್ಯತೆ ಇದೆ. ಭರತ್ ಟೆಸ್ಟ್ ಪಾದರ್ಪಣೆ ನಿರೀಕ್ಷೆಯಲ್ಲಿ ಇದ್ದರೆ, ಶ್ರೇಯಸ್ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಆಡಿದ್ದರು.
ಈ ಮಧ್ಯೆ ಇಶಾಂತ್ ಶರ್ಮಾ ಮತ್ತು ವೃದ್ಧಿಮಾನ್ ಸಾಹಾ ಕೂಡ ಲಂಕಾ ಸರಣಿಗೆ ಆಯ್ಕೆಯಾಗಿಲ್ಲ. ಪೂಜಾರಾ, ರಹಾನೆ, ಇಶಾಂತ್ ಮತ್ತು ವೃದ್ಧಿಮಾನ್ ಆಟ ಟೀಮ್ ಇಂಡಿಯಾದಲ್ಲಿ ಬಹುತೇಕ ಮುಗಿದಂತೆಯೇ ಅನ್ನುವ ಚರ್ಚೆಗಳು ನಡೆಯುತ್ತಿರುವುದು ಸುಳ್ಳಲ್ಲ.