ಭಾರತದ ಸ್ಟಾರ್ ಆಟಗಾರ ಕಿಡಂಬಿ ಶ್ರೀಕಾಂತ್ ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ನ ಚಾಂಪಿಯನ್ಶಿಪ್ನ ಫೈನಲ್ ತಲುಪಿದ್ದಾರೆ. ಪ್ರಶಸ್ತಿ ಸುತ್ತು ತಲುಪಿದ ಭಾರತದ ಮೊದಲ ಪುರುಷ ಬ್ಯಾಡ್ಮಿಂಟನ್ ಆಟಗಾರ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.
ಯುವ ಆಟಗಾರ ಲಕ್ಷ್ಯ ಸೇನ್ ಕೂಡ ಅವರಿಗೆ ಸವಾಲೆಸೆದರು. ಒಂದು ಹಂತದಲ್ಲಿ ಶ್ರೀಕಾಂತ್ ಹಿಂದುಬಿದ್ದಂತೆ ಕಂಡುಬಂದರೂ, ತಮ್ಮ ಅನುಭವವನ್ನು ಬಳಸಿಕೊಂಡು ಪುನರಾಗಮನ ಮಾಡಿದರು. ಶ್ರೀಕಾಂತ್ 17-21, 21-14, 21-17ರಲ್ಲಿ ಲಕ್ಷ್ಯ ಸೇನ್ ಅವರನ್ನು ಸೋಲಿಸಿದರು. ಇಬ್ಬರ ನಡುವಿನ ಪಂದ್ಯ ಒಂದು ಗಂಟೆ ಒಂಬತ್ತು ನಿಮಿಷಗಳ ಕಾಲ ನಡೆಯಿತು. ಲಕ್ಷ್ಯ ಸೇನ್ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ 1983ರಲ್ಲಿ ಪ್ರಕಾಶ್ ಪಡುಕೋಣೆ, 2019ರಲ್ಲಿ ನಡೆದ ವಿಶ್ವ ಚಾಂಪಿಯನ್ಶಿಪ್ನಲ್ಲಿ ಬಿ ಸಾಯಿ ಪ್ರಣೀತ್ ಕಂಚಿನ ಪದಕ ಗೆದ್ದಿದ್ದರು.
ಲಕ್ಷ್ಯ ಸೇನ್ ಮೊದಲ ಗೇಮ್ ಅನ್ನು 17-21 ರಿಂದ ಗೆದ್ದುಕೊಂಡರು. ಆರಂಭದಿಂದಲೇ ಲಕ್ಷ್ಯ 11-8 ಮುನ್ನಡೆ ಸಾಧಿಸಿದರು. ಮತ್ತೊಂದೆಡೆ, ಶ್ರೀಕಾಂತ್ ಪುನರಾಗಮನ ಮಾಡಲು ಪ್ರಯತ್ನಿಸಿದರು ಮತ್ತು 17-16 ಅಂಕಗಳನ್ನು ಗಳಿಸಿದರು ಆದರೆ ಸೇನ್ ಸತತ ಐದು ಅಂಕಗಳೊಂದಿಗೆ ಮೊದಲ ಗೇಮ್ ಅನ್ನು ಗೆದ್ದರು.
ಮತ್ತೊಂದೆಡೆ, ಶ್ರೀಕಾಂತ್ 21 ನಿಮಿಷಗಳಲ್ಲಿ 21-14 ರಲ್ಲಿ ಎರಡನೇ ಗೇಮ್ ಅನ್ನು ಗೆದ್ದು ಪುಟಿದೆದ್ದರು. ಮೂರನೇ ಹಾಗೂ ನಿರ್ಣಾಯಕ ಗೇಮ್ ನಲ್ಲಿ ಲಕ್ಷ್ಯ ಒಂದು ಹಂತದಲ್ಲಿ 13-10ರಲ್ಲಿ ಮುನ್ನಡೆ ಸಾಧಿಸಿದ್ದರು. ಇಂತಹ ಪರಿಸ್ಥಿತಿಯಲ್ಲಿ ಶ್ರೀಕಾಂತ್ ಧೃತಿ ಗೆಡದೆ ಅದ್ಭೂತ ಆಟವನ್ನು ಪ್ರದರ್ಶಿಸಿದರು. ಅಲ್ಲದೆ 13-13, ನಂತರ 16-16 ಅಂಕ ಗಳಿಂದ ಸಮಾನಾಂತರವಾಗಿ ಸಾಗುತ್ತಿದ್ದ ಪಂದ್ಯದಲ್ಲಿ, ಶ್ರೀಕಾಂತ್ ನಂತರ ಸತತವಾಗಿ 3 ಅಂಕಗಳನ್ನು ಕಲೆಹಾಕಿ 21-17 ಪಂದ್ಯಗಳನ್ನು ಗೆದ್ದು ಫೈನಲ್ಗೆ ಪ್ರವೇಶಿಸಿದರು.
ಆಂಧ್ರಪ್ರದೇಶದ ಗುಂಟೂರಿನವರಾದ ಕಿಡಂಬಿ ಶ್ರೀಕಾಂತ್ ಅವರು 2018 ರಲ್ಲಿ ವಿಶ್ವದ ನಂಬರ್ ಒನ್ ಆಟಗಾರರಗಿದ್ದಾರು. ಅವರು ಆಸ್ಟ್ರೇಲಿಯನ್ ಓಪನ್, ಇಂಡೋನೇಷ್ಯಾ ಓಪನ್, ಸಿಂಗಾಪುರ್ ಓಪನ್, ಚೀನಾ ಓಪನ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.