ಟೀಂ ಇಂಡಿಯಾ ಸ್ವಿಂಗ್ ಸ್ಪೆಷಲಿಸ್ಟ್ ಭುವನೇಶ್ವರ್ ಕುಮಾರ್, ಆಸೀಸ್ ನೆಲದಲ್ಲಿ ನಡೆಯುವ 2022ರ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಭಾರತ ತಂಡದ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಹೇಳಿದ್ದಾರೆ.
ಭಾರತ ತಂಡದ ಹಿರಿಯ ವೇಗಿ ಭುವನೇಶ್ವರ್ ಕುಮಾರ್ ಫಾರ್ಮ್ ಕುರಿತು ಮಾತನಾಡಿರುವ ಸುನೀಲ್ ಗವಾಸ್ಕರ್, ವೇಗಿ ಭುವನೇಶ್ವರ್ ತಮ್ಮ ಫಾರ್ಮ್ ಕಂಡುಕೊಳ್ಳಲು ಸಾಕಷ್ಟು ಶ್ರಮಿಸಿದ್ದು, ಯಾವುದೇ ವಿಶ್ರಾಂತಿ ಪಡೆಯದೆ ಸತತ ಪ್ರಯತ್ನದಿಂದ ಫಾರ್ಮ್ಗೆ ಮರಳಲು ಶ್ರಮಿಸಿದ್ದಾರೆ. ಕಳೆದ ಫಾರ್ಮ್ನಿಂದಾಗಿ ಭುವನೇಶ್ವರ್ ಕುಮಾರ್ ಅವರನ್ನು ಕಳೆದ ವರ್ಷದ ನಡೆದ ಟಿ20 ವಿಶ್ವಕಪ್ ತಂಡದಿಂದ ಕೈಬಿಡಲಾಗಿತ್ತು. ಅಲ್ಲದೇ ಸೌತ್ ಆಫ್ರಿಕಾ ಸರಣಿಯಲ್ಲೂ ಭುವನೇಶ್ವರ್ ಪ್ರದರ್ಶನ ಉತ್ತಮವಾಗಿರಲಿಲ್ಲ. ಕಳೆದ 7 ಏಕದಿನ ಪಂದ್ಯಗಳಲ್ಲಿ ಭುವಿ ಕೇವಲ 9 ವಿಕೆಟ್ಗಳನ್ನು ಮಾತ್ರ ಪಡೆದಿದ್ದಾರೆ.
ಆದರೆ ಭುವನೇಶ್ವರ್ ಫಾರ್ಮ್ಗೆ ಮರಳಿರುವುದು ಆತನ ಪರಿಶ್ರಮವನ್ನು ತೋರಿಸುತ್ತಿದ್ದು, ತಮ್ಮ ವೇಗ ಮತ್ತು ಸ್ವಿಂಗ್ ಬೌಲಿಂಗ್ ಲಯ ಕಂಡುಕೊಳ್ಳಲು ಯಶಸ್ವಿಯಾಗಿದ್ದಾರೆ. ಸೌತ್ ಆಫ್ರಿಕಾದಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವೈಫಲ್ಯ ಕಂಡಿದ್ದ ಭುವಿ, ಉತ್ತಮ ರೀತಿಯಲ್ಲಿ ಕಮ್ಬ್ಯಾಕ್ ಮಾಡಿದ್ದಾರೆ. ಟೀಂ ಇಂಡಿಯಾದ ಅನುಭವಿ ಬೌಲರ್ ಭುವಿ, ತಂಡದಲ್ಲಿ ಸ್ಥಾನ ಪಡೆಯಲು ಇರುವ ಪೈಪೋಟಿಯನ್ನು ಗಮನಿಸಿ, ಬಲಿಷ್ಠ ರೀತಿಯಲ್ಲಿ ತಂಡಕ್ಕೆ ಮರಳಿದ್ದಾರೆ.
ತಮ್ಮ ಫಾರ್ಮ್ ಸಮಸ್ಯೆ ಎದುರಾದ ಸಂದರ್ಭದಲ್ಲಿ ಹೆಚ್ಚು ಚಿಂತಿಸದ ಭುವನೇಶ್ವರ್ ಕುಮಾರ್, ಕಠಿಣ ಪರಿಶ್ರಮದಿಂದ ಬೌಲಿಂಗ್ ಫಾರ್ಮ್ನಲ್ಲಿ ಸುಧಾರಣೆಯನ್ನು ಕಂಡುಕೊಂಡಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾದಲ್ಲಿ ನಡೆಯುವ 2022ರ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ನಿಟ್ಟಿನಲ್ಲಿ ಭುವನೇಶ್ವರ್ ಕುಮಾರ್ ಪ್ರಯತ್ನ ಆರಂಭವಾಗಿದ್ದು, ಖಂಡಿತವಾಗಿ ಅವರು ಟಿ20 ವಿಶ್ವಕಪ್ ತಂಡದ ಚೌಕಟ್ಟಿನಲ್ಲಿ ಇರಲಿದ್ದಾರೆ ಎಂದು ಸುನೀಲ್ ಗವಾಸ್ಕರ್ ಸ್ಟಾರ್ ಸ್ಪೋರ್ಟ್ಸ್ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಇತ್ತೀಚಿಗೆ ತಂಡಕ್ಕೆ ಕಮ್ಬ್ಯಾಕ್ ಮಾಡಿರುವ ಭುವನೇಶ್ವರ್ ಕುಮಾರ್, ವೆಸ್ಟ್ ಇಂಡೀಸ್ ವಿರುದ್ಧ ಹಾಗೂ ಪ್ರಸ್ತುತ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 2 ಓವರ್ಗಳಲ್ಲಿ ಕೇವಲ 9 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದ್ದರು.