ಟೀಂ ಇಂಡಿಯಾ(Team India) ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭಕ್ಕೆ ಎರಡು ದಿನಗಳಷ್ಟೇ ಬಾಕಿಯಿರುವ ಬೆನ್ನಲ್ಲೇ ಬಾಂಗ್ಲಾದೇಶ(Bangladesh) ತಂಡದ ನಾಯಕತ್ವದ ಜವಾಬ್ದಾರಿಯನ್ನ ಲಿಟನ್ ದಾಸ್ ಅವರಿಗೆ ನೀಡಲಾಗಿದೆ.
ಬಾಂಗ್ಲಾ ತಂಡದ ಹಿರಿಯ ಆಟಗಾರ ತಮೀಮ್ ಇಕ್ಬಾಲ್ ಅವರು ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ತಂಡವನ್ನ ಮುನ್ನಡೆಸಬೇಕಿತ್ತು. ಆದರೆ ಅಭ್ಯಾಸ ಪಂದ್ಯದ ವೇಳೆ ತಮೀಮ್ ಇಕ್ಬಾಲ್ ಗಾಯಗೊಂಡ ಪರಿಣಾಮ ಏಕದಿನ ಸರಣಿಯಿಂದ ಹೊರಗುಳಿಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ(ಬಿಸಿಬಿ), ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ಬಾಂಗ್ಲಾ ತಂಡವನ್ನ ಮುನ್ನಡೆಸುವ ಜವಾಬ್ದಾರಿಯನ್ನ ಲಿಟನ್ ದಾಸ್ ಅವರಿಗೆ ನೀಡಿದೆ.
ಬಾಂಗ್ಲಾದೇಶ ತಂಡದ ಪ್ರಮುಖ ಬ್ಯಾಟ್ಸ್ಮನ್ ಆಗಿರುವ ಲಿಟನ್ ದಾಸ್, ಒಂದು ಬಾರಿ ತಂಡವನ್ನ ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಈ ಹಿಂದೆ 2021ರ ಏಪ್ರಿಲ್ನಲ್ಲಿ ನ್ಯೂಜಿ಼ಲೆಂಡ್ ವಿರುದ್ಧ ಆಕ್ಲೆಂಡ್ನಲ್ಲಿ ನಡೆದ ಟಿ20 ಪಂದ್ಯದಲ್ಲಿ ತಂಡದ ನಾಯಕನಾಗಿದ್ದರು. ಈ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಲಿಟನ್ ದಾಸ್, ಗೋಲ್ಡನ್ ಡಕ್ ಆಗಿ ನಿರಾಸೆ ಅನುಭವಿಸಿದ್ದರು. ಅಲ್ಲದೇ ಬಾಂಗ್ಲಾದೇಶ 65 ರನ್ಗಳ ಅಂತರದಿಂದ ಈ ಪಂದ್ಯವನ್ನ ಸೋತಿತ್ತು. ಆದರೆ ಇದೀಗ ಮತ್ತೊಮ್ಮೆ ತಂಡವನ್ನ ಮುನ್ನಡೆಸುವ ಜವಾಬ್ದಾರಿ ಲಿಟನ್ ದಾಸ್ ಅವರಿಗೆ ಸಿಕ್ಕಿದೆ.
ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಡಿಸೆಂಬರ್ 4ರಿಂದ ಆರಂಭವಾಗಲಿದೆ. ಉಭಯ ತಂಡಗಳ ನಡುವಿನ ಮೊದಲ ಏಕದಿನ ಪಂದ್ಯ ಢಾಕಾದಲ್ಲಿ ನಡೆಯಲಿದ್ದು, ಇದಕ್ಕಾಗಿ ಎರಡು ತಂಡಗಳು ಭರ್ಜರಿ ತಯಾರಿ ಮಾಡಿಕೊಂಡಿವೆ.