ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಆರ್ಥಿಕ ಪರಿಸ್ಥಿತಿ ಬಿಗಾಡಾಯಿಸಿದೆ. ತುತ್ತ ಅನ್ನಕ್ಕೂ ಪರದಾಡುವ ಸ್ಥಿತಿ ತಲುಪಿದೆ. ಹಣದ ಹರಿವು ನಿಂತಿರುವುದರಿಂದ ಜೀವನ ದುಬಾರಿ ಆಗುತ್ತಿದೆ. ಇದರ ಬಿಸಿ ಈಗ ಕ್ರಿಕೆಟ್ಗೂ ತಟ್ಟುವ ಸಾಧ್ಯತೆ ಇದೆ. ಪ್ರತಿಷ್ಠಿತ ಟೂರ್ನಿ ಶ್ರೀಲಂಕಾದಿಂದ ಬೇರೆಡೆಗೆ ಸ್ಥಳಾಂತರ ಆಗುವ ಸಾಧ್ಯತೆ ಹೆಚ್ಚಿದೆ.
ಈ ವರ್ಷ ಆಗಸ್ಟ್ 27ರಿಂದ ಸೆಪ್ಟೆಂಬರ್ 11ರ ವರೆಗೂ ಶ್ರೀಲಂಕಾದಲ್ಲಿ ಏಷ್ಯಾಕಪ್ ಟಿ20 ಟೂರ್ನಿ ನಡೆಯಬೇಕಿದೆ. ಆದರೆ ಶ್ರೀಲಂಕಾದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿರುವ ಹಿನ್ನೆಲೆಯಲ್ಲಿ ಪಂದ್ಯಾವಳಿಯನ್ನು ಆಯೋಜಿಸುವ ಪರಿಸ್ಥಿತಿಯಲ್ಲಿ ದ್ವೀಪ ರಾಷ್ಟ್ರ ಇಲ್ಲ. ಹೀಗಾಗಿ ಟೂರ್ನಿಯನ್ನು ಬೇರೆಡೆಗೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈ ಸಂಬಂಧ ಏಷ್ಯನ್ ಕ್ರಿಕೆಟ್ ಸಮಿತಿ ಸದ್ಯದಲ್ಲೇ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ. 15ನೇ ಆವೃತ್ತಿಯ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯನ್ನು ಟಿ20 ಮಾದರಿಯಲ್ಲಿ ನಡೆಯಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ತೀರ್ಮಾನಿಸಿತ್ತು. ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ ಹಾಗೂ ನವೆಂಬರ್ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು, ಏಷ್ಯಾಕಪ್ ಕ್ರಿಕೆಟ್ ಟೂರ್ನಿಯನ್ನು ಟಿ20 ಮಾದರಿಯಲ್ಲಿ ನಡೆಸಲು ಆಯೋಜಕರು ತೀರ್ಮಾನಿಸಿದ್ದರು.
2020ರ ಟೂರ್ನಿ ಕೋವಿಡ್ನಿಂದ (COVID 19) ಮುಂದೂಡಿಕೆಯಾಗಿತ್ತು. ಬಳಿಕ ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಪಂದ್ಯಾವಳಿಯನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಲಾಗಿತ್ತು. ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಏಷ್ಯಾಕಪ್ ಟೂರ್ನಿಗೂ ಮುನ್ನ ರಾಜಪಕ್ಸಾ ನೇತೃತ್ವದ ಶ್ರೀಲಂಕಾ ಸರ್ಕಾರವು ಆರ್ಥಿಕ ದಿವಾಳಿತನವಾಗುವತ್ತ ಸಾಗುತ್ತಿದೆ. ಹಾಲಿ ಚಾಂಪಿಯನ್ ಭಾರತ, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನ ತಂಡಗಳು ಅರ್ಹತೆಯಯನ್ನು ಗಿಟ್ಟಿಸಿಕೊಂಡಿವೆ. ಇನ್ನೊಂದು ತಂಡವು ಅಹರ್ತಾ ಸುತ್ತಿನಲ್ಲಿ ವಿಜೇತರಾಗಿ ಪ್ರಧಾನ ಸುತ್ತಿಗೆ ಪ್ರವೇಶ ಪಡೆಯಲಿದೆ. ಅರ್ಹತಾ ಸುತ್ತಿನ ಪಂದ್ಯಗಳು ಆಗಸ್ಟ್ 20ರಿಂದ ಆರಂಭವಾಗಲಿದೆ.