ಕೊಹ್ಲಿಯನ್ನು ಕಾಡ್ತಿದ್ಯಾ “ಕುಂಬ್ಳೆ” ಕರ್ಮಫಲ..? virat kohli sportskarnataka
ಕರ್ಮ ಯಾರನ್ನೂ ಬಿಡುವುದಿಲ್ಲ. ಮಾಡಿದ ಕರ್ಮಕ್ಕೆ ಪ್ರತಿಫಲ ಅನುಭವಿಸಲೇಬೇಕು. ಇದು ಜಗದ ನಿಯಮ, ಪ್ರಕೃತಿ ನಿಯಮ. ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ವಿಚಾರದಲ್ಲಿ ಈ ಮಾತು ನಿಜವಾಯ್ತಾ.? ಇಂಥದ್ದೊಂದು ಪ್ರಶ್ನೆ ಏಳಲು ಕಾರಣ ಭಾರತೀಯ ಕ್ರಿಕೆಟ್’ನಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳು.
ಭಾರತೀಯ ಕ್ರಿಕೆಟ್ ಕಳೆದ 10 ದಿನಗಳಲ್ಲಿ ಭಾರೀ ವಿಪ್ಲವಕ್ಕೆ ಸಾಕ್ಷಿಯಾಗಿದೆ. ಸ್ವಇಚ್ಛೆಯಿಂದ ಟಿ20 ತಂಡದ ನಾಯಕತ್ವ ತ್ಯಜಿಸಿದ್ದ ವಿರಾಟ್ ಕೊಹ್ಲಿಯವರನ್ನು ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಲಾಗಿದೆ. ವಿರಾಟ್ ಕೊಹ್ಲಿ ಅವರೇ ಹೇಳಿದಂತೆ ಕೇವಲ ಒಂದೂವರೆ ಗಂಟೆ ಮೊದಲು ಈ ಬಗ್ಗೆ ಕೊಹ್ಲಿಗೆ ಮಾಹಿತಿ ನೀಡಲಾಗಿತ್ತು. ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಭಾರತ ತಂಡವನ್ನು ಪವರ್ ಹೌಸ್ ಆಗಿಸಿದ್ದ ವಿರಾಟ್ ಕೊಹ್ಲಿ ಈಗ ಕೇವಲ ಟೆಸ್ಟ್ ತಂಡದ ನಾಯಕ. 2023ರ ವಿಶ್ವಕಪ್ ಟೂರ್ನಿಯವರೆಗೆ ಏಕದಿನ ತಂಡದ ನಾಯಕನಾಗಿರಲು ಬಯಸಿದ್ದ ವಿರಾಟ್ ಕೊಹ್ಲಿ ಕನಸಿಗೆ ಬಿಸಿಸಿಐ ಕೊಳ್ಳಿ ಇಟ್ಟಿದೆ.
ಹಾಗಾದರೆ ಇದು ವಿರಾಟ್ ಕೊಹ್ಲಿಯನ್ನು ಕಾಡುತ್ತಿರುವ ಕರ್ಮಫಲವೇ.? ಹೌದು ಅಂತಿದ್ದಾರೆ ಕರ್ನಾಟಕದ ಕ್ರಿಕೆಟ್ ಪ್ರಿಯರು. ಅಷ್ಟಕ್ಕೂ ವಿರಾಟ್ ಕೊಹ್ಲಿಗೆ ಬಿಸಿಸಿಐನಲ್ಲಿ ಅವಮಾನವಾಗಿರುವುದಕ್ಕೂ, ಕರ್ನಾಟಕದ ಕ್ರಿಕೆಟ್’ಗೂ ಏನು ಸಂಬಂಧ.? ಸಂಬಂಧವಿದೆ. 2017ರಲ್ಲಿ ಕರ್ನಾಟಕದ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಭಾರತ ಕ್ರಿಕೆಟ್ ತಂಡದ ಕೋಚ್ ಹುದ್ದೆಗೆ ದಿಢೀರ್ ರಾಜೀನಾಮೆ ನೀಡಿ ಹೊರ ನಡೆದ ಘಟನೆಯನ್ನು ಕನ್ನಡಿಗರು ಇನ್ನೂ ಮರೆತಿಲ್ಲ. ಅವತ್ತು ಭಾರತ ತಂಡದಲ್ಲಿ ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ಅನಿಲ್ ಕುಂಬ್ಳೆ ಮಧ್ಯೆ ದೊಡ್ಡ ಶೀತಲ ಯುದ್ಧವೇ ನಡೆದಿತ್ತು. ತರಬೇತುದಾರರಾಗಿ ಅನಿಲ್ ಕುಂಬ್ಳೆಯವರ ಕಾರ್ಯವೈಖರಿ ನಾಯಕ ವಿರಾಟ್ ಕೊಹ್ಲಿಗೆ ಇಷ್ಟವಾಗುತ್ತಿರಲಿಲ್ಲ. ಕೊಹ್ಲಿ ಜೊತೆಗಿನ ಭಿನ್ನಾಭಿಪ್ರಾಯದಿಂದಲೇ 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಸೋತ ಮರುಕ್ಷಣವೇ ಅನಿಲ್ ಕುಂಬ್ಳೆ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಟೀಮ್ ಇಂಡಿಯಾ ಜೊತೆಗಿನ ಕುಂಬ್ಳೆಯವರ ಕೋಚಿಂಗ್ ಪಯಣ ಕೇವಲ ಒಂದೇ ವರ್ಷದಲ್ಲಿ ಕೊನೆಗೊಂಡಿತ್ತು.
ಕರ್ನಾಟಕದ ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆಗೆ ಟೀಮ್ ಇಂಡಿಯಾದಲ್ಲಿ ಅವಮಾನವಾಗಿದ್ದು ವಿರಾಟ್ ಕೊಹ್ಲಿ ಕಾರಣದಿಂದ, ಆ ಕರ್ಮಫಲವನ್ನು ಈಗ ಕೊಹ್ಲಿ ಅನುಭವಿಸುತ್ತಿದ್ದಾರೆ ಅಂತ ಕರ್ನಾಟಕದ ಕ್ರಿಕೆಟ್ ಪ್ರಿಯರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲೂ ದೊಡ್ಡ ಚರ್ಚೆ ನಡೆಯುತ್ತಿದೆ. ಆದರೆ ಅನಿಲ್ ಕುಂಬ್ಳೆ ಕೋಚ್ ಆಗಿರ್ಲಿಲ್ಲ, ರಿಂಗ್ ಮಾಸ್ಟರ್ ಆಗಿದ್ದರು, ಹೀಗಾಗಿ ಅವರ ಕೋಚಿಂಗ್ ಕಾರ್ಯವೈಖರಿ ವಿರಾಟ್ ಕೊಹ್ಲಿಗೆ ಇಷ್ಟವಾಗಲಿಲ್ಲ ಅಂತ ಟೀಮ್ ಇಂಡಿಯಾ ಮೂಲಗಳು ಹೇಳುತ್ತವೆ. ಇದೇನೇ ಇದ್ರೂ ಕುಂಬ್ಳೆ ಕೋಚ್ ಹುದ್ದೆ ಕಳೆದುಕೊಂಡಿದ್ದಕ್ಕೂ, ಈಗ ವಿರಾಟ್ ಕೊಹ್ಲಿ ಏಕದಿನ ತಂಡದ ನಾಯಕತ್ವ ಕಳೆದುಕೊಂಡಿದ್ದಕ್ಕೂ “ಕರ್ಮಫಲ”ದ ಬೆಸುಗೆ ಬೆಸೆದುಕೊಂಡಿದೆ.