suresh raina – ಮಿಸ್ಟರ್ ಐಪಿಎಲ್ಗೆ ಮುಚ್ಚಿದ ಬಾಗಿಲು..! ಯಾಕಂದ್ರೆ..?
ಐಪಿಎಲ್ ನಲ್ಲಿ ಸುರೇಶ್ ರೈನಾ ಅಂದಾಗ ತಕ್ಷಣ ಸಿಎಸ್ ಕೆ ಅಭಿಮಾನಿಗಳು ಪ್ರೀತಿಯಿಂದ ಕರೆಯುವುದು ಚಿನ್ನ ತಲಾ ಅಂತ.
ಕಳೆದ 12 ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಧಾರ ಸ್ತಂಭವಾಗಿದ್ದವರು ಸುರೇಶ್ ರೈನಾ. ಕಳೆದ ಐಪಿಎಲ್ ನಲ್ಲಿ ಕಳಪೆ ಪ್ರದರ್ಶನ ನೀಡಿರುವುದನ್ನು ಹೊರತುಪಡಿಸಿ ಸುರೇಶ್ ರೈನಾ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗೆಲುವಿನ ರೂವಾರಿಯಾಗುತ್ತಿದ್ದರು. ಬ್ಯಾಟಿಂಗ್, ಕೆಲವೊಂದು ಬಾರಿ ಬೌಲಿಂಗ್ ಮಾಡುತ್ತಿದ್ದ ಸುರೇಶ್ ರೈನಾ ಅದ್ಭುತ ಫೀಲ್ಡರ್ ಕೂಡ ಹೌದು.
ಆದ್ರ 2022ರ ಐಪಿಎಲ್ ನ ಹತ್ತು ಫ್ರಾಂಚೈಸಿಗಳಿಗೂ ಸುರೇಶ್ ರೈನಾ ಬೇಡವಾಗಿದ್ದರು. ಎರಡು ಕೋಟಿ ಮೂಲ ಬೆಲೆಯನ್ನು ಹೊಂದಿದ್ದ ರೈನಾ ಅವರು ಅನ್ ಸೋಲ್ಡ್ ಪ್ಲೇಯರ್ ಆಗಿರೋದು ಬೇಸರವನ್ನುಂಟು ಮಾಡುತ್ತಿದೆ.
ಹಾಗೇ ನೋಡಿದ್ರೆ ಸುರೇಶ್ ರೈನಾ ಚೆನ್ನೈ ತಂಡವನ್ನು ಮತ್ತೆ ಸೇರಿಕೊಳ್ಳುತ್ತಾರೆ ಅಂತ ಅಭಿಮಾನಿಗಳು ಕೂಡ ನಿರೀಕ್ಷೆ ಮಾಡಿದ್ದರು. ಆದ್ರೆ ಸಿಎಸ್ ಕೆ ಬಿಡ್ಡಿಂಗ್ ನಲ್ಲಿ ಸುರೇಶ್ ರೈನಾ ಹೆಸರು ಕರದಾಗ ಮೌನಕ್ಕೆ ಶರಣಾಯ್ತು. ಇನ್ನು ಚೆನ್ನೈಗೆ ಬೇಡವಾದ ರೈನಾ ಅವರನ್ನು ಬೇರೆ ತಂಡಗಳು ಕೂಡ ಖರೀದಿ ಮಾಡುವ ಮನಸ್ಸು ಮಾಡಲಿಲ್ಲ.
ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ, ಶಿಖರ್ ಧವನ್, ರೋಹಿತ್ ಶರ್ಮಾ ಅವರನ್ನು ಬಿಟ್ಟು ಗರಿಷ್ಠ ರನ್ ದಾಖಲಿಸಿದ್ದ ಹಿರಿಮೆ ಕೂಡ ರೈನಾ ಅವರದ್ದಾಗಿದೆ. 5528 ರನ್ ದಾಖಲಿಸಿರುವ ಸುರೇಶ್ ರೈನಾ ಅವರು ಸಿಎಸ್ ಕೆ ಪರ ಗರಿಷ್ಠ 425 ಬೌಂಡರಿಗಳನ್ನು ಸಿಡಿಸಿದ್ದ ದಾಖಲೆಯೂ ಇದೆ.
ಅದೇನೇ ಇರಲಿ, ಸುರೇಶ್ ರೈನಾ ಕನಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ಗೆ ಯಾಕೆ ಬೇಡವಾದ್ರೂ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಸುರೇಶ್ ರೈನಾ ಅವರ ಆಪ್ತ ಗೆಳೆಯ . ಧೋನಿ ಮತ್ತು ರೈನಾ ಒಬ್ಬರೊನ್ನೊಬ್ಬರು ಬಿಟ್ಟುಕೊಡಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಒಂದೇ ದಿನ ವಿದಾಯ ಹೇಳಿದವರು. ಜೊತೆಯಾಗಿ ಕಳೆದ 12 ವರ್ಷಗಳಿಂದ ಸಿಎಸ್ ಕೆ ತಂಡದ ಪರ ಆಡಿದ್ದವರು. ಧೋನಿಯ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು ರೈನಾ. ಅಂತಹುದರಲ್ಲಿ ಧೋನಿ ಯಾಕೆ ರೈನಾ ಅವರನ್ನು ಕೈಬಿಟ್ರು ಎಂಬುದೇ ಅಚ್ಚರಿಗೆ ಕಾರಣವಾಗುತ್ತಿದೆ.IPL 2022: ‘Mr IPL’ Suresh Raina goes unsold
ಇನ್ನೊಂದೆಡೆ ಸುರೇಶ್ ರೈನಾ ಮತ್ತು ಸಿಎಸ್ ಕೆ ಮ್ಯಾನೇಜ್ ಮೆಂಟ್ ನಡುವೆ 2020ರ ಐಪಿಎಲ್ ನಲ್ಲಿ ಜಟಾಪಟಿ ನಡೆದಿದ್ದು ಗೊತ್ತಿರುವ ವಿಚಾರವೇ. ಆದ್ರೂ ಕಳೆದ ಬಾರಿ ಸುರೇಶ್ ರೈನಾ ಚೆನ್ನೈ ಪರವಾಗಿಯೇ ಆಡಿದ್ದರು. ಆದ್ರೆ ಸಿಎಸ್ಕೆ ಮ್ಯಾನೇಜ್ ಮೆಂಟ್ ಜೊತೆಗೆ ಸುರೇಶ್ ರೈನಾ ಮತ್ತೆ ಕಿರಿಕ್ ಮಾಡಿಕೊಂಡಿದ್ರಾ ಅನ್ನೋ ಪ್ರಶ್ನೆ ಕೂಡ ಎದುರಾಗುತ್ತಿದೆ. ಅಷ್ಟೇ ಅಲ್ಲ ಪ್ರತಿ ಬಾರಿಯೂ ರೈನಾ ಅವರನ್ನು ಸಿಎಸ್ ಕೆ ರಿಟೇನ್ ಮಾಡಿಕೊಳ್ಳುತ್ತಿತ್ತು. ಈ ಬಾರಿ ಏನಾದ್ರೂ ರೈನಾ ಹೆಚ್ಚಿನ ಮೊತ್ತಕ್ಕೆ ಬೇಡಿಕೆ ಇಟ್ಟಿದ್ರಾ ಅನ್ನೋ ಅನುಮಾನ ಕೂಡ ಮೂಡುತ್ತಿದೆ.
ಆದ್ರೂ ಧೋನಿಯ ಮಾತನ್ನು ಪರಿಪಾಲಿಸುವ ರೈನಾ ಈ ಬಾರಿ ಧೋನಿಗೂ ಬೇಡವಾದ್ರಾ ? ಅಪ್ತ ಸ್ನೇಹಿತರ ನಡುವೆ ಮನಸ್ತಾಪ ಬಂದಿದೆಯಾ ಅನ್ನೋ ಪ್ರಶ್ನೆ ಕೂಡ ಎದುರಾಗುತ್ತದೆ.
ಇನ್ನೊಂದು ಪ್ರಮುಖ ಕಾರಣ ಸುರೇಶ್ ರೈನಾ ಫಾರ್ಮ್ ನಲ್ಲಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ದೇಸಿ ಪಂದ್ಯಗಳನ್ನು ಆಡಲು ಟೂರ್ನಿಗಲು ನಡೆದಿಲ್ಲ. ಮತ್ತೆ ಫಾರ್ಮ್ ಕಂಡುಕೊಳ್ಳುವ ಪ್ರಯತ್ನವನ್ನು ಕೂಡ ರೈನಾ ಮಾಡಲಿಲ್ಲ. ಹೀಗಾಗಿ ಸುರೇಶ್ ರೈನಾ ಈ ಬಾರಿಯ ಐಪಿಎಲ್ ನಲ್ಲಿ ಯಾರಿಗೂ ಬೇಡವಾದ್ರು.
ಒಟ್ಟಿನಲ್ಲಿ ಸುರೇಶ್ ರೈನಾ ಅವರ ಐಪಿಎಲ್ ಕ್ರಿಕೆಟ್ ಬದುಕು ಅಲ್ ಮೋಸ್ಟ್ ಮುಗಿದಂತಿದೆ. ರಾಜಕೀಯದ ಕಡೆಗೆ ಒಲವು ಇರುವ ರೈನಾ ಮುಂದಿನ ದಿನಗಳಲ್ಲಿ ರಾಜಕಾರಣಿಯಾಗುತ್ತಾರಾ ಅನ್ನೋ ಕುತೂಹಲವೂ ಇದೆ.