ಮಹೇಂದ್ರ ಸಿಂಗ್ ಧೋನಿ ವಿಶ್ವಶ್ರೇಷ್ಠ ನಾಯಕನಾಗಿದ್ದು ಹೇಗೆ.? ಟೀಮ್ ಇಂಡಿಯಾವನ್ನು ಯಶಸ್ಸಿನ ಪಥದಲ್ಲಿ ಮುನ್ನಡೆಸಿದ್ದು ಹೇಗೆ.? ಧೋನಿ ನಾಯಕತ್ವದ ಯಶಸ್ಸಿನ ಗುಟ್ಟೇನು.? ಈ ಪ್ರಶ್ನೆಗಳನ್ನು ಕೇಳಿದ್ರೆ ಒಬ್ಬೊಬ್ಬರು ಒಂದೊಂದು ಉತ್ತರ ಕೊಡ್ತಾರೆ. ಯಾಕಂದ್ರೆ ಈ ದೇಶದಲ್ಲಿ ಗಲ್ಲಿಯಿಂದ ಡೆಲ್ಲಿಯವರೆಗೆ ಎಲ್ಲರೂ ಕ್ರಿಕೆಟ್ ಪರಿಣತರೇ. ಅದು ಕ್ರಿಕೆಟ್ ಧರ್ಮವಾಗಿರುವ ಭಾರತದ ವಿಶೇಷತೆ.
ಧೋನಿ ನಾಯಕತ್ವದ ಯಶಸ್ಸಿಗೆ ಹಲವಾರು ಕಾರಣಗಳಿಗೆ. ಧೋನಿ ಚಾಕಚಕ್ಯತೆ, ಸಂಯಮ, ಸಂದರ್ಭಕ್ಕೆ ತಕ್ಕಂತೆ ನಿರ್ಧಾರ ಕೈಗೊಳ್ಳುವ ಚತುರತೆ, On the spot ಪ್ಲಾನಿಂಗ್… ಹೀಗೆ ಧೋನಿ ಯಶಸ್ಸಿಗೆ ಕಾರಣವಾದ ಅಂಶಗಳು ಹತ್ತು ಹಲವು. ಇದರ ಜೊತೆ ಧೋನಿ ಹಿಂದೆ ಅರ್ಜುನನಂತೆ ನಿಂತಿದ್ದ ಒಬ್ಬ ಆಟಗಾರನಿದ್ದಾರೆ. ಧೋನಿ ಶ್ರೀಕೃಷ್ಣನಾದ್ರೆ ಆತನೇ ಅರ್ಜುನ. ಅವರ ಹೆಸರು ವಿರಾಟ್ ಕೊಹ್ಲಿ.
ಎಂ.ಎಸ್ ಧೋನಿ ನಾಯಕರಾಗಿದ್ದಾಗ ಐದಾರು ವರ್ಷಗಳ ಕಾಲ ಉಪನಾಯಕರಾಗಿದ್ದದ್ದು ವಿರಾಟ್ ಕೊಹ್ಲಿ. ನಾಯಕನಿಗೆ ಉಪನಾಯಕನೊಬ್ಬ ಹೇಗೆ ಸಾಥ್ ಕೊಡ್ಬೇಕು ಎಂಬುದಕ್ಕೆ ಒಳ್ಳೆಯ ಉದಾಹರಣೆ ವಿರಾಟ್ ಕೊಹ್ಲಿ. ಧೋನಿ ನಾಯಕತ್ವದಲ್ಲಿ ಉಪನಾಯಕನಾಗಿ ವಿರಾಟ್ ನಿರ್ವಹಿಸಿದ ಪಾತ್ರ ಅತ್ಯಂತ ಮಹತ್ವದ್ದು. ಬ್ಯಾಟಿಂಗ್ ವಿಭಾಗದಲ್ಲಿ ಮುಂಚೂಣಿಯಲ್ಲಿ ನಿಂತು ತಂಡವನ್ನು ಗೆಲ್ಲಿಸುತ್ತಿದ್ದದ್ದು ಕಿಂಗ್ ಕೊಹ್ಲಿ. 2016ರ ಐಸಿಸಿ ಟಿ20 ವಿಶ್ವಕಪ್’ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಡು ಆರ್ ಡೈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಡಿದ್ದ ಅದ್ಭುತ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಇದಕ್ಕೊಂದು ಉದಾಹರಣೆಯಷ್ಟೇ. ಕಾಮನ್ವೆಲ್ತ್ ಬ್ಯಾಂಕ್ ತ್ರಿಕೋನ ಸರಣಿಯಲ್ಲಿ ಕೊಹ್ಲಿ ಆಡಿದ ಸ್ಫೋಟಕ ಇನ್ನಿಂಗ್ಸ್ ಇರಲಿ, ಏಷ್ಯಾ ಕಪ್ ಫೈನಲ್”ನಲ್ಲಿ ಪಾಕಿಸ್ತಾನ ವಿರುದ್ಧ ಬಾರಿಸಿದ 183 ರನ್ ಇರಲಿ. ಅವೆಲ್ಲಾ ಧೋನಿ ನಾಯಕತ್ವದಲ್ಲಿ ವಿರಾಟ್ ಕೊಹ್ಲಿ ಉಪನಾಯಕನಾಗಿ ಅಬ್ಬರಿಸಿದ್ದ ದಿನಗಳು. ತಾವೂ ಗೆಲ್ಲುತ್ತಾ, ತಂಡವನ್ನೂ ಗೆಲ್ಲಿಸುತ್ತಾ, ನಾಯಕ ಧೋನಿಗೂ ಯಶಸ್ಸು ತಂದು ಕೊಟ್ಟವರು ವಿರಾಟ್ ಕೊಹ್ಲಿ.
ಈಗ ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡಕ್ಕಷ್ಟೇ ನಾಯಕ. ಏಕದಿನ ಹಾಗೂ ಟಿ20 ತಂಡದ ನಾಯಕತ್ವ ರೋಹಿತ್ ಶರ್ಮಾ ಪಾಲಾಗಿದೆ. ರೋಹಿತ್ ಶರ್ಮಾಗೆ ಡೆಪ್ಯುಟಿಯಾಗಿ ಕನ್ನಡಿಗ ಕೆ.ಎಲ್ ರಾಹುಲ್ ಸೀಮಿತ ಓವರ್”ಗಳ ತಂಡಕ್ಕೆ ಉಪನಾಯಕರಾಗಿದ್ದಾರೆ. ರೋಹಿತ್ ನಾಯಕತ್ವದಲ್ಲಿ ಯಶಸ್ವಿಯಾಗಬೇಕಾದರೆ ಉಪನಾಯಕ ರಾಹುಲ್ ಪಾತ್ರ ನಿರ್ಣಾಯಕ. ಧೋನಿಗೆ ವಿರಾಟ್ ಕೊಹ್ಲಿ ಶಕ್ತಿಯಾಗಿದ್ದರಲ್ಲ, ಅದೇ ರೀತಿ.
ಹಾಗ್ ನೋಡಿದ್ರೆ ವಿರಾಟ್ ಕೊಹ್ಲಿ ಏಕದಿನ ಹಾಗೂ ಟಿ20 ತಂಡಗಳ ನಾಯಕರಾಗಿದ್ದಾಗ ಉಪನಾಯಕರಾಗಿದ್ದದ್ದು ರೋಹಿತ್ ಶರ್ಮಾ. ಆದರೆ ಐಸಿಸಿ ನಾಕೌಟ್ ಪಂದ್ಯಗಳಲ್ಲಿ ರೋಹಿತ್ ಶರ್ಮಾ ದೊಡ್ಡ ಇನ್ನಿಂಗ್ಸ್ ಆಡಿದ್ದೇ ಇಲ್ಲ. ತಂಡ ಹಾಗೂ ವಿರಾಟ್ ಕೊಹ್ಲಿಯನ್ನು ರೋಹಿತ್ ಶರ್ಮಾ ನಡುನೀರಲ್ಲಿ ಕೈಬಿಟ್ಟ ಉದಾಹರಣೆಗಳೇ ಹೆಚ್ಚು. ಆದರೆ ವಿರಾಟ್ ಕೊಹ್ಲಿ ಧೋನಿ ನಾಯಕತ್ವದಲ್ಲಿ ಉಪನಾಯಕನಾಗಿ ಅದ್ಭುತ ಆಟವಾಡಿದ್ದಾರೆ. ಈಗ ರೋಹಿತ್ ಶರ್ಮಾ ನಾಯಕತ್ವದ ಭವಿಷ್ಯ ಉಪನಾಯಕ ಕೆ.ಎಲ್ ರಾಹುಲ್ ಆಟದ ಮೇಲೆ ನಿಂತಿದೆ.
ಬಂಗಾಳದ ಹುಲಿ, ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಟೀಮ್ ಇಂಡಿಯಾ ನಾಯಕನಾಗಿ ಯಶಸ್ಸು ಕಂಡಿದ್ದರೆ, ಅದರಲ್ಲಿ ಉಪನಾಯಕ ರಾಹುಲ್ ದ್ರಾವಿಡ್ ಪಾತ್ರ ದೊಡ್ಡದು. ಟೆಸ್ಟ್ ಇರಲಿ, ಏಕದಿನ ಪಂದ್ಯಗಳಿರಲಿ, ಗಂಗೂಲಿಗೆ ಸಮರ್ಥವಾಗಿ ಸಾಥ್ ಕೊಟ್ಟಿದ್ದ ದ್ರಾವಿಡ್, ದಾದಾದ ನಾಯಕತ್ವದಲ್ಲಿ ಭಾರತ ತಂಡದ ಯಶಸ್ಸಿಗೆ ಕಾರಣರಾಗಿದ್ದರು. ಧೋನಿಗೆ ಕೊಹ್ಲಿ, ಗಂಗೂಲಿಗೆ ದ್ರಾವಿಡ್ ನಿಭಾಯಿಸಿದ್ದ ಪಾತ್ರಗಳನ್ನು ರೋಹಿತ್ ನಾಯಕತ್ವದಲ್ಲಿ ಕೆ.ಎಲ್ ರಾಹುಲ್ ಅವರಿಂದ ನಿರೀಕ್ಷಿಸಲಾಗಿದೆ.