ಅತಿಥೇಯ ವೆಸ್ಟ್ ಇಂಡೀಸ್ ಹಾಗೂ ಪ್ರವಾಸಿ ಭಾರತ ನಡುವಿನ ಏಕದಿನ ಸರಣಿಯ 3ನೇ ಪಂದ್ಯ ಇಂದು ನಡೆಯಲಿದ್ದು, ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಿರುವ ಎರಡು ತಂಡಗಳು ಸರಣಿ ಗೆಲುವಿನ ನಿರೀಕ್ಷೆ ಹೊತ್ತು ಅಂತಿಮ ಪಂದ್ಯಕ್ಕಾಗಿ ಸಜ್ಜಾಗಿವೆ.
ಉಭಯ ತಂಡಗಳ ಅಂತಿಮ ಕದನಕ್ಕೆ ಟ್ರಿನಿಡಾಡ್ನ ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ ಸ್ಟೇಡಿಯಂನಲ್ಲಿ ವೇದಿಕೆ ನಿರ್ಮಾಣವಾಗಿದೆ. ಮೂರು ಪಂದ್ಯಗಳ ಸರಣಿ ಮೊದಲ ಪಂದ್ಯದಲ್ಲಿ ಭಾರತ 5 ವಿಕೆಟ್ಗಳ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿತ್ತು. ಆದರೆ 2ನೇ ಪಂದ್ಯದಲ್ಲಿ ಬಲಿಷ್ಠ ಕಮ್ಬ್ಯಾಕ್ ಮಾಡಿದ್ದ ವೆಸ್ಟ್ ಇಂಡೀಸ್ ಸಹ 5 ವಿಕೆಟ್ಗಳ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ಸರಣಿ 1-1ರಿಂದ ಸಮಗೊಂಡಿದ್ದು, ಇಂದು ನಡೆಯಲಿರುವ ಪಂದ್ಯವನ್ನ ಗೆದ್ದು ಪ್ರಶಸ್ತಿ ತಮ್ಮದಾಗಿಸಿಕೊಳ್ಳುವ ಲೆಕ್ಕಾಚಾರದೊಂದಿಗೆ ಎರಡು ತಂಡಗಳು ತಮ್ಮ ರಣತಂತ್ರ ರೂಪಿಸಿಕೊಂಡಿವೆ.
ಮೊದಲ ಪಂದ್ಯದಲ್ಲಿ ಅತಿಥೇಯ ವೆಸ್ಟ್ ಇಂಡೀಸ್, ಬ್ಯಾಟಿಂಗ್ ವೈಫಲ್ಯ ಕಂಡಿತ್ತು. ಅದರಂತೆ 2ನೇ ಪಂದ್ಯದಲ್ಲಿ ಭಾರತ ತಂಡ ಸಹ ಬ್ಯಾಟಿಂಗ್ ವೈಫಲ್ಯದಿಂದ ಪಂದ್ಯವನ್ನ ಸೋತಿತ್ತು. ಹೀಗಾಗಿ ಎರಡು ತಂಡಗಳಲ್ಲಿ ಬ್ಯಾಟ್ಸ್ಮನ್ಗಳ ಅಸ್ಥಿರ ಪ್ರದರ್ಶನ ಸಮಸ್ಯೆಯಾಗಿ ಪರಿಣಮಿಸಿದೆ. ಪ್ರಮುಖವಾಗಿ ಏಕದಿನ ವಿಶ್ವಕಪ್ ತಯಾರಿಯಲ್ಲಿರುವ ಭಾರತ ತಂಡಕ್ಕೆ ಬ್ಯಾಟ್ಸ್ಮನ್ಗಳ ವೈಫಲ್ಯ ದೊಡ್ಡ ತಲೆನೋವು ಉಂಟು ಮಾಡಿದೆ. 2ನೇ ಪಂದ್ಯವನ್ನ ಗೆದ್ದು ಸರಣಿ ವಶಪಡಿಸಿಕೊಳ್ಳುವ ಅವಕಾಶ ಹೊಂದಿದ್ದ ಭಾರತ, ವಿಶ್ವಕಪ್ ದೃಷ್ಟಿಯಿಂದ ಯುವ ಆಟಗಾರರಿಗೆ ಹೆಚ್ಚು ಅವಕಾಶ ನೀಡುವ ಪ್ರಯೋಗಕ್ಕೆ ಮುಂದಾಯಿತು.
ಇದೇ ಕಾರಣದಿಂದ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಅವರುಗಳಿಗೆ 2ನೇ ಪಂದ್ಯಕ್ಕೆ ವಿಶ್ರಾಂತಿ ನೀಡಲಾಗಿತ್ತು. ಆದರೆ ತಂಡದ ಈ ಲೆಕ್ಕಾಚಾರ ನಿರೀಕ್ಷಿತ ಫಲನೀಡದ ಪರಿಣಾಮ ಭಾರತ ಸೋಲನುಭವಿಸಬೇಕಾಯಿತು. ಹೀಗಾಗಿ ಸರಣಿಯ ನಿರ್ಣಾಯಕ ಪಂದ್ಯಕ್ಕೆ ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ತಂಡಕ್ಕೆ ಮರಳುವ ಸಾಧ್ಯತೆ ಹೆಚ್ಚಾಗಿದೆ. ಇವರಿಬ್ಬರು ತಂಡಕ್ಕೆ ಮರಳಿದ್ದೇ ಆದಲ್ಲಿ ತಂಡದ ಬ್ಯಾಟಿಂಗ್ ಇನ್ನಷ್ಟು ಬಲಿಷ್ಠವಾಗಲಿದೆ. ಜೊತೆಗೆ ಯುವ ಬ್ಯಾಟರ್ಗಳಾದ ಶುಭ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ಸಂಜೂ ಸ್ಯಾಮ್ಸನ್ ಅವರುಗಳ ಸಹ ನಿರೀಕ್ಷಿತ ಪ್ರದರ್ಶನ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ.
ಮತ್ತೊಂದೆಡೆ 2ನೇ ಪಂದ್ಯ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ವೆಸ್ಟ್ ಇಂಡೀಸ್, 3ನೇ ಪಂದ್ಯದಲ್ಲಿ ಗೆಲುವಿನ ವಿಶ್ವಾಸ ಹೊಂದಿದೆ. ಆದರೆ ಅತಿಥೇಯರಿಗೂ ಸಹ ಬ್ಯಾಟಿಂಗ್ ವಿಭಾಗದ ವೈಫಲ್ಯವೇ ಸಮಸ್ಯೆಯಾಗಿ ಪರಿಣಮಿಸಿದ್ದು, ನಿರ್ಣಾಯಕ ಪಂದ್ಯದಲ್ಲಿ ಕೆರೆಬಿಯನ್ನರು ಭಾರತದ ಬೌಲಿಂಗ್ ದಾಳಿಯನ್ನ ಹೇಗೆ ಎದುರಿಸುತ್ತಾರೆ ಕಾದು ನೋಡಬೇಕಿದೆ.
WI v IND, Team India, West Indies, Sports Karnataka