ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಕನಸಿನಲ್ಲಿದೆ. ಟಾರ್ಗೆಟ್ ಸೌತ್ ಆಫ್ರಿಕಾ ಅನ್ನುವ ಯೋಜನೆ ರೂಪಿಸಿದೆ. ದಕ್ಷಿಣ ಆಫ್ರಿಕಾದಲ್ಲಿ ಟೀಮ್ ಇಂಡಿಯಾದ ಪಾಲಿಗೆ ಇಲ್ಲಿ ತನಕ ಅಸಾಧ್ಯವಾಗಿರುವ ಟೆಸ್ಟ್ ಸರಣಿ ಗೆಲುವನ್ನು ಈ ಬಾರಿ ದಾಖಲಿಸಲೇಬೇಕು ಹಠಕ್ಕೆ ಬಿದ್ದಿದೆ. ಅದಕ್ಕಾಗಿ ರಣತಂತ್ರ ರೂಪುಗೊಂಡಿದೆ. ತ್ರಿಶೂಲ ಸೂತ್ರದ ಮೂಲಕ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾವನ್ನು ಬಗ್ಗುಬಡಿಯಲಿದೆ.
ಅಸ್ತ್ರ-01:
ಟೀಮ್ ಇಂಡಿಯಾದ ಬ್ಯಾಟಿಂಗ್ ಮೊದಲ ಅಸ್ತ್ರ. ಇದು ಕ್ಲಿಕ್ ಆದರೆ ಅರ್ಧ ಕೆಲಸ ಮುಗಿದಂತೆಯೇ. ಮೊದಲ ಇನ್ನಿಂಗ್ಸ್ನಲ್ಲೇ ದೊಡ್ಡ ಮೊತ್ತ ಕಲೆ ಹಾಕಿ ಎದುರಾಳಿಯನ್ನು ಒತ್ತಡಕ್ಕೆ ಕೆಡವುದೇ ಈ ಅಸ್ತ್ರದ ಪ್ರಮುಖ ಕೆಲಸ. ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಹರಿಣಗಳ ದಾಳಿಯನ್ನು ಎದುರಿಸಿ ದೊಡ್ಡ ಮೊತ್ತ ಕಲೆಹಾಕುವುದೇ ಯಶಸ್ಸಿನ ರಹಸ್ಯವಾಗಿದೆ. ಹೀಗಾಗಿ ಕೆ.ಎಲ್. ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ ಮತ್ತು ರಿಷಭ್ ಪಂತ್ ಮೇಲೆ ದೊಡ್ಡ ಜವಾಬ್ದಾರಿ ಇದೆ.
ಅಸ್ತ್ರ 02:
ಫಾಸ್ಟ್ ಬೌಲಿಂಗ್ನಿಂದ ಮಾತ್ರ ದಕ್ಷಿಣ ಆಫ್ರಿಕಾದಲ್ಲಿ ಸರಣಿ ಗೆಲ್ಲಬಹುದು. ಹೀಗಾಗಿ ಫಾಸ್ಟ್ ಬೌಲರ್ಗಳು ಮಿಂಚಿನ ಪ್ರದರ್ಶನ ನೀಡಬೇಕಿದೆ. ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಅನುಭವಿ ಇಶಾಂತ್ ಶರ್ಮಾ ಉತ್ತಮ ಪ್ರದರ್ಶನ ನೀಡಬೇಕಿದೆ. ಫಾಸ್ಟ್ ಬೌಲಿಂಗ್ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಕೊಡಗೆಯೂ ಗಣನೀಯವಾಗಿ ಇರಬೇಕು. ಎಲ್ಲರೂ ಜೊತೆಯಾಗಿ ದಾಳಿ ಮಾಡಿದರೆ ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಮೇಲೆ ಪರಿಣಾಮ ಬೀರುವುದು ಗ್ಯಾರೆಂಟಿ. ಈ ಮೂಲಕ ಟೆಸ್ಟ್ ಸರಣಿ ಗೆಲ್ಲುವ ಕನಸು ನನಸಾಗಬಹುದು.
ಅಸ್ತ್ರ 03:
ಆಲ್ರೌಂಡರ್ ರವಿಚಂದ್ರನ್ ಅಶ್ವಿನ್ ತಂಡದಲ್ಲಿರುವ ಏಕೈಕ ಅನುಭವಿ ಸ್ಪಿನ್ನರ್. ಅಶ್ವಿನ್ ಬೌಲಿಂಗ್ ಜೊತೆ ಬ್ಯಾಟಿಂಗ್ನಲ್ಲೂ ಪ್ರದರ್ಶನ ನೀಡಬೇಕು. ದಕ್ಷಿಣ ಆಫ್ರಿಕಾದಲ್ಲಿ ಅಶ್ವಿನ್ ಹೇಳಿಕೊಳ್ಳುವ ಪ್ರದರ್ಶನ ನೀಡಿಲ್ಲ. ಆದರೆ ಟೀಮ್ ಇಂಡಿಯಾಕ್ಕೆ ಈ ಬಾರಿ ಅಶ್ವಿನ್ ಸಾಥ್ ಬೇಕೇ ಬೇಕಿದೆ. ಸೌತ್ ಆಫ್ರಿಕಾ ನೆಲದಲ್ಲಿ ಅಶ್ವಿನ್ 3 ಟೆಸ್ಟ್ ಮಾತ್ರ ಆಡಿ 7 ವಿಕೆಟ್ ಪಡೆದುಕೊಂಡಿದ್ದಾರೆ. ಆದರೆ ಈ ಬಾರಿ ಎಲ್ಲಾ ಲೆಕ್ಕಾಚಾರವನ್ನು ಉಲ್ಟಾ ಮಾಡಿ ತಂಡದ ನೆರವಿಗೆ ನಿಲ್ಲಬೇಕಿದೆ.
ಒಟ್ಟಿನಲ್ಲಿ ಟೀಮ್ ಇಂಡಿಯಾದ ಈ ಮೂರೂ ಅಸ್ತ್ರಗಳು ಸಂಘಟಿತವಾಗಿ ಹೋರಾಟ ಮಾಡಿದರೆ ಅಸಾಧ್ಯವಾಗಿರುವ ಗೆಲುವನ್ನು ಈ ಬಾರಿ ದಾಖಲಿಸಬಹುದು. ಹೊಸ ಇತಿಹಾಸ ಬರೆಯಬಹುದು.