ಮೊದಲ ಪಂದ್ಯದಲ್ಲಿ ಅಂದುಕೊಂಡಷ್ಟು ದೊಡ್ಡ ಫೈಟ್ ನಡೆಯಲಿಲ್ಲ. ವೆಸ್ಟ್ಇಂಡೀಸ್ ತಂಡದ ಬ್ಯಾಟಿಂಗ್ ವೈಫಲ್ಯ ಬೌಲರ್ಗಳ ಮೇಲೆ ಪರಿಣಾಮ ಬೀರಿತು. ಟೀಮ್ ಇಂಡಿಯಾ ಸುಲಭವಾಗಿ ಪಂದ್ಯ ಗೆದ್ದಿತ್ತು. ಆದರೆ ಈಗ ಎರಡನೇ ಪಂದ್ಯದ ಸರದಿ. ಟೀಮ್ ಇಂಡಿಯಾ ಈ ಪಂದ್ಯವನ್ನೇ ಗೆದ್ದು ಸರಣಿ ಗೆಲುವಿನ ಲೆಕ್ಕಾಚಾರ ಮುಗಿಸುವ ಯೋಜನೆ ಮಾಡಿದೆ. ಕೆರಿಬಿಯನ್ಸ್ ಸರಣಿ ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ.
ಭಾರತ ತಂಡದಲ್ಲಿ ಒಂದು ಬದಲಾವಣೆ ಖಚಿತ. ಕೆ.ಎಲ್. ರಾಹುಲ್ ವಾಪಾಸ್ ಬಂದಿರುವುದರಿಂದ ಯಾರು ಸ್ಥಾನ ಬಿಡ್ತಾರೆ ಅನ್ನುವುದು ಚರ್ಚೆ ಆಗುತ್ತಿದೆ. ಸದ್ಯ ಈಶನ್ ಕಿಶನ್ ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಸ್ಥಾನ ಕಳೆದುಕೊಳ್ಳುವ ಲೆಕ್ಕಾಚಾರವಿದೆ. ಇನ್ನು ವಿರಾಟ್ ಕೊಹ್ಲಿಯ ರನ್ ಬರ ಇಲ್ಲೇ ಮುಗಿಯಬೇಕಿದೆ. ರಿಷಬ್ ಪಂತ್ ಸ್ಥಿರ ಆಟ ಆಡಲು ಈ ಸರಣಿ ತುಂಬಾ ಇಂಪಾರ್ಟೆಂಟ್.
ರೋಹಿತ್ ಫಾರ್ಮ್ನಲ್ಲಿರುವುದು ನೆಮ್ಮದಿ ತಂದಿದೆ. ಸೂರ್ಯಕುಮಾರ್ ಯಾದವ್ ಮತ್ತು ದೀಪಕ್ ಹೂಡ ಅನುಭವ ಕಡಿಮೆ ಇದ್ದರೂ ಪ್ರತಿಭೆಗೇನು ಕೊರತೆ ಇಲ್ಲ. ಶಾರ್ದೂಲ್ ಥಾಕೂರ್ ಈಗ ಆಲ್ರೌಂಡರ್ ಆಗಿ ಬೆಳೆದಿದ್ದಾರೆ. ವಾಷಿಂಗ್ಟನ್ ಸುಂದರ್ ಕೂಡ ನಂಬಿಕಸ್ಠ ಆಲ್ರೌಂಡರ್. ಬೌಲಿಂಗ್ನಲ್ಲಿ ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಹೊಸ ಚೆಂಡು ಹಂಚಿಕೊಳ್ಳುತ್ತಿದ್ದಾರೆ. ಥಾಕೂರ್ 3ನೇ ವೇಗಿಯಾದರೆ, ವಾಷಿಂಗ್ಟನ್ ಮತ್ತು ಚಹಲ್ ಸ್ಪಿನ್ ಅಸ್ತ್ರಗಳು. ಇನ್ನು ದೀಪಕ್ ಹೂಡ 6ನೇ ಬೌಲಿಂಗ್ ಆಪ್ಶನ್.
ವೆಸ್ಟ್ಇಂಡೀಸ್ ಮೊದಲ ಪಂದ್ಯದಲ್ಲಿ ಆದ ತಪ್ಪನ್ನು ಸರಿಪಡಿಸಿಕೊಳ್ಳಬೇಕಿದೆ. ಬ್ರೆಂಡನ್ ಕಿಂಗ್, ಶಾಯ್ ಹೋಪ್. ನಿಕೊಲಸ್ ಪೂರನ್, ಡೆರೆನ್ ಬ್ರಾವೋ, ನಾಯಕ ಪೊಲ್ಲಾರ್ಡ್ ಸೇರಿದಂತೆ ಎಲ್ಲರೂ ಬ್ಯಾಟಿಂಗ್ನಲ್ಲಿ ಮಿಂಚಬೇಕಿದೆ. ಜೇಸನ್ ಹೋಲ್ಡರ್ ಮತ್ತು ಫಾಬಿಯನ್ ಅಲೆನ್ ಆಲ್ರೌಂಡರ್ಗಳ ಕೆಲಸ ಮುಗಿಸಬಹುದು. ಕೆಮರ್ ರೋಚ್ ಬದಲಿಗೆ ಯುವ ಲೆಗ್ ಸ್ಪಿನ್ನರ್ ಹೈಡನ್ ವಾಲ್ಶ್ ಸ್ಥಾನ ಪಡೆಯಬಹುದು.
ಅಹ್ಮದಾಬಾದ್ ಪಿಚ್ ಸ್ಪಿನ್ನರ್ಗಳಿಗೆ ನೆರವು ನೀಡುವುದು ಖಚಿತ. ಹೀಗಾಗಿ ಸ್ಪಿನ್ನರ್ಗಳ ಮೇಲೆ ಹೆಚ್ಚು ಒತ್ತಡವಿದೆ. ಅದರಲ್ಲೂ ವಿಂಡೀಸ್ ಸ್ಪಿನ್ನರ್ಗಳು ಭಾರತೀಯ ಬ್ಯಾಟ್ಸ್ಮನ್ಗಳನ್ನು ಕಟ್ಟಿ ಹಾಕಬೇಕಿದೆ.