T20 ವಿಶ್ವಕಪ್ ಗೆಲುವಿನ ನಿರೀಕ್ಷೆ ಹುಟ್ಟಿಸಿದ್ದ ಟೀಂ ಇಂಡಿಯಾ(Team India) ಸೆಮಿಫೈನಲ್ನಲ್ಲಿ ಇಂಗ್ಲೆಂಡ್(England) ವಿರುದ್ಧ ಹೀನಾಯ ಸೋಲನುಭವಿಸುವ ಮೂಲಕ ಪ್ರಶಸ್ತಿ ಗೆಲುವಿನ ರೇಸ್ನಿಂದ ಹೊರಬಿದ್ದಿದೆ. ಭಾರತದ ಸೋಲಿನ ಬಗ್ಗೆ ಸಾಕಷ್ಟು ಚರ್ಚೆಗಳು, ಟೀಕೆಗಳು ನಡೆಯುತ್ತಿರುವ ಬೆನ್ನಲ್ಲೇ ʼಕ್ರಿಕೆಟ್ ದೇವರುʼ ಭಾರತ ತಂಡದ ಬೆನ್ನಿಗೆ ನಿಂತಿದ್ದಾರೆ.
ಅಡಿಲೇಡ್ನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮ ಸಾರಥ್ಯದ ಟೀಂ ಇಂಡಿಯಾ 10 ವಿಕೆಟ್ಗಳ ಹೀನಾಯ ಸೋಲು ಕಂಡಿತು. ಭಾರತ ತಂಡದ ಈ ಪ್ರದರ್ಶನದ ಬಗ್ಗೆ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳು, ಕ್ರಿಕೆಟ್ ಪರಿಣಿತರು, ಮಾಜಿ ಕ್ರಿಕೆಟಿಗರು ತಮ್ಮದೇ ಟೀಕೆ, ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್, ʼಮೆನ್ ಇನ್ ಬ್ಲೂʼ ಬೆನ್ನಿಗೆ ನಿಂತಿದ್ದಾರೆ.
ಸೆಮಿಫೈನಲ್ನಲ್ಲಿ ಭಾರತಕ್ಕೆ ಎದುರಾದ ಸೋಲಿನ ಬಗ್ಗೆ ತಮ್ಮದೇ ಶೈಲಿನಲ್ಲಿ ವಿಶ್ಲೇಷಿಸಿರುವ ಸಚಿನ್ ತೆಂಡುಲ್ಕರ್, “ಒಂದು ನಾಣ್ಯಕ್ಕೆ ಎರಡು ಬದಿಗಳಿರುತ್ತವೆ, ಅದೇ ರೀತಿ ಜೀವನ ಸಹ. ನಾವು ನಮ್ಮ ತಂಡದ ಯಶಸ್ಸನ್ನು ನಮ್ಮದೇ ಆದ ರೀತಿಯಲ್ಲಿ ಆಚರಿಸಿದರೆ, ನಮ್ಮ ತಂಡದ ಸೋಲನ್ನು ಸಹ ನಾವು ನಿಭಾಯಿಸಲು ಸಾಧ್ಯವಾಗುತ್ತದೆ – ಜೀವನದಲ್ಲಿ, ಅವರಿಬ್ಬರೂ(ಸೋಲು-ಗೆಲುವು) ಒಟ್ಟಿಗೆ ಹೋಗುತ್ತಾರೆ” ಎಂದು ಭಾರತ ತಂಡದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಟ್ವೀಟ್ ಮಾಡಿದ್ದಾರೆ.
ಸೆಮೀಸ್ ಹಣಾಹಣಿಯಲ್ಲಿ ಇಂಗ್ಲೆಂಡ್ ಸವಾಲು ಎದುರಿಸಿದ ಭಾರತ, ಫೈನಲ್ ಪ್ರವೇಶಿಸುವ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಹೊಂದಿದ್ದರು. ಆದರೆ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾದ ಭಾರತ, 10 ವಿಕೆಟ್ಗಳ ಹೀನಾಯ ಸೋಲನುಭವಿಸಿತು. ಇಂಗ್ಲೆಂಡ್ ಪರ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಜೋಸ್ ಬಟ್ಲರ್(80*) ಹಾಗೂ ಅಲೆಕ್ಸ್ ಹೇಲ್ಸ್(86*) ಮೊದಲ ವಿಕೆಟ್ಗೆ 170 ರನ್ಗಳಿಸುವ ಮೂಲಕ ಭಾರತದ ಗೆಲುವಿನ ಆಸೆಗೆ ತಣ್ಣೀರೆರಚಿದರು.