ಆರಂಭಿಕ ರೋಹನ್ ಕದಂ ಹಾಗೂ ನಾಯಕ ಮನೀಷ್ ಪಾಂಡೆ ಅವರು ಸಿಡಿಸಿದ ಭರ್ಜರಿ ಅರ್ಧಶತಕದ ಬಲದಿಂದ ಕರ್ನಾಟಕ ಸೈಯ್ಯದ್ ಮುಷ್ತಾಕ್ ಅಲಿ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ 4 ರನ್ ಗಳಿಂದ ವಿದರ್ಭ ತಂಡವನ್ನು ಮಣಿಸಿ ಫೈನಲ್ ಗೆ ಅರ್ಹತೆ ಪಡೆದಿದೆ.
ಶನಿವಾರ ನವದೆಹಲಿಯ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ 20 ಓವರ್ ಗಳಲ್ಲಿ 7 ವಿಕೆಟ್ ಗೆ 176 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ವಿದರ್ಭ 20 ಓವರ್ ಗಳಲ್ಲಿ 6 ವಿಕೆಟ್ ಗೆ 172 ರನ್ ಸೇರಿಸಿ ಸೋಲು ಕಂಡಿತು. ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಕರ್ನಾಟಕ, ತಮಿಳುನಾಡು ವಿರುದ್ಧ ಸೆಣಸಾಟ ನಡೆಸಲಿದೆ.
ಮೊದಲು ಬ್ಯಾಟ್ ಮಾಡಿದ ಕರ್ನಾಟಕದ ತಂಡದ ಆರಂಭ ಸೊಗಸಾಗಿತ್ತು. ಆರಂಭಿಕರಾದ ರೋಹನ್ ಹಾಗೂ ಮನೀಷ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾದರು. ಸಿಕ್ಕ ಅವಕಾಶವನ್ನು ಬಳಸಿಕೊಂಡು ಬ್ಯಾಟ್ ಮಾಡಿದ ಜೋಡಿ ಆರ್ಭಟ ನಡೆಸಿತು. ಹಂತ ಹಂತವಾಗಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಜೋಡಿ ಅಬ್ಬರಿಸಿತು.
ರೋಹನ್ ಕದಂ 56 ಎಸೆತಗಳಲ್ಲಿ 7 ಬೌಂಡರಿ, 4 ಸಿಕ್ಸರ್ ಸಹಾಯದಿಂದ 87 ರನ್ ಸಿಡಿಸಿದರು. ಮನೀಷ್ ಪಾಂಡೆ 2 ಬೌಂಡರಿ, 3 ಸಿಕ್ಸರ್ ನೆರವಿನಿಂದ 54 ಕಲೆ ಹಾಕಿದರು. ಮಧ್ಯಮ ಕ್ರಮಾಂಕದಲ್ಲಿ ಅಭಿನವ್ ಮನೋಹರ್ 27 ರನ್ ಸಿಡಿಸಿ ತಂಡದ ಮೊತ್ತ ಹಿಗ್ಗಿಸಿದರು.
ಇನ್ನು ವಿದರ್ಭ ಪರ ದರ್ಶನ ನಳಕಂದೆ ಕೊನೆಯ ಓವರ್ ನಲ್ಲಿ ಸತತ ನಾಲ್ಕು ವಿಕೆಟ್ ಪಡೆದು ಕರ್ನಾಟಕದ ರನ್ ವೇಗಕ್ಕೆ ಪೆಟ್ಟು ನೀಡಿದರು. ದರ್ಶನ 4 ಓವರ್ ಗಳಲ್ಲಿ 28 ರನ್ ನೀಡಿ 4 ವಿಕೆಟ್ ಕಬಳಿಸಿದರು.
ಗುರಿಯನ್ನು ಹಿಂಬಾಲಿಸಿದ ವಿದರ್ಭ ತಂಡದ ಆರಂಭಿಕರಾದ ಅತರ್ವ್ ತೇಡೆ (32) ಹಾಗೂ ಗಣೇಶ್ ಸತೀಶ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 4.6 ಓವರ್ ಗಳಲ್ಲಿ 43 ರನ್ ಸೇರಿಸಿತು. ತವರಿನ ತಂಡದ ವಿರುದ್ಧ ಸೊಗಸಾದ ಬ್ಯಾಟಿಂಗ್ ನಡೆಸುತ್ತಿದ್ದ ಗಣೇಶ್ ಸತೀಶ್ ಅವರಿಗೆ ಸ್ಪಿನ್ ಬೌಲರ್ ಜೆ.ಸುಚಿತ್ ಖೆಡ್ಡಾ ತೋಡಿದರು.
ವಿದರ್ಭ ಪರ ಮಧ್ಯಮ ಕ್ರಮಾಂಕಿತರು ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದರು. ಅಕ್ಷಯ್ ವಾಡ್ಕರ್ 15, ಶುಭಮ್ ದುಬೆ 24, ಜಿತೇಶ್ ಶರ್ಮಾ 12, ಅಪೂರ್ವ್ ವಾಂಖಡೆ ಅಜೇಯ 27, ಅಕ್ಷಯ್ ಕೆ 22 ರನ್ ಸಿಡಿಸಿದರು.
ಕರ್ನಾಟಕದ ಪರ ಕೆ.ಸಿ ಕರಿಯಪ್ಪ 2, ಎಂಬಿ ದರ್ಶನ್, ವಿದ್ಯಾಧರ್ ಪಾಟೀಲ್, ಜೆ.ಸುಚಿತ್, ಕರುಣ್ ನಾಯರ್ ತಲಾ ಒಂದು ವಿಕೆಟ್ ಪಡೆದರು.