ನಾಯಕ ದಾಮೋದರನ್ ರೋಹಿತ್(101*) ಶತಕದ ನಡುವೆಯೂ ಆಲ್ರೌಂಡರ್ ಕೃಷ್ಣಪ್ಪ ಗೌತಮ್(5/86) ಅದ್ಭುತ ಬೌಲಿಂಗ್ ದಾಳಿಗೆ ಸಿಲುಕಿದ ಪುದುಚೇರಿ, ರಣಜಿ ಟ್ರೋಫಿ ಎಲೈಟ್ ʼಸಿʼ ಗುಂಪಿನ ಲೀಗ್ ಪಂದ್ಯದಲ್ಲಿ ಕರ್ನಾಟಕದ ವಿರುದ್ಧ ಸೋಲಿನ ಸುಳಿಗೆ ಸಿಲುಕಿದೆ.
ಚೆನ್ನೈನ ಶ್ರೀ ಶಿವಸುಬ್ರಹ್ಮಣ್ಯಸ್ವಾಮಿ ನಾಡಾರ್ ಇಂಜಿನಿಯರಿಂಗ್ ಕಾಲೇಜು ಮೈದಾದನದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವೂ ಕರ್ನಾಟಕದ ಆಟಗಾರರ ಪ್ರಾಬಲ್ಯ ಮುಂದುವರಿಯಿತು. ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿದ ಪುದುಚೇರಿ ಮೊದಲ ಇನ್ನಿಂಗ್ಸ್ನಲ್ಲಿ 241 ರನ್ಗಳಿಗೆ ಆಲೌಟ್ ಆಗಿಯಿತು. ಬಳಿಕ ಫಾಲೋ-ಆನ್ ಎದುರಿಸಿದ ಪುದುಚೇರಿ, 3ನೇ ದಿನದಂತ್ಯಕ್ಕೆ ಪ್ರಮುಖ 4 ವಿಕೆಟ್ ಕಳೆದುಕೊಂಡು 64 ರನ್ಗಳಿಸಿದ್ದು, 150 ರನ್ಗಳ ಹಿನ್ನೆಡೆಯಲ್ಲಿದೆ.
ಎರಡನೇ ದಿನದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 52 ರನ್ಗಳಿಸಿದ್ದ ಪುದುಚೇರಿ 3ನೇ ದಿನದಂದು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. 2ನೇ ದಿನದಂತ್ಯಕ್ಕೆ ಕಣದಲ್ಲಿದ್ದ ಶ್ಯಾಮ್ ಕನ್ಗೈಯನ್(25) ಹಾಗೂ ಚಿರಂಜೀವಿ(14) ಬಹುಬೇಗನೆ ಔಟಾದರು. ನಂತರ ಕಣಕ್ಕಿಳಿದ ಪವನ್ ದೇಶಪಾಂಡೆ(29), ಪರಾಸ್ ಡೋಗ್ರ(5) ಬಂದಷ್ಟೇ ಬೇಗನೆ ಪೆವಿಲಿಯನ್ ಸೇರಿದರು.
ಆದರೆ ಒಂದೆಡೆ ವಿಕೆಟ್ ಬೀಳುತ್ತಿದ್ದರು ತಾಳ್ಮೆಯ ಆಟವಾಡಿದ ಪುದುಚೇರಿ ನಾಯಕ ದಾಮೋದರ್ ರೋಹಿತ್, ತಂಡಕ್ಕೆ ಬೆನ್ನೆಲುಬಾದರು. ಕರ್ನಾಟಕ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದ ರೋಹಿತ್(100*) ಶತಕ ಬಾರಿಸಿ ಮಿಂಚಿದರು. ಪರಿಣಾಮ ಪುದುಚೇರಿ ಮೊದಲ ಇನ್ನಿಂಗ್ಸ್ನಲ್ಲಿ 241 ರನ್ಗಳಿಗೆ ಆಲೌಟ್ ಆಯಿತು. ಕರ್ನಾಕಟದ ಪರ ಅದ್ಭುತ ಬೌಲಿಂಗ್ ದಾಳಿ ನಡೆಸಿದ ಕೃಷ್ಣಪ್ಪ ಗೌತಮ್, 5 ವಿಕೆಟ್ ಪಡೆದು ಮಿಂಚಿದರೆ. ಪ್ರಸಿದ್ಧ ಕೃಷ್ಣ ಹಾಗೂ ವಿದ್ಯಾಧರ್ ಪಾಟೀಲ್ ತಲಾ 2 ವಿಕೆಟ್ ಕಬಳಿಸಿದರು.
ಸೋಲಿನ ಸುಳಿಯಲ್ಲಿ ಪುದುಚೇರಿ
ಕರ್ನಾಟಕದ ಮೊದಲ ಇನ್ನಿಂಗ್ಸ್ ಮೊತ್ತ 453ಕ್ಕೆ 8 ರನ್ಗಳಿಗೆ ಪ್ರತಿಯಾಗಿ ಮೊದಲ ಇನ್ನಿಂಗ್ಸ್ನಲ್ಲಿ 241 ರನ್ಗಳಿಗೆ ಆಲೌಟ್ ಆಗಿರುವ ಪುದುಚೇರಿ ಫಾಲ್ ಆನ್ ಹೇರಿಸಿಕೊಂಡಿತು. ನಂತರ 2ನೇ ಇನ್ನಿಂಗ್ಸ್ ಆರಂಭಿಸಿರುವ ಪುದುಚೇರಿ, 3ನೇ ದಿನದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 64 ರನ್ಗಳಿಸಿದ್ದು, ಇನ್ನೂ 150 ರನ್ಗಳ ಹಿನ್ನಡೆಯಲ್ಲಿದೆ. ಸೋಲಿನ ಸುಳಿಯಿಂದ ಪಾರಾಗಲು ಪುದುಚೇರಿ, ಪಂದ್ಯದ 4ನೇ ಹಾಗೂ ಅಂತಿಮ ದಿನದಂದು ವಿಕೆಟ್ ಕಳೆದುಕೊಳ್ಳದೆ ಎಚ್ಚರಿಕೆ ಆಟವಾಡಬೇಕಿದೆ.