ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್(161*) ಅಮೋಘ ಶತಕ ಹಾಗೂ ಕೆ.ವಿ. ಸಿದ್ಧಾರ್ಥ್(85) ಅದ್ಭುತ ಬ್ಯಾಟಿಂಗ್ ನೆರವಿನಿಂದ ಗುರುವಾರ ಆರಂಭಗೊಂಡ ರಣಜಿ ಟ್ರೋಫಿ ಲೀಗ್ ಪಂದ್ಯದ ಮೊದಲ ದಿನ ಕರ್ನಾಟಕ 3 ವಿಕೆಟ್ಗೆ 293 ರನ್ಗಳಿಸುವ ಮೂಲಕ ಪುದುಚೇರಿ ವಿರುದ್ಧ ಬಿಗಿ ಹಿಡಿತ ಸಾಧಿಸಿದೆ.
ಚೆನ್ನೈನ ಶ್ರೀ ಶಿವಸುಬ್ರಹ್ಮಣ್ಯ ನಾದರ್ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ʼಸಿʼ ಗುಂಪಿನ ಪಂದ್ಯದಲ್ಲಿ ಕರ್ನಾಟಕದ ಬ್ಯಾಟ್ಸಮನ್ಗಳು ಅದ್ಭುತ ಪ್ರದರ್ಶನ ನೀಡಿದರು. ಮೊದಲ ದಿನದಾಟದ ಅಂತ್ಯಕ್ಕೆ ದೇವದತ್ ಪಡಿಕ್ಕಲ್(161*) ಹಾಗೂ ನಾಯಕ ಮನೀಷ್ ಪಾಂಡೆ(21*) 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದು, ಬೃಹತ್ ಮೊತ್ತ ಕಲೆಹಾಕುವ ಸೂಚನೆ ನೀಡಿದ್ದಾರೆ. ಇವರಿಬ್ಬರು ಮೊದಲ ದಿನದಂತ್ಯಕ್ಕೆ 4ನೇ ವಿಕೆಟ್ 31* ರನ್ಗಳನ್ನು ಕಲೆಹಾಕಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕರ್ನಾಟಕ ನಿರೀಕ್ಷಿತ ಆರಂಭ ಪಡೆಯಲಿಲ್ಲ. ತಂಡದ ಪರ ಇನ್ನಿಂಗ್ಸ್ ಆರಂಭಿಸಿದ ಆರ್. ಸಮರ್ಥ್(11) ಬಹುಬೇಗನೆ ನಿರ್ಗಮಿಸಿದರು. ಕಳೆದ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿ ಮಿಂಚಿದ್ದ ಕರುಣ್ ನಾಯರ್(6) ಸಹ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಆದರೆ 3ನೇ ಜೊತೆಯಾದ ದೇವದತ್ ಪಡಿಕ್ಕಲ್ ಹಾಗೂ ಕೆ.ವಿ. ಸಿದ್ಧಾರ್ಥ್ ಅದ್ಭುತ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಸರೆಯಾದರು.
ಪುದುಚೇರಿ ಬೌಲಿಂಗ್ ದಾಳಿಗೆ ದಿಟ್ಟ ಪ್ರತ್ಯುತ್ತರ ನೀಡಿದ ದೇವದತ್ ಪಡಿಕ್ಕಲ್(161*) ರಣಜಿ ಟ್ರೋಫಿಯಲ್ಲಿ ತಮ್ಮ ಚೊಚ್ಚಲ ಶತಕ ಬಾರಿಸಿ ಮಿಂಚಿದರೆ. ಇವರಿಗೆ ಉತ್ತಮ ಸಾಥ್ ನೀಡಿದ ಕೆ.ವಿ. ಸಿದ್ಧಾರ್ಥ್(85) ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಬ್ಯಾಟಿಂಗ್ನಲ್ಲಿ ಪ್ರಾಬಲ್ಯ ಮೆರೆದ ಈ ಜೋಡಿ, 3ನೇ ವಿಕೆಟ್ಗೆ 223 ರನ್ಗಳ ಭರ್ಜರಿ ಜೊತೆಯಾಟವಾಡಿದರು. ಕೆ.ವಿ. ಸಿದ್ಧಾರ್ಥ್ ವಿಕೆಟ್ ಪತನದ ನಂತರ ಬಂದ ನಾಯಕ ಮನೀಷ್ ಪಾಂಡೆ(21*) ಮತ್ತೊಂದು ದೊಡ್ಡ ಇನ್ನಿಂಗ್ಸ್ ಆಡುವ ಸೂಚನೆ ನೀಡಿದ್ದಾರೆ. ಪುದುಚೇರಿ ಪರ ಅಶಿತ್ 2 ಹಾಗೂ ಸಾಗರ್ ಪಿ.ಉದೇಶಿ 1 ವಿಕೆಟ್ ಪಡೆದರು.