ಆರ್.ಸಮರ್ಥ್ ಅವರ ಶತಕದ ನೆರೆವಿನಿಂದ ಕರ್ನಾಟಕ ತಂಡ ಆತಿಥೇಯ ಗೋವಾ ವಿರುದ್ಧ ಮೊದಲ ದಿನ ಗೌರವ ಮೊತ್ತ ಸಂಪಾದಿಸಿದೆ.
ಪೊರ್ವೊರಿಮ್ ಮೈದಾನದಲ್ಲಿ ಆರಂಭವಾದ ರಣಜಿ ಟೂರ್ನಿಯಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡ ಬ್ಯಾಟಿಂಗ್ ಆಯ್ದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಆರ್. ಸಮರ್ಥ್ ಮತ್ತು ನಾಯಕ ಮಯಾಂಕ್ ಅಗರ್ವಾಲ್ 116 ರನ್ಗಳ ಭರ್ಜರಿ ಓಪನಿಂಗ್ ನೀಡಿದರು. ಅರ್ಧ ಶತಕ ಸಿಡಿಸಿದ ಮಯಾಂಕ್ ಅಗರ್ವಾಲ್ ಗರ್ಗ್ಗೆ ವಿಕೆಟ್ ಒಪ್ಪಿಸಿ ಹೊರ ನಡೆದರು.
ಮೂರನೆ ಕ್ರಮಾಂಕದಲ್ಲಿ ಬಂದ ವಿಶಾಲ್ ಒನತ್ ಸಮರ್ಥ್ಗೆ ಒಳ್ಳೆಯ ಸಾಥ್ ಕೊಟ್ಟರು. ಸಮರ್ಥ ಆಕರ್ಷಕ ಶತಕ ಸಿಡಿಸಿದರು. 140 ರನ್ ಗಳಿಸಿದ್ದಾಗ ಸಮರ್ಥ್ ಅರ್ಜುನ್ ತೆಂಡೂಲ್ಕರ್ಗೆ ವಿಕೆಟ್ ಒಪ್ಪಿಸಿ ಹೊರ ನಡೆದರು.
ನಿಕಿನ್ ಜೋಸ್ 9 ರನ್ ಗಳಿಸಿ ಪೆವಿಲಿಯನ್ ಸೇರಿದರು. ವಿಶಾಲ್ ಅಜೇಯ 73, ಮನೀಶ್ ಪಾಂಡೆ ಅಜೇಯ 8 ರನ್ ಗಳಿಸಿ ಎರಡನೆ ದಿನಕ್ಕೆ ಕ್ರೀಸ್ ಕಾಯ್ದುಕೊಂಡರು. ಕರ್ನಾಟಕ ತಂಡ 3 ವಿಕೆಟ್ ನಷ್ಟಕ್ಕೆ 294 ರನ್ ಗಳಿಸಿದೆ.
ಅರ್ಜುನ್ ತೆಂಡೂಲ್ಕರ್ 30ಕ್ಕೆ 1, ಲಕ್ಷ್ಯ ಗರ್ಗ್ 48ಕ್ಕೆ 1, ದರ್ಶನ್ ಮಿಸಾಲ್ 73ಕ್ಕೆ 1 ವಿಕೆಟ್ ಪಡೆದರು.