ಕಾನ್ಪುರದ ಗ್ರೀನ್ಪಾರ್ಕ್ ನಲ್ಲಿ ಟೀಮ್ ಇಂಡಿಯಾ ಅಂದುಕೊಂಡಿದ್ದೆಲ್ಲವೂ ಮೊದಲ ದಿನ ಯಶಸ್ವಿಯಾಗಿ ನಡೆಯಿತು. ಟಾಸ್ ಭಾರತದ ಪಾಲಾಯಿತು. ಟಾಪ್ ಆರ್ಡರ್ನಲ್ಲಿ ರನ್ ಬರ ಎದುರಾದರೂ ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್ ಮತ್ತು ರವೀಂದ್ರ ಜಡೇಜಾ ಟೀಮ್ ಇಂಡಿಯಾವನ್ನು ಅಪಾಯದಿಂದ ಕಾಪಾಡಿದರು. ದಿನದ ಅಂತ್ಯಕ್ಕೆ ಭಾರತ 4 ವಿಕೆಟ್ ಕಳೆದುಕೊಂಡು 258 ರನ್ಗಳಿಸಿ ಉತ್ತಮ ಸ್ಥಿತಿಯಲ್ಲಿದೆ.
ಟಾಸ್ಗೆದ್ದು ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾಕ್ಕೆ ಅಂದುಕೊಂಡಷ್ಟು ಉತ್ತಮ ಆರಂಭ ಸಿಗಲಿಲ್ಲ. ಮಯಾಂಕ್ ಅಗರ್ವಾಲ್ ಮತ್ತು ಶುಭ್ಮನ್ ಗಿಲ್ ಆಟಕ್ಕೆ ನ್ಯೂಜಿಲೆಂಡ್ ಬೌಲರ್ಗಳು ಸಾಕಷ್ಟು ತಡೆ ಒಡ್ಡಿದರು. ಸತತವಾಗಿ ಒತ್ತಡ ಹೇರಿದ ಪರಿಣಾಮವಾಗಿ ಅಗರ್ವಾಲ್ 13 ರನ್ಗಳಿಸಿದ್ದಾಗ ಕೈಲ್ ಜೇಮಿಸನ್ಗೆ ವಿಕೆಟ್ ಒಪ್ಪಿಸಿದರು. ಗಿಲ್ ಜೊತೆ ಸೇರಿಕೊಂಡ ಮಾಡರ್ನ್ ವಾಲ್ ಚೇತೇಶ್ವರ ಪೂಜಾರ ಎಚ್ಚರಿಕೆಯ ಆಟಕ್ಕೆ ಹೊರಟರು. ಗಿಲ್ ಅರ್ಧಶತಕದ ಸಂಭ್ರಮ ಆಚರಿಸಿಕೊಂಡರು. ಲಂಚ್ ವೇಳೆಗೆ 1 ವಿಕೆಟ್ ಕಳೆದುಕೊಂಡು 82 ರನ್ಗಳಿಸಿತ್ತು.
ಲಂಚ್ ಬಳಿಕ ಟೀಮ್ ಇಂಡಿಯಾಕ್ಕೆ ಶಾಕ್ ಎದುರಾಯಿತು. 52 ರನ್ಗಳಿಸಿದ್ದ ಗಿಲ್ ಆರಂಭದಲ್ಲೇ ಜೇಮಿಸನ್ ಎಸೆತದಲ್ಲಿ ಔಟಾದರು. ಚೇತೇಶ್ವರ ಪೂಜಾರಾ ಕೂಡ 26 ರನ್ಗಳಿಸಿದ್ದಾಗ ಟಿಮ್ ಸೌಥಿ ಎಸೆತದಲ್ಲಿ ಔಟಾದರು. ಅಜಿಂಕ್ಯಾರಹಾನೆ 35 ರನ್ಗಳಿಸಿ ಜೇಮಿಸನ್ಗೆ ವಿಕೆಟ್ ಒಪ್ಪಿಸಿದರು. ಟೀ ವಿರಾಮದ ಹೊತ್ತಿಗೆ ಟೀಮ್ ಇಂಡಿಯಾ 4 ವಿಕೆಟ್ ಕಳೆದುಕೊಂಡು 154 ರನ್ಗಳಿಸಿತ್ತು. ಕಿವೀಸ್ ಮೇಲುಗೈ ಸಾಧಿಸಿತು.
ದಿನದ ಅಂತಿಮ ಅವಧಿಯಲ್ಲಿ ಟೀಮ್ ಇಂಡಿಯಾದ್ದೇ ಆಟ. ಮೊದಲ ಟೆಸ್ಟ್ ಆಡುತ್ತಿರುವ ಶ್ರೇಯಸ್ ಅಯ್ಯರ್ ಮತ್ತು ಅನುಭವಿ ರವೀಂದ್ರ ಜಡೇಜಾ ಕಿವೀ ಬೌಲರ್ಗಳನ್ನು ಚೆಂಡಾಡಿದರು. ಅಯ್ಯರ್ ಮೊದಲ ಟೆಸ್ಟ್ನಲ್ಲೇ ಅರ್ಧಶತಕದ ಸಂಭ್ರಮ ಆಚರಿಸಿಕೊಂಡ್ರು. ಜಡೇಜಾ ಕೂಡ ಅರ್ಧಶತಕಗಳಿಸಿದ್ದಾರೆ. ಈ ಜೋಡಿ ಈಗಾಗಲೇ 5ನೇ ವಿಕೆಟ್ಗೆ ಅಜೇಯ 113 ರನ್ಗಳಿಸಿದೆ. ಟೀಮ್ ಇಂಡಿಯಾ 4 ವಿಕೆಟ್ ಕಳೆದುಕೊಂಡು 258 ರನ್ಗಳಿಸಿ 2ನೇ ದಿನ ದೊಡ್ಡ ಮೊತ್ತ ಕಲೆಹಾಕುವ ಪ್ಲಾನ್ನಲ್ಲಿದೆ. ಶ್ರೇಯಸ್ ಅಜೇಯ 75 ರನ್ಗಳಿಸಿದ್ದರೆ, ಜಡೇಜಾ ಅಜೇಯ 50 ರನ್ಗಳೊಂದಿಗೆ 2ನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ.