ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಗೆಲ್ಲಬೇಕಾದರೆ ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ಅವರನ್ನ ತಂಡದಲ್ಲಿ ಆಡಿಸಬೇಕಿದೆ ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು 1-1ರಿಂದ ಸಮಬಲ ಸಾಧಿಸಿದ್ದು, ಸರಣಿಯ 3ನೇ ಹಾಗೂ ಅಂತಿಮ ಪಂದ್ಯ ಆಗಸ್ಟ್ 1ರಂದು ನಡೆಯಲಿದೆ. ಹೀಗಾಗಿ ಸರಣಿ ಗೆಲ್ಲುವ ಲೆಕ್ಕಾಚಾರದೊಂದಿಗೆ ಎರಡು ತಂಡಗಳು ಈಗಾಗಲೇ ತಯಾರಿ ಮಾಡಿಕೊಂಡಿವೆ. ಈ ನಡುವೆ ಎರಡನೇ ಪಂದ್ಯದಲ್ಲಿ ಸೋಲಿನ ಆಘಾತ ಕಂಡಿರುವ ಭಾರತದ ಪ್ರದರ್ಶನದ ಬಗ್ಗೆ ಭಾರೀ ಟೀಕೆಗಳು ವ್ಯಕ್ತವಾಗಿವೆ.
ಆದರೆ 3ನೇ ಪಂದ್ಯದ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ, ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ತಂಡ ಯಾವುದೇ ಪ್ರಯೋಗಗಳನ್ನ ಮಾಡಬಯಸಿದಲ್ಲಿ ಮಾಡಲಿ. ಆದರೆ ಒಂದು ವೇಳೆ ಟೀಂ ಇಂಡಿಯಾ ಸರಣಿ ಗೆಲುವಿನ ಗುರಿ ಹೊಂದಿದ್ದೇ ಆದಲ್ಲಿ, ತಂಡದ ಟಾಪ್ ಬ್ಯಾಟರ್ಗಳಾದ ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ಅವರನ್ನ ಪ್ಲೇಯಿಂಗ್ ಇಲೆವೆನ್ನಲ್ಲಿ ಸೇರಿಸಿಕೊಳ್ಳಬೇಕಿದೆ ಎಂದಿದ್ದಾರೆ.
ಖಾಸಗಿ ಸ್ಪೋರ್ಟ್ಸ್ ವಾಹಿನಿಯಲ್ಲಿ ತನ್ನ ಅನಿಸಿಕೆ ಹಂಚಿಕೊಂಡಿರುವ ಆಕಾಶ್ ಚೋಪ್ರಾ, “ಭಾರತ ಪ್ರಯೋಗಗಳಿಗಾಗಿ ಸರಣಿ ಆಡಬಯಿಸಿದರೆ, ಯುವ ಆಟಗಾರರಿಗೆ ಅವಕಾಶ ನೀಡುವ ಲೆಕ್ಕಾಚಾರದೊಂದಿಗೆ ಆಡಿದ್ದೇ ಆದಲ್ಲಿ ಅದರಲ್ಲಿ ಬದಲಾವಣೆ ಮಾಡವುದೇಕೆ? ಮೊದಲ ಪಂದ್ಯದಲ್ಲಿ ಹಾಗೂ ಎರಡನೇ ಪಂದ್ಯದಲ್ಲಿ ಅದನ್ನ ಮಾಡಿದ್ದೀರಿ, ಈಗ ಪ್ರಮುಖ ಆಟಗಾರರನ್ನ ಕಣಕ್ಕಿಳಿಸಿ” ಎಂದು ಸಲಹೆ ನೀಡಿದ್ದಾರೆ.
ಸರಣಿಯ ಮೊದಲ ಪಂದ್ಯದಲ್ಲಿ 5 ವಿಕೆಟ್ಗಳ ಗೆಲುವು ಸಾಧಿಸಿದ್ದ ಭಾರತ, 2ನೇ ಪಂದ್ಯದಲ್ಲಿ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಇವರ ಸ್ಥಾನದಲ್ಲಿ ಸಂಜೂ ಸ್ಯಾಮ್ಸನ್ ಮತ್ತು ಅಕ್ಸರ್ ಪಟೇಲ್ಗೆ ತಂಡದಲ್ಲಿ ಸ್ಥಾನ ನೀಡಲಾಗಿತ್ತು. ಆದರೆ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿದ ಭಾರತ 5 ವಿಕೆಟ್ಗಳ ಸೋಲು ಕಂಡಿತ್ತು. ಹೀಗಾಗಿ ಟೀಂ ಇಂಡಿಯಾದ ಪ್ರದರ್ಶನದ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು.
IND v WI, Team India, West Indies, Sports Karnataka