ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡದಂತೆ ನಡೆಯುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದ್ದು, ಇದೀಗ ಈ ಹೋರಾಟಕ್ಕೆ ಭಾರತ ತಂಡದ ವಿಕೆಟ್-ಕೀಪರ್ ಬ್ಯಾಟರ್ ಕೆ.ಎಲ್. ರಾಹುಲ್ ಸಹ ತಮ್ಮ ಬೆಂಬಲ ಸೂಚಿಸಿದ್ದಾರೆ.
ಈ ಕುರಿತಂತೆ ತಮ್ಮ ಎಕ್ಸ್(X) ಖಾತೆಯಲ್ಲಿ ಬರೆದುಕೊಂಡಿರುವ ಕನ್ನಡಿಗ, “ಕಾವೇರಿ ಎಂದೂ ನಮ್ಮದು, ಕಾವೇರಿ ಹುಟ್ಟುವುದು, ಅತಿ ಹೆಚ್ಚು ನೀರು ಸಂಗ್ರಹವಾಗುವುದು ಕರ್ನಾಟಕದಲ್ಲಿ. ಆದರೆ, ಆ ನೀರನ್ನು ಬಳಸಿಕೊಳ್ಳಲು ಪ್ರತಿ ವರ್ಷ ಕಾನೂನು ಹೋರಾಟದ ಜತೆಗೆ ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯ ಕನ್ನಡಿಗರದು. ಇದು ನಮ್ಮ ದುರಂತ… ಕಾವೇರಿ ಇಡೀ ಕರ್ನಾಟಕದ ಆಸ್ತಿ..” ಎನ್ನುವ ಮೂಲಕ ಕಾವೇರಿ ಹೋರಾಟಕ್ಕೆ ದನಿಗೂಡಿಸಿದ್ದಾರೆ. ಟೀಂ ಇಂಡಿಯಾದ ಸ್ಟಾರ್ ಆಟಗಾರನ ಈ ಸಂದೇಶಕ್ಕೆ ಸಂಬಂಧಿಸಿದಂತೆ ಕ್ರಿಕೆಟ್ ಅಭಿಮಾನಿಗಳು ಸೇರಿದಂತೆ ಕನ್ನಡಿಗರಿಂದ ಮೆಚ್ಚುಗೆ ಸಹ ವ್ಯಕ್ತವಾಗಿದೆ. ಅದರಲ್ಲೂ ಕಾವೇರಿ ಹೋರಾಟದ ಕುರಿತು ಕನ್ನಡದಲ್ಲೇ ಬರೆದುಕೊಂಡಿರುವುದು ಕನ್ನಡ ಹಾಗೂ ಕರ್ನಾಟಕದ ಮೇಲೆ ರಾಹುಲ್ ಅವರಿಗೆ ಇರುವ ಅಭಿಮಾನವನ್ನ ತೋರಿಸುತ್ತಿದೆ.
ಕಾವೇರಿ ಎಂದೂ ನಮ್ಮದು
ಕಾವೇರಿ ಹುಟ್ಟುವುದು, ಅತಿ ಹೆಚ್ಚು ನೀರು ಸಂಗ್ರಹವಾಗುವುದು ಕರ್ನಾಟಕದಲ್ಲಿ. ಆದರೆ, ಆ ನೀರನ್ನು ಬಳಸಿಕೊಳ್ಳಲು ಪ್ರತಿ ವರ್ಷ ಕಾನೂನು ಹೋರಾಟದ ಜತೆಗೆ ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯ ಕನ್ನಡಿಗರದು
ಇದು ನಮ್ಮ ದುರಂತ…
ಕಾವೇರಿ ಇಡೀ ಕರ್ನಾಟಕದ ಆಸ್ತಿ..#ಕಾವೇರೀನಮ್ಮದು #KicchaSudeep #MaxTheMovie pic.twitter.com/IjnCVwOmWq— K L Rahul 💙 (@_klrahul__) September 25, 2023
ರಾಜ್ಯದಲ್ಲಿ ನಡೆಯುತ್ತಿರುವ ಕಾವೇರಿ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡದಂತೆ ಆಗ್ರಹಿಸಿ ಈಗಾಗಲೇ ರೈತರು ಸೇರಿದಂತೆ ಹಲವು ಸಂಘಟನೆಗಳು ಸತತ ಪ್ರತಿಭಟನೆ ನಡೆಸುತ್ತಿದ್ದು, ಈ ನಡುವೆ ಇಂದು(ಸೆ.26) ತಮಿಳುನಾಡಿಗೆ ಕಾವೇರಿ ನೀರು ಬಿಡದಂತೆ ಆಗ್ರಹಿಸಿ ಬೆಂಗಳೂರು ಬಂದ್ ನಡೆಸಲು ಕೆಲವು ಸಂಘಟನೆಗಳು ಕರೆ ನೀಡಿವೆ.
Cricket, Cauvery Protest, KL Rahul, Teal India, Sports Karnataka