ದೇಶೀ ಕ್ರಿಕೆಟ್ನ ಸರ್ವಶ್ರೇಷ್ಠ ಟೂರ್ನಿ ರಣಜಿ ಟ್ರೋಫಿ ಕ್ರಿಕೆಟ್ಗೆ ಈ ಬಾರಿ ಹೊಸ ಟಚ್ ಸಿಕ್ಕಿತ್ತು. ಕೋವಿಡ್ ಕಾರಣದಿಂದ 2 ವರ್ಷಗಳಿಂದ ಟೂರ್ನಿ ನಡೆಯದೇ ಇದ್ದಿದ್ದರಿಂದ ಈ ಬಾರಿ ಟೂರ್ನಿಗೆ ಹೊಸ ಸ್ವರೂಪ ನೀಡಲಾಗಿತ್ತು. ಐಪಿಎಲ್ ಟೂರ್ನಿಯ ಆರಂಭಕ್ಕೆ ಮುನ್ನ ಎಲ್ಲಾ ಲೀಗ್ ಪಂದ್ಯಗಳು ಮುಗಿದಿದ್ದರೆ, ಐಪಿಎಲ್ ನಂತರ ನಾಕೌಟ್ ಪಂದ್ಯಗಳು ನಡೆಯಲಿವೆ. ಈಗ ಬಿಸಿಸಿಐ ನಾಕೌಟ್ ಗೆ ಶೆಡ್ಯೂಲ್ ಫಿಕ್ಸ್ ಮಾಡಿದೆ.
ರಣಜಿ ಟ್ರೋಫಿ ನಾಕೌಟ್ ಪಂದ್ಯಗಳನ್ನು ಬಿಸಿಸಿಐ 2 ದಿನ ತಡವಾಗಿ ಆರಂಭಿಸಲು ನಿರ್ಧರಿಸಿದೆ. ಈ ಹಿಂದೆ ಕ್ವಾರ್ಟರ್ ಫೈನಲ್ ಪಂದ್ಯಗಳು ಜೂನ್ 4ರಂದು ಆರಂಭವಾಗಬೇಕಿತ್ತು. ಆದರೆ ಈಗ ಅದು ಜೂನ್ 6ರಿಂದ ಆರಂಭವಾಗಲಿದೆ. ನಾಕೌಟ್ ಪಂದ್ಯಗಳಿಗೆ ಬೆಂಗಳೂರು ಆತಿಥ್ಯ ವಹಿಸಲಿದೆ. 2 ಸೆಮಿಫೈನಲ್ ಪಂದ್ಯಗಳು ಜೂನ್ 14ರಿಂದ 18ರವರೆಗೆ ಹಾಗೂ ಫೈನಲ್ ಪಂದ್ಯ ಜೂನ್ 22ರಿಂದ 26ರ ವರೆಗೆ ನಿಗದಿಯಾಗಿದೆ. ಫೈನಲ್ ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
ಜೂನ್ 19ಕ್ಕೆ ಚಿನ್ನಸ್ವಾಮಿಯಲ್ಲಿ ಭಾರತ-ದ.ಆಫ್ರಿಕಾ ಟಿ20 ಇರುವ ಕಾರಣ, ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಕರ್ನಾಟಕ, ಮಧ್ಯಪ್ರದೇಶ, ಪಂಜಾಬ್, ಉತ್ತರ ಪ್ರದೇಶ, ಉತ್ತರಖಂಡ, ಜಾರ್ಖಂಡ್, ಮುಂಬೈ ಹಾಗೂ ಬಂಗಾಳ ತಂಡಗಳು ನಾಕೌಟ್ ಹಂತಕ್ಕೆ ಲಗ್ಗೆಯಿಟ್ಟಿವೆ. ಮೊದಲ ಕ್ವಾರ್ಟರ್ ಫೈನಲ್ನಲ್ಲಿ ಬಂಗಾಳ-ಜಾರ್ಖಂಡ್ ಮುಖಾಮುಖಿಯಾಗಲಿದ್ದು, 2ನೇ ಕ್ವಾರ್ಟರ್ನಲ್ಲಿ ಮುಂಬೈ-ಉತ್ತಾರಖಂಡ, 3ನೇ ಕ್ವಾರ್ಟರ್ನಲ್ಲಿ ಕರ್ನಾಟಕ-ಉತ್ತರ ಪ್ರದೇಶ ಹಾಗೂ 4ನೇ ಕ್ವಾರ್ಟರ್ನಲ್ಲಿ ಪಂಜಾಬ್-ಮಧ್ಯಪ್ರದೇಶ ಸೆಣಸಾಟ ನಡೆಸಲಿವೆ.