ಟೀಮ್ ಇಂಡಿಯಾ (Team India) ಏಷ್ಯಾಕಪ್ನಲ್ಲಿ (Asia Cup) ಸತತವಾಗಿ ಸೋಲು ಕಂಡಿದೆ. ಸೂಪರ್ 4ನಲ್ಲಿ ಪಾಕ್ (Pak) ಮತ್ತು ಶ್ರೀಲಂಕಾ (Srilanka) ವಿರುದ್ಧ ಕೊನೆಯ ಓವರ್ನಲ್ಲಿ ಸೋತಿದ್ದು ಭಾರತದ ಕೈಯಿಂದ ಏಷ್ಯಾಕಪ್ ಅನ್ನೇ ಕಿತ್ತುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಹಾಗಂತ ಹಾಲಿ ಚಾಂಪಿಯನ್ಸ್ ಸಂಪೂರ್ಣವಾಗಿ ಟೂರ್ನಿಯಿಂದ ಹೊರ ಬಿದ್ದಿಲ್ಲ. ಲೆಕ್ಕಾಚಾರದ (Calculation)ಪ್ರಕಾರ ಭಾರತದ ಫೈನಲ್ ಸಾಧ್ಯತೆ ಇನ್ನೂ ಜೀವಂತವಿದೆ.
ರೋಹಿತ್ ಬಳಗ ಫೈನಲ್ ಪ್ರವೇಶಪಡೆಯಬೇಕಾದರೆ ಇರುವುದು ಒಂದೇ ದಾರಿ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ (Afghanistan) ತಂಡಗಳು ಸೋಲಬೇಕು. ಇಂದು ಪಾಕಿಸ್ತಾನ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಪಾಕ್ ಗೆದ್ದರೆ ಭಾರತ ಮತ್ತು ಅಫ್ಘಾನ್ ಜೊತೆಗೆ ಟೂರ್ನಿಯಿಂದ ಹೊರ ಬೀಳುತ್ತವೆ. ಅಫ್ಘಾನಿಸ್ತಾನ ಗೆದ್ದರೆ ಮತ್ತೆ ಆಸೆ ಚಿಗುರುತ್ತದೆ.
ಈ ಲೆಕ್ಕಾಚಾರ ಇಲ್ಲಿಗೇ ನಿಲ್ಲುವುದಿಲ್ಲ. ಭಾರತ ತನ್ನ ಮುಂದಿನ ಪಂದ್ಯವನ್ನು ಅಫ್ಘಾನಿಸ್ತಾನದ ಮೇಲೆ ಆಡುತ್ತದೆ. ಆ ಪಂದ್ಯದಲ್ಲಿ ಭಾರತ ದೊಡ್ಡ ಅಂತರದಿಂದ ಗೆದ್ದು ರನ್ರೇಟ್ ಹೆಚ್ಚಿಸಿಕೊಳ್ಳಬೇಕು. ಅಷ್ಟಾದ್ರೂ ಸಾಕಾಗವುದಿಲ್ಲ. ಭಾರತಕ್ಕೆ ಶ್ರೀಲಂಕಾದ ನೆರವು ಕೂಡ ಬೇಕಿದೆ. ಶ್ರೀಲಂಕಾ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಕೂಡ ಭರ್ಜರಿಯಾಗಿ ಸೋಲಿಸಬೇಕಿದೆ.
ಒಟ್ಟಿನಲ್ಲಿ ಟೀಮ್ ಇಂಡಿಯಾದ ಭವಿಷ್ಯ ಮೊದಲಿಗೆ ಅಫ್ಘಾನಿಸ್ತಾನದ ಕೈಯಲ್ಲಿದ್ದರೆ , ನಂತರ ಶ್ರೀಲಂಕಾದ ಕೈಯಲ್ಲಿದೆ. ಒಟ್ಟಿನಲ್ಲಿ ಬಲಿಷ್ಠ ಭಾರತದ ಹಣೆಬರಹವನ್ನು ಬೇರೊಂದು ತಂಡಗಳು ಬರೆಯುತ್ತಿರುವುದು ನಿಜಕ್ಕೂ ದುರಾದೃಷ್ಟಕರ.