ಆಗಸ್ಟ್ 30ರಿಂದ ಆರಂಭವಾಗಲಿರುವ ಏಷ್ಯಾಕಪ್-2023ರ ಟೂರ್ನಿಗೆ ಭಾರತ ತಂಡವನ್ನ ಪ್ರಕಟಿಸಲಾಗಿದ್ದು, ಹಿರಿಯ ಆಟಗಾರರ ಜೊತೆಗೆ ಕೆಲವು ಯುವ ಆಟಗಾರರಿಗೆ ಮಹತ್ವದ ಪಂದ್ಯಾವಳಿಯಲ್ಲಿ ಆಡುವ ಅವಕಾಶ ಒಲಿದು ಬಂದಿದೆ.
ಈ ನಡುವೆ ಏಷ್ಯಾಕಪ್ನಲ್ಲಿ ಭಾರತ ತಂಡದಲ್ಲಿ ಸ್ಥಾನ ದೊರೆಯುವ ಬಗ್ಗೆ ನಿರೀಕ್ಷೆಯಲ್ಲಿದ್ದ ಕೆಲವು ಅನುಭವಿ ಆಟಗಾರರಿಗೆ ಭಾರೀ ನಿರಾಸೆ ಮೂಡಿಸಿದೆ. ಅಲ್ಲದೇ ವರ್ಷಾಂತ್ಯದಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿ ಬೆನ್ನಲ್ಲೇ ನಡೆಯುತ್ತಿರುವ ಏಷ್ಯಾಕಪ್ ಟೂರ್ನಿಗೆ ಯುವ ಆಟಗಾರರಿಗೆ ಹೆಚ್ಚು ಅವಕಾಶ ನೀಡಿರುವ ಬಿಸಿಸಿಐ ಆಯ್ಕೆ ಸಮಿತಿ ನಿರ್ಧಾರ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳಲ್ಲಿ ಅಚ್ಚರಿಯನ್ನುಂಟು ಮಾಡಿದೆ.
ಬಹುನಿರೀಕ್ಷಿತ ಏಷ್ಯಾಕಪ್ ಟೂರ್ನಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಬಗ್ಗೆ ಹಿರಿಯ ಆಟಗಾರರಾದ ಶಿಖರ್ ಧವನ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಹಲ್, ಉಮೇಶ್ ಯಾದವ್ ಅವರುಗಳು ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಹೊಂದಿದ್ದರು. ಆದರೆ ಯುವ ಆಟಗಾರರಿಗೆ ಅವಕಾಶ ನೀಡಬೇಕೆಂಬ ನಿಟ್ಟಿನಲ್ಲಿ ಆಯ್ಕೆ ಸಮಿತಿ ತೆಗೆದುಕೊಂಡಿರುವ ನಿರ್ಧಾರ ಈ ಎಲ್ಲಾ ಅನುಭವಿ ಆಟಗಾರರಿಗೆ ಬೇರಸ ಮೂಡಿಸಿದೆ.
ಟೀಂ ಇಂಡಿಯಾದ ಆರಂಭಿಕ ಬ್ಯಾಟರ್ ಆಗಿ ದೊಡ್ಡಮಟ್ಟದ ಯಶಸ್ಸು ಕಂಡಿದ್ದ ಶಿಖರ್ ಧವನ್, ಏಷ್ಯಾಕಪ್ ಟೂರ್ನಿಯಲ್ಲಿ ಸ್ಥಾನ ಪಡೆದು ಟೀಂ ಇಂಡಿಯಾಕ್ಕೆ ಕಮ್ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದರು. ಏಕದಿನ ಕ್ರಿಕೆಟ್ನಲ್ಲಿ ಉತ್ತಮ ದಾಖಲೆ ಹೊಂದಿರುವ ಧವನ್, 167 ಪಂದ್ಯಗಳಲ್ಲಿ 44.11ರ ಬ್ಯಾಟಿಂಗ್ ಸರಾಸರಿಯಲ್ಲಿ 17 ಶತಕ, 39 ಅರ್ಧಶತಕಗಳ ಸಹಾಯದಿಂದ 6793 ರನ್ಗಳಿಸಿದ್ದಾರೆ. ಆದರೆ ನಂತರದ ದಿನಗಳಲ್ಲಿ ಫಾರ್ಮ್ ಸಮಸ್ಯೆಯಿಂದ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದರು.
ಮತ್ತೊಂದೆಡೆ ಟೀಂ ಇಂಡಿಯಾದ ಸ್ವಿಂಗ್ ಸ್ಪೆಷಲಿಸ್ಟ್ ಎಂದು ಖ್ಯಾತಿ ಪಡೆದಿರುವ ವೇಗಿ ಭುವನೇಶ್ವರ್ ಕುಮಾರ್, ಏಷ್ಯಾಕಪ್ ಟೂರ್ನಿಯ ಮೂಲಕ ತಂಡಕ್ಕೆ ಮರಳುವ ವಿಶ್ವಾಸ ಹೊಂದಿದ್ದರು. ಆಡಿರುವ 121 ಏಕದಿನ ಪಂದ್ಯಗಳಲ್ಲಿ 141 ವಿಕೆಟ್ ಪಡೆದಿರುವ ಭುವಿ, 5.08ರ ಬೌಲಿಂಗ್ ಎಕಾನಮಿ ಹೊಂದಿದ್ದಾರೆ. ಆದರೆ ಕಳೆದ ವರ್ಷ ನಡೆದ ಸೌತ್ ಆಫ್ರಿಕಾ ಪ್ರವಾಸದಲ್ಲಿ ಕಡೆಯದಾಗಿ ಏಕದಿನ ಪಂದ್ಯವನ್ನಾಡಿದ್ದ ಭುವನೇಶ್ವರ್ ಕುಮಾರ್, ಫಾರ್ಮ್ ವೈಫಲ್ಯದಿಂದಾಗಿ ತಂಡದಿಂದ ಹೊರಗುಳಿದಿದ್ದರು. ಈ ನಡುವೆ ಯುವ ಬೌಲರ್ಗಳು ಉತ್ತಮ ಫಾರ್ಮ್ನಲ್ಲಿರುವ ಕಾರಣ ಸ್ವಿಂಗ್ ಸ್ಪೆಷಲಿಸ್ಟ್ಗೆ ಏಷ್ಯಾಕಪ್ ತಂಡದಲ್ಲಿ ಅವಕಾಶ ಕೈತಪ್ಪಿದೆ.
ಅಂತೆಯೇ ಭಾರತದ ಪರ 113 ಏಕದಿನ ಪಂದ್ಯಗನ್ನಾಡಿ 151 ವಿಕೆಟ್ ಪಡೆದಿರುವ ʼಕೇರಂ ಬಾಲ್ ಸ್ಪೆಷಲಿಸ್ಟ್ʼ ರವಿಚಂದ್ರನ್ ಅಶ್ವಿನ್ ಕೂಡ ಏಷ್ಯಾಕಪ್ ಟೂರ್ನಿಗೆ ಅವಕಾಶ ಸಿಗದೆ ನಿರಾಸೆ ಅನುಭವಿಸಿದ್ದರೆ. ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ಗೂ ಇದೇ ಪರಿಸ್ಥಿತಿ ಎದುರಾಗಿದೆ. ಕೇವಲ 72 ಏಕದಿನ ಪಂದ್ಯಗಳಲ್ಲಿ 5.27ರ ಎಕಾನಮಿಯಲ್ಲಿ 121 ವಿಕೆಟ್ಗಳನ್ನ ಪಡೆದಿರುವ ಚಹಲ್, ಭಾರತ ತಂಡದ ಚಾಣಾಕ್ಷ ಸ್ಪಿನ್ನರ್ ಎನಿಸಿದ್ದರು. ಆದರೆ ಮಹತ್ವದ ಟೂರ್ನಿಯಲ್ಲಿ ಅವಕಾಶ ಪಡೆಯುವಲ್ಲಿ ವಿಫಲವಾಗಿ ಭಾರೀ ನಿರಾಸೆ ಅನುಭವಿಸಿದ್ದಾರೆ.
ಉಳಿದಂತೆ ವೇಗದ ಬೌಲರ್ ಉಮೇಶ್ ಯಾದವ್ ಸಹ ಏಷ್ಯಾಕಪ್ನಲ್ಲಿ ಆಡುವ ಅವಕಾಶ ಪಡೆಯುವಲ್ಲಿ ಎಡವಿದ್ದಾರೆ. ಇವರೊಂದಿಗೆ ಯುವ ವೇಗಿಗಳಾದ ಅರ್ಶದೀಪ್ ಸಿಂಗ್ ಹಾಗೂ ಉಮ್ರಾನ್ ಮಲ್ಲಿಕ್ ಅವರುಗಳು ಸಹ ಏಷ್ಯಾಕಪ್ ಟೂರ್ನಿಯಲ್ಲಿ ಆಡುವ ಅವಕಾಶ ಪಡೆದಿಲ್ಲ.
Asia Cup, Team India, Shikhar Dhawan, Bhuvneshwar Kumar, Ravi Ashwin, Yuzvendra Chahal, Sports Karnataka