ಐಪಿಎಲ್ 2022ರಲ್ಲಿ ಸತತ ನಾಲ್ಕು ಸೋಲುಗಳಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ಕಡೆಗೂ ಗೆಲುವಿನ ಖಾತೆ ತೆರೆದಿದೆ. ಈ ಗೆಲುವಿನೊಂದಿಗೆ ರವೀಂದ್ರ ಜಡೇಜಾ ಸಹ ನಾಯಕನಾಗಿ ತಮ್ಮ ಮೊದಲ ಗೆಲುವು ಕಂಡಿದ್ದು, ಐಪಿಎಲ್ನಲ್ಲಿ ನಾಯಕನಾಗಿ ಪಡೆದ ಚೊಚ್ಚಲ ಗೆಲುವನ್ನು ತಮ್ಮ ಪತ್ನಿಗೆ ಅರ್ಪಿಸಿದ್ದಾರೆ.
15ನೇ ಆವೃತ್ತಿಯ ಐಪಿಎಲ್ನಲ್ಲಿ ಚೆನ್ನೈ ತಂಡದ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಿರುವ ರವೀಂದ್ರ ಜಡೇಜಾ, ಸತತ ನಾಲ್ಕು ಸೋಲುಗಳಿಂದ ನಿರಾಸೆ ಅನುಭವಿಸಿದ್ದರು. ಆದರೆ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಕ್ಯಾಪ್ಟನ್ ಆಗಿ, ಮೊದಲ ಗೆಲುವು ಪಡೆದರು. ಸಿಎಸ್ಕೆ ಪರ ಬ್ಯಾಟಿಂಗ್ನಲ್ಲಿ ರಾಬಿನ್ ಉತ್ತಪ್ಪ, ಶಿವಂ ದುಬೆ ಮಿಂಚಿದರೆ, ಬೌಲಿಂಗ್ನಲ್ಲಿ ಮಹೀಶ್ ತೀಕ್ಷಣ ಚಾಣಾಕ್ಷ ಬೌಲಿಂಗ್ನಿಂದ ತಂಡದ ಗೆಲುವಿಗೆ ಕಾರಣರಾದರು. ಆದರೆ ನಾಯಕನಾಗಿ ಪಡೆದ ಈ ಗೆಲುವನ್ನು ರವೀಂದ್ರ ಜಡೇಜಾ, ತಮ್ಮ ಪತ್ನಿಗೆ ಅರ್ಪಿಸಿದ್ದು ವಿಶೇಷವೆನಿಸಿತು.
ಪಂದ್ಯದ ಬಳಿಕ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ರವೀಂದ್ರ ಜಡೇಜಾ, ನಾಯಕನಾಗಿ ಇದು ನನ್ನ ಮೊದಲ ಗೆಲುವು, ಹೀಗಾಗಿ ಈ ಗೆಲುವನ್ನು ನನ್ನ ಹೆಂಡತಿಗೆ ಅರ್ಪಿಸಲು ಬಯಸುತ್ತೇನೆ. ಏಕೆಂದರೆ ಮೊದಲ ಗೆಲುವು ಯಾವಾಗಲೂ ವಿಶೇಷವಾಗಿರಲಿದೆ. ಮೊದಲ ನಾಲ್ಕು ಪಂದ್ಯದಲ್ಲಿ ನಾವು ಗೆಲುವಿನ ಗೆರೆದಾಟಲು ಸಾಧ್ಯವಾಗಿರಲಿಲ್ಲ. ಆದರೆ ಸಾಂಘಿಕ ಪ್ರದರ್ಶನದ ಮೂಲಕ ನಾವು ಕಮ್ ಬ್ಯಾಕ್ ಮಾಡಿದ್ದೇವೆ. ಬ್ಯಾಟಿಂಗ್ ವಿಭಾಗದ ಸೇರಿದಂತೆ ಎಲ್ಲರೂ ಉತ್ತಮ ಪ್ರದರ್ಶನ ನೀಡಿದರು. ರಾಬಿನ್ ಉತ್ತಪ್ಪ ಮತ್ತು ಶಿವಂ ದುಬೆ, ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. ಬೌಲರ್ಗಳು ಸಹ ತಮ್ಮ ಕೊಡುಗೆ ನೀಡಿದರು.
ತಂಡದ ಮ್ಯಾನೇಜ್ಮೆಂಟ್ ನನ್ನ ಮೇಲೆ ಯಾವುದೇ ಒತ್ತಡ ಹೇರುವುದಿಲ್ಲ. ಅವರು ನಿರಾಳವಾಗಿದ್ದು, ಪ್ರತಿಬಾರಿ ನನ್ನನ್ನು ಪ್ರೇರೇಪಿಸುತ್ತಾರೆ. ನಾಯಕನಾಗಿ ನಾನು ಇನ್ನು ಹಿರಿಯ ಆಟಗಾರರ ಸಲಹೆ ಪಡೆಯಲಿದ್ದೇನೆ. ಮಹೀ ಭಾಯ್ ಇದ್ದು, ನಾವು ಪ್ರತಿಬಾರಿ ಅವರ ಬಳಿಗೆ ತೆರಳಿ ಚರ್ಚಿಸುತ್ತೇನೆ. ನಾನಿನ್ನೂ ಕಲಿಯುತ್ತಿದ್ದು, ಪ್ರತಿ ಪಂದ್ಯದೊಂದಿಗೆ ಉತ್ತಮಗೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಯಾವುದೇ ಒತ್ತಡ ಅಥವಾ ಆತಂಕಕ್ಕೆ ಸಿಲುಕದೆ, ಪಾಸಿಟಿವ್ ಕ್ರಿಕೆಟ್ ಆಡುತ್ತಾ ಮುನ್ನಡೆಯಲಿದ್ದೇವೆ ಎಂದಿದ್ದಾರೆ.