ಪ್ರವಾಸಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಅಜಿಂಕ್ಯಾ ರಹಾನೆ ಹಾಗೂ ಚೇತೇಶ್ವರ್ ಪುಜಾರ ಅವರನ್ನು ತಂಡದಿಂದ ಕೈಬಿಡುವ ನಿರೀಕ್ಷೆ ಇತ್ತು ಎಂದು ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಹೇಳಿದ್ದಾರೆ.
ಟೀಂ ಇಂಡಿಯಾದ ಹಿರಿಯ ಆಟಗಾರರಾದ ರಹಾನೆ ಮತ್ತು ಪುಜಾರ ಅವರನ್ನು ತಂಡದ ಡ್ರಾಪ್ ಮಾಡಿರುವ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಸುನೀಲ್ ಗವಾಸ್ಕರ್, ಭಾರತ ತಂಡದ ಈ ಇಬ್ಬರು ಹಿರಿಯ ಆಟಗಾರರು ಕಳೆದ ಕೆಲವು ವರ್ಷಗಳಿಂದ ಟೆಸ್ಟ್ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಪರದಾಟ ನಡೆಸುತ್ತಿದ್ದಾರೆ. ಹೀಗಾಗಿ ದಕ್ಷಿಣ ಆಫ್ರಿಕಾ ಸರಣಿ ಬಳಿಕ ಇಬ್ಬರನ್ನು ತಂಡದಿಂದ ಕೈಬಿಡುವ ಬಗ್ಗೆ ನಿರೀಕ್ಷಿಸಲಾಗಿತ್ತು ಎಂದಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇವರುಗಳು ಶತಕ ಅಥವಾ 80-90 ರನ್ಗಳಿಸಿದ್ದರೆ, ವಿಷಯ ವಿಭಿನ್ನವಾಗಿರುತ್ತಿತ್ತು. ರಹಾನೆ ಸೌತ್ ಆಫ್ರಿಕಾ ವಿರುದ್ಧ ಉತ್ತಮವಾಗಿ ಆಡಿದರಾದರೂ, ತಂಡಕ್ಕೆ ಅಗತ್ಯವಿದ್ದ ಸಂದರ್ಭದಲ್ಲಿ ಅವರಿಂದ ರನ್ಗಳಿಸಲು ಸಾಧ್ಯವಾಗಲಿಲ್ಲ ಎಂದು ಸುನೀಲ್ ಗವಾಸ್ಕರ್ ಹೇಳಿದ್ದಾರೆ.
ಅಲ್ಲದೇ, ಪುಜಾರ ಹಾಗೂ ರಹಾನೆ ಖಂಡಿತವಾಗಿ ತಂಡಕ್ಕೆ ಮರಳಬಹುದು. ಆದರೆ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವಕಾಶ ಪಡೆದಿರುವ ಯುವ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದೇ ಆದಲ್ಲಿ, ಈ ಇಬ್ಬರು ಆಟಗಾರರಿಗೆ ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟವಾಗಬಹುದು. ಹೀಗಾಗಿ ರಹಾನೆ ಮತ್ತು ಪುಜಾರ ಅವರುಗಳು ರಣಜಿ ಟ್ರೋಫಿಯಲ್ಲಿ ಸ್ಥಿರ ಪ್ರದರ್ಶನ ನೀಡುವ ಮೂಲಕ ಪ್ರತಿ ಪಂದ್ಯದಲ್ಲಿ 200-250 ಸ್ಕೋರ್ ಮಾಡಿದರೆ ಖಂಡಿತವಾಗಿ ತಂಡಕ್ಕೆ ಕಮ್ಬ್ಯಾಕ್ ಮಾಡಲು ಅವಕಾಶವಿದೆ.
ಆದ್ರೆ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ಬಳಿಕ ಭಾರತ, ಇಂಗ್ಲೆಂಡ್ನಲ್ಲಿ ಏಕೈಕ ಟೆಸ್ಟ್ ಪಂದ್ಯವನ್ನಾಡಲಿದೆ. ಇದಾದ ನಂತರ ಟಿ20 ವಿಶ್ವಕಪ್ ನಡೆಯಲಿದ್ದು, ಮುಂದಿನ ನವೆಂಬರ್ – ಡಿಸೆಂಬರ್ವರೆಗೂ ಯಾವುದೇ ಟೆಸ್ಟ್ ಪಂದ್ಯಗಳು ನಡೆಯುವುದಿಲ್ಲ ಎಂದ ಅವರು, ಒಂದೊಮ್ಮೆ ಇಬ್ಬರು ಹಿರಿಯ ಆಟಗಾರರ ಸ್ಥಾನದಲ್ಲಿ ಯುವ ಆಟಗಾರರಿಗೆ ಅವಕಾಶ ನೀಡಿ, ಯುವ ಆಟಗಾರರು ತಮಗೆ ಸಿಗುವ ಅವಕಾಶವನ್ನು ಬಳಸಿಕೊಂಡು ಉತ್ತಮವಾಗಿ ಆಡಿದ್ದೇ ಆದಲ್ಲಿ, ರಹಾನೆ ಮತ್ತು ಪುಜಾರ ಅವರುಗಳಿಗೆ ತಂಡಕ್ಕೆ ಮರಳುವುದು ಕಷ್ಟವಾಗಲಿದೆ ಎಂದು ಗವಾಸ್ಕರ್ ಸಂದರ್ಶನದಲ್ಲಿ ಹೇಳಿದ್ದಾರೆ.