ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟಿ-20 ಪಂದ್ಯಕ್ಕೆ ಇಬ್ಬನಿ ಅಡ್ಡಿಯನ್ನುಂಟು ಮಾಡಲಿದೆ. ಹೀಗಾಗಿ ಈ ಪಂದ್ಯದಲ್ಲಿ ಟಾಸ್ ಮಹತ್ತರವಾದ ಪಾತ್ರವನ್ನು ವಹಿಸಲಿದೆ ಎಂದು ರಾಂಚಿ ಅಂಗಣದ ಪಿಚ್ ಕ್ಯುರೇಟರ್ ಶ್ಯಾಮ್ ಬಹದ್ದೂರ್ ಸಿಂಗ್ ಹೇಳಿದ್ದಾರೆ.
ಬ್ಯಾಟ್ಸ್ ಮೆನ್ ಗಳಿಗೆ ಪೂರಕವಾಗಿರುವ ಈ ಮೈದಾನದಲ್ಲಿ ಬೌಲರ್ ಗಳು ಕೂಡ ಲಾಭವನ್ನು ಪಡೆದುಕೊಳ್ಳಬಹುದು ಎಂಬುದು ಪಿಚ್ ಕ್ಯುರೇಟರ್ ಅವರ ಅಭಿಮತವಾಗಿದೆ.
ಕ್ರಿಕೆಟ್ ಅಭಿಮಾನಿಗಳು ಪಂದ್ಯವನ್ನು ಎಂಜಾಯ್ ಮಾಡಲು ಬರುತ್ತಿದ್ದಾರೆ. ಹೀಗಾಗಿ ಸ್ಪೋರ್ಟಿಂಗ್ ಪಿಚ್ ಅನ್ನು ಸಿದ್ಧಪಡಿಸಿದ್ದೇವೆ. ಇದು ಪವರ್ ಹಿಟ್ಟಿಂಗ್ ಗೇಮ್. ಟೆಸ್ಟ್ ಅಥವಾ ರಣಜಿ ಪಂದ್ಯವಲ್ಲ ಎಂದು ಪಿಚ್ ಕ್ಯುರೇಟರ್ ಶ್ಯಾಮ್ ಬಹದ್ದೂರ್ ಸಿಂಗ್ ಹೇಳಿದ್ದಾರೆ.
ಇನ್ನು 2019ರ ನಂತರ ರಾಂಚಿ ಅಂಗಣದಲ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯ ನಡೆದಿತ್ತು. ಹಾಗೇ 2017ರ ನಂತರ ರಾಂಚಿ ಅಂಗಣದಲ್ಲಿ ನಡೆಯುತ್ತಿರುವ ಮೊದಲ ಟಿ-20 ಪಂದ್ಯ ಇದಾಗಿದೆ.
ಹಾಗೇ ಕಳೆದ ಜುಲೈ ನಲ್ಲಿ ಜಾರ್ಖಂಡ್ ರಾಜ್ಯದ ಟಿ-20 ಪಂದ್ಯಗಳು ನಡೆದಿದ್ದವು.
ಇನ್ನು ಭಾರತಕ್ಕೆ ರಾಂಚಿ ಅಂಗಣ ಅದೃಷ್ಟದ ತಾಣವಾಗಿದೆ. ಈ ಹಿಂದೆ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ವಿರುದ್ದ ನಡೆದ ಎರಡೂ ಟಿ-20 ಪಂದ್ಯಗಳನ್ನು ಟೀಮ್ ಇಂಡಿಯಾ ಗೆದ್ದುಕೊಂಡಿದೆ.
ಜೈಪುರದಲ್ಲಿ ನಡೆದಿದ್ದ ಮೊದಲ ಟಿ-20 ಪಂದ್ಯವನ್ನು ಟೀಮ್ ಇಂಡಿಯಾ ಗೆದ್ದುಕೊಂಡಿದೆ. ಈ ಮೂಲಕ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಟೀಮ್ ಇಂಡಿಯಾ 1-0ಯಿಂದ ಮುನ್ನಡೆ ಪಡೆದುಕೊಂಡಿದೆ. ಅಲ್ಲದೆ ಎರಡನೇ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿ ಕೈ ವಶಮಾಡಿಕೊಳ್ಳುವ ಲೆಕ್ಕಚಾರದಲ್ಲಿದೆ ರೋಹಿತ್ ಬಳಗ.