ವಿರಾಟ್ ಕೊಹ್ಲಿ ಮತ್ತು ರವಿಶಾಸ್ತ್ರಿ ಟೀಮ್ ಇಂಡಿಯಾದ ಖದರ್ ಬದಲಿಸಿದ್ದರು. ಶಾಸ್ತ್ರಿ ಮತ್ತು ವಿರಾಟ್ ಜುಗಲ್ಬಂಧಿ ಟೀಮ್ ಇಂಡಿಯಾವನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ದಿತ್ತು. ಐಸಿಸಿ ಟ್ರೋಫಿಗಳು ಕೈಗೆ ಸಿಕ್ಕಿಲ್ಲ ಅನ್ನುವ ಕೊರಗು ಬಿಟ್ಟರೆ ಟೀಮ್ ಇಂಡಿಯಾ ವಿಶ್ವದ ಶ್ರೇಷ್ಠ ತಂಡವಾಗಿತ್ತು. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ನ ಪಿಚ್ಗಳಲ್ಲಿ ಗೆಲ್ಲುವುದನ್ನು ಟೀಮ್ ಇಂಡಿಯಾ ಕಲಿತುಕೊಂಡಿತ್ತು. ಅಕ್ರಮಣಕ್ಕೆ ಅಕ್ರಮಣ ಅನ್ನುವ ಮಾತು ಟೀಮ್ ಇಂಡಿಯಾದಲ್ಲಿ ಮಾಮೂಲಿ ಆಗಿತ್ತು.
ಈಗ ಟೀಮ್ ಇಂಡಿಯಾದಲ್ಲಿ ಬದಲಾವಣೆ ಆಗುತ್ತಿದೆ. ರವಿಶಾಸ್ತ್ರಿ ಗುರುವಿನ ಸ್ಥಾನಕ್ಕೆ ಗುಡ್ ಬೈ ಹೇಳಿದ್ದಾರೆ. ವಿರಾಟ್ ಕೊಹ್ಲಿ ಟಿ20 ಕ್ಯಾಪ್ಟನ್ಸಿ ಬಿಟ್ಟಿದ್ದಾರೆ. ರಾಹುಲ್ ದ್ರಾವಿಡ್ ಗುರುವಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ಟಿ20ಯಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಟೀಮ್ ಇಂಡಿಯಾದ ಹೊಸ ಅಧ್ಯಾಯ ನ್ಯೂಜಿಲೆಂಡ್ ವಿರುದ್ಧದ ಸರಣಿಯ ಜೊತೆಗೆ ಆರಂಭವಾಗುತ್ತಿದೆ.
ಟೀಮ್ ಇಂಡಿಯಾದ ಹೊಸ ಕೋಚ್ ಮತ್ತು ಕ್ಯಾಪ್ಟನ್ಗೆ ಮೊದಲ ಅಸೈನ್ಮೆಂಟ್ ನ್ಯೂಜಿಲೆಂಡ್ ವಿರುದ್ಧದ ಸರಣಿ. 3 ಟಿ20 ಪಂದ್ಯಗಳು ಮತ್ತು 2 ಟೆಸ್ಟ್ ಪಂದ್ಯ ನ್ಯೂಜಿಲೆಂಡ್ ವಿರುದ್ಧ ನಡೆಯಲಿದೆ. ರೋಹಿತ್ ಶರ್ಮಾ ಟಿ20 ತಂಡದ ನಾಯಕನಾಗಿದ್ದಾರೆ. ಅಜಿಂಕ್ಯಾ ರಹಾನೆ ಮೊದಲ ಟೆಸ್ಟ್ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. 2ನೇ ಟೆಸ್ಟ್ ಗೆ ವಿರಾಟ್ ಕೊಹ್ಲಿ ತಂಡಕ್ಕೆ ವಾಪಾಸಾಗುವ ಮೂಲಕ ನಾಯಕತ್ವನ್ನು ಮತ್ತೆ ಪಡೆದುಕೊಳ್ಳಲಿದ್ದಾರೆ.
ಟಿ20 ಸರಣಿಯ ಮೊದಲ ಪಂದ್ಯ ನವೆಂಬರ್ 17ರಂದು ನಡೆಯಲಿದೆ. ಜೈಪುರದಲ್ಲಿ ಮೊದಲ ಟಿ20 ಪಂದ್ಯ ನಡೆದರೆ, 2ನೇ ಟಿ20 ಪಂದ್ಯ ರಾಂಚಿಯಲ್ಲಿಯಲ್ಲಿ ನಡೆಯಲಿದೆ. 3ನೇ ಪಂದ್ಯ ಕೊಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ನಡೆಯಲಿದೆ. ಟೆಸ್ಟ್ ಸರಣಿ ನವೆಂಬರ್ 25ರಿಂದ ಆರಂಭವಾಗಲಿದೆ.
ರವಿಶಾಸ್ತ್ರಿ ಗರಡಿಯಲ್ಲಿ ಟೀಮ್ ಇಂಡಿಯಾ ಗೆಲುವಿನ ಮೇಲೆ ಗೆಲುವು ಕಂಡಿತ್ತು. 2019ರ ಏಕದಿನ ವಿಶ್ವಕಪ್ನಲ್ಲಿ ಸೆಮಿಫೈನಲ್ನಲ್ಲಿ ಮುಗ್ಗರಿಸಿತ್ತು. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ನಲ್ಲಿ ಟೀಮ್ ಇಂಡಿಯಾ ರನ್ನರ್ ಅಪ್ ಆಗಿತ್ತು. ಈಗ ದ್ರಾವಿಡ್ ಮೇಲೆ ಜವಾಬ್ದಾರಿ ಹೆಚ್ಚಿದೆ. ಭವಿಷ್ಯದಲ್ಲಿ ಟೀಮ್ ಇಂಡಿಯಾವನ್ನು ಕಟ್ಟಬಲ್ಲ ಕೆಲಸ ಈಗಿನಿಂದಲೇ ನಡೆಯಬೇಕಿದೆ. ಅನುಭವಿಗಳ ವಯಸ್ಸು ಮುಗಿಯುತ್ತಾ ಬಂದಿರುವುದರಿಂದ ಹೊಸ ತಂಡಕ್ಕೆ ಬುನಾಧಿ ಹಾಕಬೇಕಾದ ಕೆಲಸ ನಡೆಯಬೇಕಿದೆ. ಒಟ್ಟಿನಲ್ಲಿ ಟೀಮ್ ಇಂಡಿಯಾದಲ್ಲಿ ದ್ರಾವಿಡ್ ನಾಯಕತ್ವದಲ್ಲಿ ಹೊಸ ಜೊತೆಯಾಟ ನಡೆಯಬೇಕಿದೆ.