12 ಕ್ರೀಡಾ ಸಾಧಕರಿಗೆ ಧ್ಯಾನ್ ಚಾಂದ್ ಖೇಲ್ ರತ್ನ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ..!
ಕ್ರೀಡಾ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿರುವ ಭಾರತದ ಶ್ರೇಷ್ಠ ಕ್ರೀಡಾಪಟುಗಳಿಗೆ 2021ನೇ ಸಾಲಿನ ಧ್ಯಾನ್ ಚಾಂದ್ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಟೋಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಬೇಟೆಯಾಡಿದ ಕ್ರೀಡಾಪಟುಗಳು ಸೇರಿ ಒಟ್ಟು 12 ಮಂದಿಗೆ ಈ ಬಾರಿಯ ಧ್ಯಾನ್ ಚಾಂದ್ ಖೇಲ್ ರತ್ನ ಪ್ರಶಸ್ತಿ ನೀಡಲಾಗಿದೆ. ಆದ್ರೆ ಟೊಕಿಯೋ ಪ್ಯಾರಾ ಒಲಿಂಪಿಕ್ಸ್ ನ ಬ್ಯಾಡ್ಮಿಂಟನ್ ನಲ್ಲಿ ಚಿನ್ನ ಗೆದ್ದ ಕೃಷ್ಣ ನಗರ್ ಅವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ.
ಟೋಕಿಯೋ ಒಲಿಂಪಿಕ್ಸ್ ನ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ, ರೆಸ್ಲಿಂಗ್ ಪಟು ರವಿ ಕುಮಾರ್, ಬಾಕ್ಸಿಂಗ್ ನಲ್ಲಿ ಲೊವ್ಲಿನಾ ಬೊರ್ಗೊಹೇನ್, ಹಾಕಿಯಲ್ಲಿ ಶ್ರೀಜೇಶ್ , ಪ್ಯಾರಾ ಶೂಟಿಂಗ್ ಪಟು ಅವನಿ ಲೆಖಾರಾ, ಪ್ಯಾರಾ ಅಥ್ಲೆಟಿಕ್ಸ್ ನಲ್ಲಿ ಸುಮಿತ್ ಆಂಟಿಲ್, ಪ್ಯಾರಾ ಬ್ಯಾಡ್ಮಿಂಟನ್ ನಲ್ಲಿ ಪ್ರಮೋದ್ ಭಾಗತ್, ಪ್ಯಾರಾ ಬ್ಯಾಡ್ಮಿಂಟನ್ ನಲ್ಲಿ ಕೃಷ್ಣ ನಗರ, ಪ್ಯಾರಾ ಶೂಟಿಂಗ್ ನಲ್ಲಿ ಮನೀಷ್ ನರ್ವಾಲ್, ಕ್ರಿಕೆಟ್ ನಲ್ಲಿ ಮಿಥಾಲಿ ರಾಜ್, ಫುಟ್ ಬಾಲ್ ನಲ್ಲಿ ಸುನೀಲ್ ಚೆಟ್ರಿ ಹಾಗೂ ಹಾಕಿಯಲ್ಲಿ ಮನ್ ಪ್ರಿತ್ ಸಿಂಗ್ ಅವರಿಗೆ ಪ್ರತಿಷ್ಠಿತ ಖೇಲ್ ರತ್ನ ಪ್ರಶಸ್ತಿಯನ್ನು ರಾಷ್ಟ್ರಪತಿ ರಾಮ್ನಾಥ್ ಕೊವಿಂದ್ ಪ್ರದಾನ ಮಾಡಿದ್ರು.
ಆದ್ರೆ ಈ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಪ್ಯಾರಾ ಬ್ಯಾಡ್ಮಿಂಟನ್ ನಲ್ಲಿ ಚಿನ್ನ ಗೆದ್ದ ಕೃಷ್ಣ ನಗರ್ ಅವರು ಭಾಗಿಯಾಗಿರಲಿಲ್ಲ. ಕೃಷ್ಣ ನಗರ್ ಅವರ ತಾಯಿ ನಿನ್ನೆ ವಿಧಿವಶರಾಗಿದ್ದರು. ಮಗ ಟೊಕಿಯೋ ಪ್ಯಾರಾ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದಿರುವುದನ್ನು ಕಣ್ತುಂಬಿಕೊಂಡಿದ್ದರು. ಆದ್ರೆ ವಿಧಿಯಾಟ ಬೇರೆನೇ ಆಗಿತ್ತು. ಪ್ರತಿಷ್ಠಿತ ಖೇಲ್ ರತ್ನ ಪ್ರಶಸ್ತಿ ಪಡೆಯುವುದನ್ನು ನೋಡಲು ಕೃಷ್ಣ ನಗರ್ ತಾಯಿಗೆ ಸಾಧ್ಯವಾಗಲಿಲ್ಲ.