ಕಪಾಳಮೋಕ್ಷ ಮಾಡಿಸಿಕೊಂಡ್ರೂ ಶ್ರೀಶಾಂತ್ ಗೆ ಭಜ್ಜಿ ಮೇಲೆ ಒಂಥರಾ ಪ್ರೀತಿ – ಗೌರವ
ಹರ್ಭಜನ್ ಸಿಂಗ್ ಅವರ ಕ್ರಿಕೆಟ್ ಬದುಕಿನ ಸಿಂಹಾವಲೋಕನ ಮಾಡಿದಾಗ ಹಲವು ಅದ್ಭುತ ಕ್ಷಣಗಳು ಕಣ್ಣ ಮುಂದೆ ಹಾದು ಹೋಗುತ್ತವೆ. ಹಾಗೆ ಹಲವು ವಿವಾದಗಳು ನೆನಪಿಗೆ ಬರುತ್ತವೆ. ಮೈದಾನದಲ್ಲಿ ಮಾಡುತ್ತಿದ್ದ ಚೇಸ್ಟೆಗಳು, ನಗು, ವಿಕೆಟ್ ಕಬಳಿಸಿದಾಗ ಪಡುವ ಸಂಭ್ರಮ. ಗೆಲುವಿನ ಖುಷಿ ಹೀಗೆ ಎಲ್ಲವೂ ನೋಡಲು ಅದ್ಭುತವಾಗಿರುತ್ತವೆ.
ಅದ್ರಲ್ಲೂ ಭಜ್ಜಿ ಜೊತೆ ಕೇರಳ ಎಕ್ಸ್ ಪ್ರೆಸ್ ಶ್ರೀಶಾಂತ್ ಕಿತಾಪತಿಗಳನ್ನು ಮರೆಯುವ ಹಾಗಿಲ್ಲ. ಹರ್ಭಜನ್ ಸಿಂಗ್ ಮತ್ತು ಶ್ರೀಶಾಂತ್ ಅತ್ಯುತ್ತಮ ಗೆಳೆಯರು. ಮೈದಾನದಲ್ಲಿ ಇವರಿಬ್ಬರನ್ನು ಹಿಡಿತದಲ್ಲಿಟ್ಟುಕೊಳ್ಳುವುದೇ ದೊಡ್ಡ ಸಾಹಸ. ಅದ್ರಲ್ಲೂ ಮಹೇಂದ್ರ ಸಿಂಗ್ ಧೋನಿಗೆ ಇವರಿಬ್ಬರನ್ನು ಕಂಟ್ರೋಲ್ ಮಾಡೋದೇ ಒಂದು ಸವಾಲಿನ ಕೆಲಸವಾಗಿತ್ತು. ಅದರಲ್ಲೂ ಆಸ್ಟ್ರೇಲಿಯಾ, ಪಾಕಿಸ್ತಾನ ವಿರುದ್ಧದ ಪಂದ್ಯಗಳಲ್ಲಿ ಇವರಿಬ್ಬರ ಆಕ್ರಮಣಕಾರಿ ಪ್ರವೃತ್ತಿಯನ್ನು ನೋಡುವುದು ಚೆಂದವಾದ್ರೂ ಚಿಕ್ಕ ಮಕ್ಕಳಂತೆ ಆಡ್ತಾರೆ ಅಲ್ವಾ ಅಂತ ಅನ್ನಿಸಿದ್ದು ಉಂಟು.
ಈ ನಡುವೆ ಶ್ರಿಶಾಂತ್ ಮತ್ತು ಹರ್ಭಜನ್ ಸಿಂಗ್ ಅವರು ಆಸ್ಟ್ರೇಲಿಯಾದ ಆಂಡ್ರ್ಯೂ ಸೈಮಂಡ್ಸ್ ಅವರನ್ನು ಮೈದಾನದಲ್ಲಿ ದ್ವೇಷ ಮಾಡುತ್ತಿದ್ದ ಪರಿಯೇ ವಿಚಿತ್ರವಾಗಿ ಅನ್ನಿಸುತ್ತಿತ್ತು. ಇಂತಹ ಆಪ್ತ ಸ್ನೇಹಿತರು 2008ರ ಚೊಚ್ಚಲ ಐಪಿಎಲ್ ನಲ್ಲಿ ಕಿತ್ತಾಡಿಕೊಂಡಿರೋದು ಇವರಿಬ್ಬರ ಕ್ರಿಕೆಟ್ ಬದುಕಿಗೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ. ಪಂದ್ಯದ ವೇಳೆ ಪರಸ್ಪರ ವಾಕ್ಸಮರ ಮಾಡಿಕೊಂಡಿದ್ದರು. ಅಲ್ಲದೆ ಶ್ರಿಶಾಂತ್ ವರ್ತನೆಯಿಂದ ತಾಳ್ಮೆ ಕಳೆದುಕೊಂಡ ಹರ್ಭಜನ್ ಸಿಂಗ್ ಮೈದಾನದಲ್ಲೇ ಕಪಾಳಮೋಕ್ಷ ಮಾಡಿದ್ದರು.
ಅದೇನೇ ಇರಲಿ, ಈಗ ಅದೆಲ್ಲಾ ಇತಿಹಾಸ ಪುಟ ಸೇರಿಕೊಂಡಿದೆ. ಇದೀಗ ಹರ್ಭಜನ್ ಸಿಂಗ್ ವಿದಾಯ ಹೇಳಿದ ಸುದ್ದಿ ಕೇಳಿದ ತಕ್ಷಣ ಶ್ರೀಶಾಂತ್ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಒಡನಾಡಿ ಹರ್ಭಜನ್ ಸಿಂಗ್ ಗೆ ಒಳ್ಳೆಯದಾಗಲಿ ಅಂತ ಹಾರೈಸಿದ್ದಾರೆ.
ನೀವು ಭಾರತಕ್ಕಾಗಿ ಮಾತ್ರವಲ್ಲ. ಕ್ರಿಕೆಟ್ ಜಗತ್ತಿನಲ್ಲಿ ಆಡಿರುವ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿದ್ದೀರಿ. ನಿಮ್ಮನ್ನು ತಿಳಿದುಕೊಳ್ಳುವುದು ಮತ್ತು ನಿಮ್ಮೊಂದಿಗೆ ಆಡಿರೋದು ನನಗೆ ದೊಡ್ಡ ಗೌರವ. ಭಜ್ಜಿಪಾ… ನಾನು ಬೌಲಿಂಗ್ ಮಾಡುವ ಮೊದಲು ಪಠಿಸುತ್ತಿದ್ದ ಮಂತ್ರಗಳ ಮುನ್ನ ನಿಮ್ಮ ಅಪ್ಪುಗೆ ಯಾವಾಗಲೂ ಸುಂದರವಾಗಿರುತ್ತಿತ್ತು. ನಿಮ್ಮ ಮೇಲೆ ನನಗೆ ಗೌರವ ಪ್ರೀತಿ ಇದೆ ಎಂದು ಟ್ವಿಟರ್ ನಲ್ಲಿ ಶ್ರೀಶಾಂತ್ ಬರೆದುಕೊಂಡಿದ್ದಾರೆ.
ಒಟ್ಟಿನಲ್ಲಿ ಹರ್ಭಜನ್ ಸಿಂಗ್ ಅವರ ಕ್ರಿಕೆಟ್ ಬದುಕಿಗೆ ವಿದಾಯ ಹೇಳುತ್ತಿದ್ದಂತೆ ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟಿಗರು ಸಾಮಾಜಿಕ ಜಾಲ ತಾಣದಲ್ಲಿ ತಮ್ಮ ನೆನಪುಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.