ಟೀಮ್ ಇಂಡಿಯಾ ವಿಶ್ವ ಕ್ರಿಕೆಟ್ನ ಬಲಿಷ್ಠ ತಂಡ ಅನ್ನುವುದರಲ್ಲಿ ಎರಡು ಮಾತಿಲ್ಲ. ಸ್ಟಾರ್ ಗಳನ್ನೇ ತುಂಬಿಕೊಂಡಿರುವ ಈ ತಂಡದಲ್ಲಿ ಪ್ರತಿಭೆಗಳಿಗೇನು ಕೊರತೆ ಇಲ್ಲ. ಆದರೆ ಕಾಂಬಿನೇಷನ್ ಆಯ್ಕೆಯಲ್ಲಿ ಮಾತ್ರ ಟೀಮ್ ಇಂಡಿಯಾ ಎಡವುತ್ತಿದೆ. ಪಾರ್ಲ್ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲೂ ಟೀಮ್ ಇಂಡಿಯಾ ಕಾಂಬಿನೇಷನ್ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡಿದೆ. ಲಭ್ಯವಿರುವ ಆಟಗಾರರನ್ನು ಬಳಸಿಕೊಳ್ಳುವಲ್ಲಿ ಎಡವಿದೆ.
ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಆಲ್ ರೌಂಡರ್ ವೆಂಕಟೇಶ್ ಅಯ್ಯರ್ಗೆ ಮೊದಲ ಅವಕಾಶ ನೀಡಿತ್ತು. ಆದರೆ ವೆಂಕಟೇಶ್ ಆಲ್ರೌಂಡರ್ ಆಗಿ ಗಮನ ಸೆಳೆಯುವ ಪ್ರದರ್ಶನ ನೀಡಲು ಅವಕಾಶ ಸಿಗಲಿಲ್ಲ. ಬೌಲಿಂಗ್ನಲ್ಲಿ ದುಬಾರಿ ಆಗುತ್ತಿದ್ದ ಚಹಲ್ ಮತ್ತು ಶಾರ್ದೂಲ್ ಬದಲಿಗೆ ವೆಂಕಟೇಶ್ ಅಯ್ಯರ್ಗೆ ಒಂದೆರಡು ಅವಕಾಶ ನೀಡಿದ್ದರೆ ಅವರ ಆತ್ಮವಿಶ್ವಾಸ ಹೆಚ್ಚುತ್ತಿತ್ತು. ಇನ್ನೊಂದು ಕಡೆಯಲ್ಲಿ ಅಯ್ಯರ್ ಪವರ್ ಹಿಟ್ಟರ್. ಪವರ್ ಪ್ಲೇನಲ್ಲಿ ಆಡುವ ಅವಕಾಶ ಸಿಕ್ಕರೆ ಯಾವ ರೀತಿ ಆಡಬಹುದು ಅನ್ನುವುದನ್ನು ಐಪಿಎಲ್ ನಲ್ಲಿ ತೋರಿಸಿಕೊಟ್ಟಿದ್ದರು. ಪಾರ್ಲ್ ನಲ್ಲಿ ಅಯ್ಯರ್ 6ನೇ ಕ್ರಮಾಂಕದಲ್ಲಿ ಆಡಲಿಳಿದು ಎಡವಿದ್ದರು.
ಇನ್ನೊಂದೆಡೆ ರುತುರಾಜ್ ಗಾಯಕ್ವಾಡ್ ಅದ್ಭುತ ಫಾರ್ಮ್ ನಲ್ಲಿದ್ದಾರೆ. ಗಾಯಕ್ವಾಡ್ಗೆ ಆರಂಭಿಕ ಸ್ಥಾನವನ್ನು ನೀಡಿ, ಅನುಭವಿ ರಾಹುಲ್ ಮಧ್ಯಮ ಸರದಿಯಲ್ಲಿ ಆಡುತ್ತಿದ್ದರೆ ಲೆಫ್-ರೈಟ್ ಕಾಂಬಿನೇಷನ್ ಜೊತೆ ಹೊಸ ಆಟಗಾರನಿಗೆ ಅವಕಾಶ ನೀಡಿದಂತಾಗುತ್ತಿತ್ತು. ಆದರೆ ಟೀಮ್ ಇಂಡಿಯಾ ಇಲ್ಲೂ ಎಡವಿತು.
ವೇಗದ ಪಿಚ್ನಲ್ಲಿ ಎರಡು ಸ್ಪಿನ್ನರ್ಗಳನ್ನು ಆರಿಸಿದ್ದು ಮತ್ತೊಂದು ಹೊಡೆತ ನೀಡಿತ್ತು. ಅಶ್ವಿನ್ ಮತ್ತು ಚಹಲ್ ಆಡಿದ್ದು ಏಕೆ ಅನ್ನುವುದು ಇನ್ನೂ ಆರ್ಥವಾಗಿಲ್ಲ. ಅಶ್ವಿನ್ 1 ವಿಕೆಟ್ ಪಡೆದು ಸಮಾಧಾನ ತಂದರೂ, ಚಹಲ್ ವಿಕೆಟ್ ಪಡೆಯುವಲ್ಲಿ ಎಡವಿದರು.
ಭುವನೇಶ್ವರ್ ಬದಲು ದೀಪಕ್ ಚಹರ್ ಆಡಬಹುದಿತ್ತು ಅನ್ನುವ ಚರ್ಚೆ ಶುರುವಾಗಿದೆ. ಆದರೆ ಸ್ವಿಂಗ್ ಕಂಡೀಷನ್ ಆಗಿಲ್ಲದೇ ಇರುವುದರಿಂದ ಭುವಿಗೆ ಮಣೆಹಾಕಲಾಗಿದೆ ಎಂದು ವಾದ ಮಾಡುವ ಕ್ರಿಕೆಟ್ ಪಂಡಿತರೂ ಇದ್ದಾರೆ. ಒಟ್ಟಿನಲ್ಲಿ ಟೀಮ್ ಇಂಡಿಯಾ ತನ್ನ ಕಾಂಬಿನೇಷನ್ ವಿಚಾರದಲ್ಲಿ ಎಡವಿ ಪಂದ್ಯವನ್ನೇ ಕಳೆದುಕೊಂಡಿತು ಅನ್ನುವುದು ಸುಳ್ಳಲ್ಲ.