ದುಡ್ಡು ಕೊಟ್ಟಿಲ್ಲ.. ಸಚಿನ್ ಆಡಲ್ಲ.. ರೋಡ್ ಸೇಫ್ಟಿ ವಲ್ರ್ಡ್ ಸಿರೀಸ್ ಆಯೋಜಕರಿಂದ ಮೋಸ..?
ಈ ಬಾರಿಯ ರೋಡ್ ಸೇಫ್ಟಿ ವಲ್ರ್ಡ್ ಸಿರೀಸ್ ಕ್ರಿಕೆಟ್ ಟೂರ್ನಿಯಲ್ಲಿ ಕ್ರಿಕೆಟ್ ದೇವ್ರು ಸಚಿನ್ ತೆಂಡುಲ್ಕರ್ ಅವರು ಆಡುತ್ತಿಲ್ಲ.
ಕಾರಣ ಇಷ್ಟೇ.. ಮೊದಲ ಆವೃತ್ತಿಯಲ್ಲಿ ಸಚಿನ್ ತೆಂಡುಲ್ಕರ್ ನೀಡಬೇಕಾಗಿದ್ದ ಹಣವನ್ನು ಆಯೋಜಕರು ಪಾವತಿಸಿಲ್ಲ. ಹೀಗಾಗಿ ಸಚಿನ್ ಈ ಬಾರಿಯ ಟೂರ್ನಿಯಲ್ಲಿ ಸಚಿನ್ ಆಡುತ್ತಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ.
2022ನೇ ಸಾಲಿನ ರೋಡ್ ಸೇಫ್ಟಿ ವಲ್ರ್ಡ್ ಸಿರೀಸ್ ಕ್ರಿಕೆಟ್ ಟೂರ್ನಿಯು ಯುಎಇನಲ್ಲಿ ಮಾರ್ಚ್ 1ರಿಂದ 19ರವರೆಗೆ ನಡೆಯಲಿದೆ.
ರೋಡ್ ಸೇಫ್ಟಿ ವಲ್ರ್ಡ್ ಸಿರೀಸ್ ನ ಮೊದಲ ಆವೃತ್ತಿಯ ಟೂರ್ನಿಗೆ ಸಚಿನ್ ತೆಂಡುಲ್ಕರ್ ಅವರು ಬ್ರ್ಯಾಂಡ್ ಅಂಬಾಸಿಡರ್ ಕೂಡ ಆಗಿದ್ದರು. ಲಿಟ್ಲ್ ಮಾಸ್ಟರ್ ಸುನೀಲ್ ಗವಾಸ್ಕರ್ ಅವರು ಟೂರ್ನಿಯ ಕಮೀಷನರ್ ಆಗಿದ್ದರು.
ಆದ್ರೆ ಆಯೋಜಕರು ಸಚಿನ್ ತೆಂಡುಲ್ಕರ್ ಸೇರಿದಂತೆ ಅನೇಕ ಆಟಗಾರರಿಗೆ ಹಣವನ್ನು ಪಾವತಿ ಮಾಡಿಲ್ಲ. ಬಾಂಗ್ಲಾದೇಶದ ಕ್ರಿಕೆಟರ್ ಗಳಿಗೆ ಕೂಡ ಹಣ ಸಂದಾಯವಾಗಿಲ್ಲ ಎಂದು ಬಾಂಗ್ಲಾದ ಮಾಧ್ಯಮವೊಂದು ವರದಿ ಮಾಡಿದೆ.
ಮಾಜಿ ಆಟಗಾರರು ಆಡುತ್ತಿರುವ ರೋಡ್ ಸೇಫ್ಟಿ ವಲ್ರ್ಡ್ ಸಿರೀಸ್ ನ ಮೊದಲ ಆವೃತ್ತಿಯ ಟೂರ್ನಿಯಲ್ಲಿ ಸಚಿನ್ ಸಾರಥ್ಯದ ಭಾರತ ತಂಡ ಪ್ರಶಸ್ತಿ ಗೆದ್ದುಕೊಂಡಿತ್ತು.
ಆಟಗಾರರ ಒಪ್ಪಂದ ಪ್ರಕಾರ ಶೇಖಡ 10ರಷ್ಟು ಹಣವನ್ನು ಗುತ್ತಿಗೆ ಒಪ್ಪಂದಕ್ಕೆ ಸಹಿ ಮಾಡುವಾಗ ನೀಡಬೇಕಿತ್ತು. ಇನ್ನು ಶೇ. 40ರಷ್ಟು ಹಣವನ್ನು ಫೆಬ್ರವರಿ 25, 2021ಕ್ಕೆ ನೀಡಬೇಕಾಗಿತ್ತು. ಇನ್ನುಳಿದ ಶೇ.50ರಷ್ಟು ಹಣವನ್ನು ಮಾರ್ಚ್ 31, 2021ರೊಳಗೆ ನೀಡಬೇಕಿತ್ತು. ಆದ್ರೆ ಸಂಘಟಕರು ಹಣವನ್ನು ಸಂದಾಯ ಮಾಡಿಲ್ಲ. ಈ ಬಗ್ಗೆ ಆಯೋಜಕರ ಕಡೆಯಿಂದ ಈ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡುತ್ತಿಲ್ಲ.