ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಹರಾಜಿನ ಬಗ್ಗೆ 15 ಸೀಸನ್ಗಳ ಬಳಿಕ ರಾಬಿನ್ ಉತ್ತಪ್ಪಗೆ ಜ್ಞಾನೋದಯವಾಗಿದೆ. 14 ಸೀಸನ್ಗಳ ಆಟಗಾರರು ಹರಾಜು ನೋಡಿ ಸುಮ್ಮನಿದ್ದ ಉತ್ತಪ್ಪ, ಈಗ ಐಪಿಎಲ್ ಆಟಗಾರರ ಹರಾಜು ಪ್ರಾಣಿಗಳ ಹರಾಜಿನಂತೆ ಕಾಣುತ್ತಿದೆ ಎಂದು ಕಿಡಿಕಾರಿದ್ದಾರೆ. ಉತ್ತಪ್ಪ ತನ್ನ ಹಳೆಯ ತಂಡ ಚೆನ್ನೈಗೆ ಮೂಲ ಬೆಲೆ 2 ಕೋಟಿ ರೂಪಾಯಿಗೆ ಹರಾಜಾಗಿದ್ದಾರೆ.
ಹರಾಜಿನ ವಿಧಾನ ನೋಡಿದರೆ ಎಲ್ಲ ಆಟಗಾರರಿಗೂ ಏನೋ ಹರಾಜು ಹಾಕಿ ಅದರಂತೆ ಖರೀದಿ ನಡೆಯುತ್ತಿದೆ ಎಂದು ಅನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಈ ವಿಧಾನ ಸರಿಯಿಲ್ಲ ಎಂದಿದ್ದಾರೆ. IPL ನಲ್ಲಿ ಬಿಡ್ಡಿಂಗ್ ಬದಲಿಗೆ ಕರಡು ನೀತಿಯನ್ನು ತರುವ ಅಗತ್ಯವನ್ನು ಸಮರ್ಥಿಸಿಕೊಂಡರು. ಆಟಗಾರರ ಹರಾಜು, ಒಂದು ರೀತಿ ನೀವು ಹಿಂದೆಂದೋ ಬರೆದಿದ್ದ ಪರೀಕ್ಷೆಗೆ ಇದೀಗ ಫಲಿತಾಂಶ ಪಡೆಯಲು ಕಾಯುತ್ತಿರುವ ಅನುಭವ ತರುತ್ತದೆ. ಈ ರೀತಿಯ ಹರಾಜು ಭಾರತದಲ್ಲಿ ಮಾತ್ರ ನಡೆಯುತ್ತದೆ ಎಂದು ನಾನು ಭಾವಿಸುತ್ತೇನೆ. ಯಾರ ಕಾರ್ಯನಿರ್ವಹಣೆಯಲ್ಲಿ ಯಾರ ಅಭಿಪ್ರಾಯಗಳು ಭಿನ್ನವಾಗಿರುತ್ತವೆ ಎಂಬುದು ಬೇರೆ ವಿಷಯ. ಆದರೆ ಯಾರು ಮತ್ತು ಎಷ್ಟು ಬೆಲೆಗೆ ಮಾರಾಟವಾಗುತ್ತಾರೆ ಎಂಬುದು ಸಂಪೂರ್ಣವಾಗಿ ವಿಭಿನ್ನ ವಿಷಯವಾಗಿದೆ.
ಮಾರಾಟವಾಗದ ಆಟಗಾರರಿಗೆ ಏನಾಗುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಹರಾಜಿನಲ್ಲಿ ಮಾರಾಟವಾಗದೇ ಉಳಿಯುವ ಆಟಗಾರರು ಅನುಭವಿಸುವ ಮಾನಸಿಕ ಒತ್ತಡವನ್ನು ಯಾರೊಬ್ಬರೂ ಅಂದಾಜಿಸಲು ಸಾಧ್ಯವಿಲ್ಲ. ಇದು ಆಟಗಾರರನ್ನು ಮಾನಸಿಕವಾಗಿ ಸೋಲಿಸುತ್ತದೆ. ಒಬ್ಬ ಕ್ರಿಕೆಟಿಗನಾಗಿ ನಿಮ್ಮ ಯೋಗ್ಯತೆಗೆ ಬೇರೊಬ್ಬರು ಎಷ್ಟು ಬೆಲೆ ಕೊಡುತ್ತಿದ್ದಾರೆ ಎಂಬ ಸ್ಥಿತಿಗೆ ಬಂದು ನಿಂತುಬಿಡುತ್ತದೆ. ಇದೊಂದು ಹುಚ್ಚುತನದ ವಿಧಾನವಾಗಿದೆ ಎಂದು ಉತ್ತಪ್ಪ ಐಪಿಎಲ್ ಹರಾಜಿನ ವಿಧಾನದ ಬಗ್ಗೆ ಕಿಡಿ ಕಾರಿದ್ದಾರೆ.