ನಾಯಕ ಮಯಾಂಕ್ ಅಗರ್ವಾಲ್(249) ಭರ್ಜರಿ ದ್ವಿಶತಕದ ನೆರವಿನಿಂದ ಸೌರಾಷ್ಟ್ರ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ಮೊದಲ ಇನ್ನಿಂಗ್ಸ್ನಲ್ಲಿ ಉತ್ತಮ ಮೊತ್ತ ಕಲೆಹಾಕಿದೆ.
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಗುರುವಾರ ಮಯಂಕ್ ಅಗರ್ವಾಲ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. ನಾಯಕನಾಗಿ ಜವಾಬ್ದಾರಿಯ ಆಟವಾಡಿದ ಮಯಂಕ್ ದ್ವಿಶತಕ ಬಾರಿಸಿ ತಂಡಕ್ಕೆ ಆಸರೆಯಾದರು. ಇದರ ಪರಿಣಾಮ ಕರ್ನಾಟಕ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 133.3 ಓವರ್ನಲ್ಲಿ 407 ರನ್ಗಳಿಗೆ ಆಲೌಟ್ ಆಯಿತು.
ಪ್ರಬಲ ಸೌರಾಷ್ಟ್ರ ತಂಡದ ಬೌಲಿಂಗ್ ದಾಳಿಗೆ ಸಿಲುಕಿದ ಕರ್ನಾಟಕದ ಬ್ಯಾಟ್ಸ್ಮನ್ಗಳು ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿದರು. ಪರಿಣಾಮ ಪಂದ್ಯದ ಮೊದಲ ದಿನ 112ಕ್ಕೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಜವಾಬ್ದಾರಿಯುತ ಆಟವಾಡಿದ ನಾಯಕ ಮಯಂಕ್ ಅಗರ್ವಾಲ್, ಅತಿಥೇಯ ತಂಡಕ್ಕಾಗಿ ಏಕಾಂಗಿಯಾಗಿ ಹೋರಾಡಿದರು.
ಎದುರಾಳಿ ಬೌಲಿಂಗ್ ದಾಳಿಗೆ ದಿಟ್ಟ ಉತ್ತರ ನೀಡಿದ ಮಯಂಕ್, ಮೊದಲ ದಿನದಂದು ಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದರು. 2ನೇ ದಿನವೂ ಜವಾಬ್ದಾರಿಯ ಆಟ ಮುಂದುವರಿಸಿದ ಆರಂಭಿಕ ಬ್ಯಾಟ್ಸ್ಮನ್, 429 ಬಾಲ್ಗಳಲ್ಲಿ 28 ಬೌಂಡರಿ ಹಾಗೂ 6 ಸಿಕ್ಸ್ ನೆರವಿನಿಂದ 249 ರನ್ಗಳಿಸಿ ಕೊನೆಯವರಾಗಿ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ನಾಯಕನಿಗೆ ಉತ್ತಮ ಸಾಥ್ ನೀಡಿದ ಶ್ರೀನಿವಾಸ್ ಶರತ್(66) ರನ್ಗಳಿಸಿ ತಂಡಕ್ಕೆ ನೆರವಾದರು.ಇವರಿಬ್ಬರ ಜವಾಬ್ದಾರಿಯ ಆಟದಿಂದ ಕರ್ನಾಟಕ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 133.3 ಓವರ್ನಲ್ಲಿ 407 ರನ್ಗಳ ಉತ್ತಮ ಮೊತ್ತ ಕಲೆಹಾಕಿತು. ಸೌರಾಷ್ಟ್ರ ಪರ ಚೇತನ್ ಸಕಾರಿಯಾ ಹಾಗೂ ಕುಶಾಂಗ್ ಪಟೇಲ್ ತಲಾ 3 ವಿಕೆಟ್ ಪಡೆದು ಮಿಂಚಿದರು. ಪ್ರಸಕ್ತ ರಣಜಿ ಸೀಸನ್ನಲ್ಲಿ ಭರ್ಜರಿ ಬ್ಯಾಟಿಂಗ್ ಫಾರ್ಮ್ ಹೊಂದಿರುವ ಮಯಂಕ್ ಅಗರ್ವಾಲ್, 91.60ರ ಸರಾಸರಿಯಲ್ಲಿ 800ಕ್ಕೂ ಅಧಿಕ ರನ್ಗಳಿಸಿದ್ದಾರೆ.
Karnataka, Saurashtra, Mayank Agarwal, Ranji Trophy, Double Hundred