Rahul Dravid – ಜಸ್ಪ್ರಿತ್ ಬೂಮ್ರಾ ಫಿಟ್ ಆಗ್ತಾರೆ.. ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ – ರಾಹುಲ್ ದ್ರಾವಿಡ್
ಟೀಮ್ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರು ಗಾಯಗೊಂಡಿರುವ ವೇಗಿ ಜಸ್ಪ್ರಿತ್ ಬೂಮ್ರಾ ಅವರನ್ನು ಬಿಟ್ಟುಕೊಡಲು ಸಿದ್ಧರಿಲ್ಲ.
ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 16ರಿಂದ ಆರಂಭವಾಗಲಿರುವ ಐಸಿಸಿ ಟಿ-20 ವಿಶ್ವಕಪ್ ಗೆ ಜಸ್ಪ್ರಿತ್ ಬೂಮ್ರಾ ಅವರು ಲಭ್ಯರಿರುತ್ತಾರೆ. ಟೂರ್ನಿಯ ವೇಳೆಗೆ ಅವರು ಫಿಟ್ ಆಗಿರುತ್ತಾರೆ ಎಂಬ ಆಶಾಭಾವನೆಯನ್ನು ಟೀಮ್ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ ವ್ಯಕ್ತಪಡಿಸಿದ್ದಾರೆ.
ಸದ್ಯ ಜಸ್ಪ್ರಿತ್ ಬೂಮ್ರಾ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆನ್ನು ನೋವಿನಿಂದ ಬಳಲುತ್ತಿರುವ ಬೂಮ್ರಾ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಯಿಂದ ಹೊರಗುಳಿದಿದ್ದಾರೆ. ಅವರ ಬದಲು ಮಹಮ್ಮದ್ ಸೀರಾಜ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ನಾನು ಜಸ್ಪ್ರಿತ್ ಬೂಮ್ರಾ ಅವರ ವೈದ್ಯಕಿಯ ವರದಿಗಳನ್ನು ಆಳವಾಗಿ ನೋಡಿಲ್ಲ. ಈ ಬಗ್ಗೆ ನಾನು ಕೂಡ ತಜ್ಞರ ಮೇಲೆ ಅವಲಂಬಿತವಾಗಿದ್ದೇನೆ. ಈಗಾಗಲೇ ಬೂಮ್ರಾ ಅವರನ್ನು ದಕ್ಷಿಣ ಆಫ್ರಿಕಾ ಸರಣಿಯಿಂದ ಹೊರಗುಳಿಸಲಾಗಿದೆ. ಹಾಗೇ ಅಧಿಕೃತವಾಗಿ ಈಗ ಏನನ್ನು ಹೇಳಲು ಸಾಧ್ಯವಿಲ್ಲ. ಒಂದು ಬಾರಿ ಅಧಿಕೃತ ಮಾಹಿತಿ ಬಂದ ನಂತರವಷ್ಟೇ ಹೇಳಲು ಸಾಧ್ಯ. ಅಲ್ಲಿಯವರೆಗೆ ನಾನು ಆಶಾಭಾವನೆಯಲ್ಲೇ ಇರುತ್ತೇನೆ. ಬೂಮ್ರಾ ತಂಡದಲ್ಲಿರಬೇಕು ಎಂಬದೇ ನಮ್ಮ ಆಶಯ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.
ನಮ್ಮ ಯೋಜನೆಗಳ ಬಗ್ಗೆ ಸಾಕಷ್ಟು ಅಪಸ್ವರಗಳು ಕೇಳಿಬಂದಿದ್ದವು. ಆದ್ರೆ ನಮಗೆ ನಮ್ಮ ನಿರ್ಧಾರ ಮತ್ತು ಯೋಜನೆಗಳ ಸ್ಪಷ್ಟತೆ ಇತ್ತು. ವಿಶ್ವಕಪ್ ತಂಡದಲ್ಲಿರುವ ಪ್ರತಿ ಆಟಗಾರರಿಗೂ ತಮ್ಮ ಪಾತ್ರಗಳ ಬಗ್ಗೆ ಸಂಪೂರ್ಣ ಸ್ಪಷ್ಟತೆ ಇದೆ. ಗಾಯಗಳು ತಂಡದಲ್ಲಿರುವುದು ಸಹಜ. ಅದನ್ನು ಬಿಟ್ಟು ಎಲ್ಲವೂ ಸರಿಯಾದ ಹಾದಿಯಲ್ಲೇ ಸಾಗುತ್ತಿದೆ ಎಂದು ರಾಹುಲ್ ದ್ರಾವಿಡ್ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.