ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿರುವ ಪ್ರಸಿದ್ಧ ಕೃಷ್ಣ ಮೊನಚಾದ ದಾಳಿ ನಡೆಸಿದ ಪರಿಣಾಮ ಕರ್ನಾಟಕ ರಣಜಿ ಟೂರ್ನಿಯ ಎಲೈಟ್ ಸಿ ಗುಂಪಿನ ಪಂದ್ಯದಲ್ಲಿ ಜಮ್ಮು ಕಾಶ್ಮೀರ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದೆ.
ಶುಕ್ರವಾರ ಎರಡನೇ ದಿನದ ಆಟವನ್ನು 8 ವಿಕೆಟ್ ಗೆ 268 ರನ್ ಗಳಿಂದ ಮುಂದುವರಿಸಿದ ಕರ್ನಾಟಕ 302 ರನ್ ಗಳಿಗೆ ಆಲೌಟ್ ಆಯಿತು. ಸ್ಟಾರ್ ಆಟಗಾರ ಕರುಣ್ ನಾಯರ್ 175 ರನ್ ಗಳಿಗೆ ಔಟ್ ಆದರು. ರೋನಿತ್ ಮೋರೆ 23 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಜಮ್ಮು ಕಾಶ್ಮೀರ್ ಪರ ಪರ್ವೆಜ್ ರಸೂಲ್ 4, ಮುಜ್ತಾಬ್ ಯೂಸುಫ್ 2 ವಿಕೆಟ್ ಕಬಳಿಸಿದರು.
ಜಮ್ಮು-ಕಾಶ್ಮೀರ್ ಪರ ಮೊದಲ ಇನ್ನಿಂಗ್ಸ್ ಆರಂಭಿಸಿದ ಆರಂಭಿಕರು ತಂಡಕ್ಕೆ ಅರ್ಧಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾದರು. ಕಮ್ರಾನ್ ಇಕ್ಬಾಲ್ (35), ಜತಿನ್ ವಾಧ್ವಾನ್ (25) ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಉಳಿದ ಬ್ಯಾಟರ್ ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು.
ಅಂತಾರಾಷ್ಟ್ರೀಯ ತಂಡಗಳಲ್ಲಿ ಆಡಿದ ಅನುಭವ ಹೊಂದಿರುವ ಪ್ರಸಿದ್ಧ ಕೃಷ್ಣ ಬಿಗುವಿನ ದಾಳಿ ನಡೆಸಿ ಅಬ್ಬರಿಸಿದರು. ಇವರ ಶಿಸ್ತು ಬದ್ಧ ದಾಳಿಯನ್ನು ಎದುರಿಸುವಲ್ಲಿ ಜಮ್ಮು ತಂಡ ಎಡವಿತು. ಇವರು 12 ಓವರ್ ಬೌಲ್ ಮಾಡಿ 35 ರನ್ ನೀಡಿ 6 ವಿಕೆಟ್ ಕಬಳಿಸಿದರು. ವಿದ್ಯಾಧರ್ ಪಟೇಲ್ 2 ವಿಕೆಟ್ ಪಡೆದು ಮಿಂಚಿದರು.
ಎರಡನೇ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕದ ಆರಂಭ ಭರ್ಜರಿಯಾಗಿತ್ತು. ರವಿಕುಮಾರ್ ಸಮರ್ಥ್ ಹಾಗೂ ದೇವದತ್ ಪಡೀಕ್ಕಲ್ ಜೋಡಿ ಮೊದಲ ವಿಕೆಟ್ ಗೆ 106 ರನ್ ಗಳ ಜೊತೆಯಾಟದ ಕಾಣಿಕೆ ನೀಡಿದರು. ಸಮರ್ಥ್ 62 ರನ್ ಬಾರಿಸಿ ಔಟ್ ಆದರೆ, ದೇವದತ್ 49 ರನ್ ಗಳಿಗೆ ಆಟ ಮುಗಿಸಿದರು. ಕರುಣ್ ನಾಯರ್ ಅಜೇಯ 10, ಕೆ.ಸಿದ್ಧಾರ್ಥ್ ಅಜೇಯ 1 ರನ್ ಬಾರಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.